ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗುತ್ತದೆ. ಇಲ್ಲಿದೆ ಸಾಮಾಜಿಕ ಹೋರಾಟಗಾರ್ತಿ ಕೆ ನೀಲಾ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ಪ್ರಜಾಪ್ರಭುತ್ವ ಬಲಗೊಳಿಸಲು ಮತ ಚಲಾವಣೆ ಒಂದು ಬಲವಾದ ಮಾಧ್ಯಮವಾದ್ದರಿಂದ ಜನವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮತ ಚಲಾವಣೆ ಮುಖ್ಯ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಭಾರತದಲ್ಲಿ ಫ್ಯಾಸಿಸಂನ ಲಕ್ಷಣಗಳು ಕ್ರೌರ್ಯದ ಸ್ವರೂಪ ಪಡೆದುಕೊಳ್ಳುತ್ತಿವೆ. ರೈತರಿಂದ ಭೂಮಿ ಕಿತ್ತುಕೊಂಡು ಕಾರ್ಪೋರೇಟ್ ಕೈಗೆ ಕೊಡಲಾಗುತ್ತಿದೆ. ಬಡತನ, ನಿರುದ್ಯೋಗ ಹೆಚ್ಚಳವಾಗುತ್ತಿದೆ. ಕೋಮುವಾದಿಗಳ ಕರಾಳತೆಯಲ್ಲಿ ಕನ್ನಡದ ನೆಲದ ಅಸ್ಮಿತೆ ನಲುಗುತ್ತಿದೆ. ಆದ್ದರಿಂದ ಈ ಬಾರಿಯ ಚುನಾವಣೆ ದೇಶದ ಸಂಪತ್ತನ್ನು ಲೂಟಿಕೋರರಿಂದ ಉಳಿಸಲು ಬಹಳ ಮುಖ್ಯ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಬರಲಿರುವ ಸರಕಾರವು ಕೇವಲ ಅಧಿಕಾರ ನಡೆಸದೆ, ಪ್ರಜಾಸತ್ತಾತ್ಮಕ ಆಡಳಿತ ಕೊಡಲು ಸಾಧ್ಯವಾಗಬೇಕು. ಸಂವಿಧಾನ ಸಂರಕ್ಷಿಸುತ್ತ, ಬಲಪಡಿಸುತ್ತ, ಅನ್ನ-ಅರಿವು, ಜ್ಞಾನ-ವಿಜ್ಞಾನ, ಸಮತೆ-ಮಮತೆಯಲ್ಲಿ ಕರ್ನಾಟಕದ ಕಂಪು ಹರಡಲು ಸರಕಾರ ಶ್ರಮಿಸಬೇಕು.