ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಹಂಪಿ ವಿವಿಯ ಪ್ರಾಧ್ಯಾಪಕ ಡಾ ಚಿನ್ನಸ್ವಾಮಿ ಸೋಸಲೆ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ಈ ಭೂಮಿಗೆ ಮನುಷ್ಯ ದೇಹವಾಗಿ ಹುಟ್ಟುವುದೇ ಒಂದು ದಾನ. ಆ ದಾನದ ದೇಹ ಉಳಿಯಬೇಕಾದರೆ ಆಹಾರ ನೀರು ಗಾಳಿ ಎಷ್ಟು ಮುಖ್ಯವೋ – ಅಷ್ಟೇ ಮುಖ್ಯ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲಲು ಮತದಾನವು ಮುಖ್ಯ. ಮೊದಲಿನದು ಜೀವಸೆಲೆ, ಎರಡನೆಯದು ಜೀವನಾಧಾರ. ಹೀಗೆ ಜೀವನಾಧಾರವಾದ ಮತದಾನವನ್ನುತಪ್ಪದೇ ಎಲ್ಲರೂ ಮಾಡಬೇಕು.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಜಾಗತೀಕರಣ ಕೈಗಾರಿಕೀಕರಣ ಉದಾರೀಕರಣ, ಖಾಸಗೀಕರಣಗಳೆಂಬ ವಿವಿಧ ಕಾರಣಗಳಿಂದ ಮುಕ್ತರಾಗಿ ಸಂವಿಧಾನದ ಆಶಯದಂತೆ ಪ್ರಬುದ್ಧ ಭಾರತವನ್ನು ಕಟ್ಟಲು ಇಂದಿನ ಸಂದರ್ಭದ ಚುನಾವಣೆ ಮುಖ್ಯವಾಗುತ್ತದೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ʼಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳುʼ ಎಂಬ ಸಂವಿಧಾನದ ತತ್ವದ ಅಡಿಯಲ್ಲಿ ಸುಖ ಶಾಂತಿಯಿಂದ ಸದೃಢವಾದ ನಾಡು ಕಟ್ಟುವ ಸರ್ಕಾರ ಬರಬೇಕು.