- ನ್ಯಾಯಾಧೀಶರಿಗೆ ನ್ಯಾಯಮೂರ್ತಿಗಳಿಂದ ʻಕ್ಲಾಸ್ʼ
- ತೀರ್ಪು ಜಾರಿಯಾಗದೇ ಇರುವುದಕ್ಕೆ ಅಸಮಾಧಾನ
ಅಪರೂಪದ ಮಹತ್ವದ ಬೆಳವಣಿಗೆಯೊಂದರಲ್ಲಿ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು, ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರ ʻಕ್ಲಾಸ್ʼ ತೆಗೆದುಕೊಂಡಿದೆ.
“ಅನಗತ್ಯವಾಗಿ ಜನರನ್ನು ಜೈಲಿಗೆ ಕಳುಹಿಸುವ ನ್ಯಾಯಾಧೀಶರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅವರ ಕೌಶಲ್ಯವನ್ನು ಮೇಲ್ದರ್ಜೆಗೇರಿಸುವ ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗಳಿಗೆ ಕಳುಹಿಸಬೇಕು” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಸತೇಂದರ್ ಕುಮಾರ್ ಆಂಟಿಲ್ ಮತ್ತು ಸಿಬಿಐ ನಡುವಿನ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು 10 ತಿಂಗಳು ಕಳೆದರೂ ಜಾರಿಯಾಗದೇ ಇರುವುದರ ಕುರಿತು ಆಂಟಿಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ, ಎರಡು ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
“ಅಗತ್ಯವಿಲ್ಲದಿದ್ದರೂ ಜನರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವುದು ಕರ್ತವ್ಯ ಲೋಪ. ಈ ಕಾರಣದಿಂದಾಗಿ ಸಂತ್ರಸ್ತರು ಮೇಲ್ಮನವಿ ಸಲ್ಲಿಸುವಂತಾಗಿ ಮತ್ತಷ್ಟು ವ್ಯಾಜ್ಯಗಳ ಸೃಷ್ಟಿಯಾಗುತ್ತವೆ. ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ದೃಷ್ಟಿಯಲ್ಲಿ ಅಧೀನ ನ್ಯಾಯಾಲಯಗಳು ಈ ನೆಲದ ಕಾನೂನನ್ನು ಪಾಲಿಸುತ್ತಿವೆಯೇ ಎಂಬುದನ್ನು ಗಮನಿಸುವುದು ಹೈಕೋರ್ಟ್ಗಳ ಕರ್ತವ್ಯ. ಕೆಲ ನ್ಯಾಯಾಧೀಶರು ಅಂತಹ ಆದೇಶ ನೀಡಿದರೆ ಅವರ ನ್ಯಾಯದಾನದ ಕಾರ್ಯವನ್ನು ಹಿಂಪಡೆದು ಅವರ ಕೌಶಲ್ಯ ವೃದ್ಧಿಗಾಗಿ ಅವರನ್ನು ಸ್ವಲ್ಪ ಸಮಯದವರೆಗೆ ನ್ಯಾಯಾಂಗ ಅಕಾಡೆಮಿಗಳಿಗೂ ಕಳುಹಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.
ಉತ್ತರ ಪ್ರದೇಶದ ನ್ಯಾಯಾಲಯಗಳು ಹೆಚ್ಚಾಗಿ ಇಂತಹ ಆದೇಶ ನೀಡುತ್ತವೆ ಎಂಬ ಅಂಶ ಗಮನಿಸಿದ ನ್ಯಾಯಾಲಯ, ಅಲಾಹಾಬಾದ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಬಗ್ಗೆ ತಿಳಿಸುವಂತೆ ಸೂಚಿಸಿದೆ. ಇಂತಹ ಹೆಚ್ಚಿನ ಆದೇಶಗಳು ಉತ್ತರಪ್ರದೇಶದಿಂದ ಅದರಲ್ಲಿಯೂ ಹತ್ರಾಸ್, ಗಾಜಿಯಾಬಾದ್ ಹಾಗೂ ಲಖನೌ ನ್ಯಾಯಾಲಯಗಳು ಹೊರಡಿಸಿದ ಆದೇಶಗಳು ಕಾನೂನು ಅಜ್ಞಾನದಿಂದ ಕೂಡಿವೆ ಎಂದಿರುವ ಪೀಠ, ಈ ವಿಚಾರವನ್ನು ಅಲಹಾಬಾದ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಸೂಚಿಸಿದೆ.