ನೂತನವಾಗಿ ಖರೀದಿಸಿದ ಕಾರು ಪದೇ ಪದೇ ʻಬ್ರೇಕ್ ಡೌನ್ʼ ಆದ ಕಾರಣ, ತಾಳ್ಮೆ ಕಳೆದುಕೊಂಡ ಗ್ರಾಹಕರೊಬ್ಬರು ತನ್ನ ಕಾರನ್ನು ಎರಡು ಕತ್ತೆಗಳ ಸಹಾಯದಿಂದ ಶೋರೋಮ್ಗೆ ಎಳೆತಂದ ಘಟನೆ ರಾಜಸ್ಥಾನದ ಉದಯ್ಪುರ್ನಲ್ಲಿ ನಡೆದಿದೆ.
ಉದಯಪುರದ ಸುಂದರವಾಸ್ ಪ್ರದೇಶದ ನಿವಾಸಿ ಶಂಕರಲಾಲ್ ಎಂಬುವವರು ಮಾದ್ರಿ ಕೈಗಾರಿಕಾ ಪ್ರದೇಶದಲ್ಲಿರವ ಹ್ಯೂಂಡೈ ಶೋರೂಮ್ನಿಂದ 17.50 ಲಕ್ಷ ರೂಪಾಯಿ ಮೌಲ್ಯದ ಕ್ರೆಟಾ ಮಾಡೆಲ್ ಹೊಸ ಕಾರನ್ನು ಖರೀದಿಸಿದ್ದರು.
ಆದರೆ ಆರಂಭದಲ್ಲೇ ಕಾರಿನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳಲು ಆರಂಭವಾಗಿತ್ತು. ಈ ಕುರಿತು ಕಾರಿನ ಮಾಲೀಕರು ಅಧಿಕೃತ ಸೇವಾ ಕೇಂದ್ರದ ಪ್ರತಿನಿಧಿಗಳ ಗಮನಕ್ಕೆ ತಂದಿದ್ದರು.
ಸಮಸ್ಯೆ ಸರಿಪಡಿಸಲು ವಿತರಕರನ್ನು ಹಲವು ಬಾರಿ ಸಂಪರ್ಕಿಸಲಾಯಿತಾದರೂ ಸಹ, ತೃಪ್ತಿಕರವಾದ ಪರಿಹಾರ ದೊರೆಯಲಿಲ್ಲ. ಎರಡು ದಿನಗಳ ಹಿಂದೆ ಕೌಟುಂಬಿಕ ಕಾರ್ಯಕ್ರಮದ ವೇಳೆ ಕಾರನ್ನು ಸ್ಟಾರ್ಟ್ ಮಾಡಲು ಹಲವು ಬಾರಿ ತಳ್ಳಬೇಕಾಯಿತು ಎಂದು ಶಂಕರಲಾಲ್ ಹೇಳಿದ್ದಾರೆ.
ʻಬ್ಯಾಟರಿ ಕಡಿಮೆಯಾದ ಕಾರಣ ಸಮಸ್ಯೆಯಾಗಿದೆʼ ಎಂದು ಉತ್ತರಿಸಿದ್ದ ಶೋರೋಮ್ ಪ್ರತಿನಿಧಿ, ಬ್ಯಾಟರಿ ಚಾರ್ಜ್ ಆಗಲು ಸ್ವಲ್ಪ ದೂರದವರೆಗೆ ಕಾರನ್ನು ಓಡಿಸಲು ಸಲಹೆ ನೀಡಿದ್ದರು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಸಮಸ್ಯೆ ಮುಂದುವರೆದಿತ್ತು.
ಇದರಿಂದ ಹತಾಶೆಗೆ ಒಳಗಾದ ಶಂಕರಲಾಲ್, ಬ್ಯಾಂಡ್ ತಂಡದವರನ್ನು ಕರೆಸಿ ತಮ್ಮ ವಾಹನವನ್ನು ಎರಡು ಕತ್ತೆಗಳ ಸಹಾಯದಿಂದ ಡೀಲರ್ ಬಳಿಗೆ ಎಳೆದೊಯ್ದಿದ್ದಾರೆ. ಸದ್ಯ ಕಾರು ಶೋರೂಂನಲ್ಲಿದ್ದು, ಸಮಸ್ಯೆ ಇರುವ ಕಾರನ್ನು ಬದಲಾಯಿಸಿ ಹೊಸ ಕಾರನ್ನು ನೀಡುವಂತೆ ಮಾಲೀಕ ಶಂಕರಲಾಲ್ ಒತ್ತಾಯಿಸಿದ್ದಾರೆ.
ಕತ್ತೆಗಳು ಕಾರನ್ನು ಎಳೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.