ಅರಸನೊಬ್ಬ ರಾಜದಂಡವಿಡಿದು ಗಂಭೀರ ನಡಿಗೆಯಲಿ
ನಡೆದಿದ್ದಾನೆ ತನ್ನ ಪ್ರಭುತ್ವದ ಮಹತಿಯ ಮಹಲಿನಲಿ
ಹಿಂದೆ ಮುಂದೆ ಸುತ್ತ ಮುತ್ತ ಖಾಷಾಯ ವಸ್ತ್ರಧಾರಿಗಳು
ಜಟಾಧಾರಿಗಳು -ಭಸ್ಮ ಕುಂಕುಮ ಭೂಷಿತ ದೇಹಗಳು
ಸಾವಿರಾರು ಮಂದಿ ವೀಕ್ಷಿಸುತ್ತಾರೆ ಎವೆಯಿಕ್ಕದೆ
ವಿಚಿತ್ರ ದೃಶ್ಯವಿದು
ಅರಸ ಘೋಷಿಸಿದ್ದಾನೆ-ಈ ಮಹಲು ಪ್ರಜಾಪ್ರಭುತ್ವದ ಭವನವೆಂದು
ಆದರೆ, ನಡೆಯುತ್ತಿದೆಯಲ್ಲಿ
ಹವನ ಹೋಮ ಧೂಪ ಧೂಮದ ನಡುವೆ
ಪಟ್ಟಾಭಿಷೇಕ
ಮಹಲಿನ ಹೊರಗೆ
ಪ್ರಭುತ್ವ ಹಾಗೂ ವಿರೋಧಿಗಳ ನಡುವೆ
ನಡೆದಿದೆ ಜಟ್ಟಿ ಕಾಳಗ
ರಾಜಾಜ್ಞೆಯಿದೆ-
ಪಟ್ಟಾಭಿಷೇಕ ವಿರೋಧಿಗಳು ಹದ್ದುಮೀರಿ
ದುರಾಚಾರಕ್ಕಿಳಿದು ತಡೆಯೊಡ್ಡಿದರೆ
ಕಠಿಣ ಶಿಕ್ಷೆಯ ಆದೇಶ
ಆಧಿಪತ್ಯದ ಹಿಂಸೆಯನ್ನಪ್ರಶ್ನಿಸುವ ಜನ, ಮನದ ಮೇಲೆ
ಅಧಿಕಾರದ ಕ್ರೌರ್ಯಭರಿತ ಶಕ್ತಿಯ ಕಟ್ಟೆಯೊಡೆಯಲಾಗಿದೆ
ಕ್ರೌರ್ಯ ಹರಿದಿದೆ
ಅನಿಯಂತ್ರಿತ ದುರಾಚಾರದ ದುಷ್ಟ ರಂಪಾಟದಲ್ಲಿರುವ
ರಾಜಾನುಯಾಯಿಗಳು ರಾಜಾಶ್ರಯದಲ್ಲಿ ರಕ್ಷಿತರು
ನಡೆದಿದ್ದಾನೆ ಅರಸ ಗಂಭೀರನಾಗಿ
ಕರದೊಳಗಿನ ರಾಜದಂಡಕ್ಕಿದೆ ಪುರಾಣಲೇಪಿತ ಪುಣ್ಯ ಘಳ ಘಳ ಹೊಳಪು
ಪ್ರಜೆಗಳ ಕರದ ಜಮಾವಣೆ ಅದ್ದೂರಿಯಾಗಿ ವ್ಯಯವಾಗುತ್ತಿದೆ
ಗರಿಬಿಚ್ಚಿದ ನವಿಲುಗಳು
ಕೊಂಬೆ ಚಾಚಿ ಹಬ್ಬಿದ ಆಲದ ಮರಗಳು
ಅರಳಿದ ತಾವರೆಗಳು
ಸ್ತಬ್ಧವಾಗಿ ಬಂಧಿಯಾಗಿವೆ ಮಹಲಿನ ಗೋಡೆಯಲಿ
ಪಸರಿಸಿದೆ ಮಹಲ ತುಂಬಾ ಭವ್ಯ ಐಷಾರಾಮದ ಕಂಪು
ಅರಸನ ಕಣ್ಣು ಕುಕ್ಕುವ ವೈಭೋಗ
ಜನರನ್ನ ಕುರುಡು ಮಾಡಿದೆ
ಅವನ ಕಂಚಿನ ಕಂಠ ಸಿರಿಯ ಕಟುಮಾಧುರ್ಯ
ನಿದ್ದೆಯ ಅಮಲಿಗೆ ಜಾರಿಸಿದೆ
ಗಂಭೀರನಾಗಿ ನಡೆದಿದ್ದಾನೆ ಅವನು
ಅವರ ದೇಹಗಳ ಮೆಟ್ಟಲಾಗಿಸಿ
ಅವನನುಯಾಯಿಗಳು ಹಿಂಬಾಲಿಸಿದ್ದಾರೆ
ರಕ್ತದ ರಂಗೋಲಿ ಹರಡುತ್ತಾ
ಅವನು ಪಟ್ಟಾಭಿಷಿಕ್ತ ಸಿಂಹಾಸನ ರೂಢನಾದ.
ಇಂಗ್ಲಿಷ್ ಮೂಲ : ಪರಿಣಿತಾ ಶೆಟ್ಟಿ
ಕನ್ನಡಕ್ಕೆ : ರಾಜಲಕ್ಷ್ಮಿ/ವರ್ಷಾ