ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದಾರೆಂದರೆ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಅವರನ್ನು ಮನೆಗೆ ಕರೆದು ಅವರೊಂದಿಗೆ ಟೀ ಕುಡಿದ ಪ್ರಧಾನಿಗೆ ಈಗ ಅವರ ನೆರವಿಗೆ ಹೋಗಬೇಕೆಂಬ ಅರಿವಿಲ್ಲವೇ?
“ಪೊಲೀಸರು ಕುಡಿದು ಬಂದು ನಮ್ಮನ್ನು ನಿಂದಿಸಿದರು. ಇಂತಹ ದಿನ ನೋಡಲು ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ?” ಇದು ದೇಶಕ್ಕೆ ಬಂಗಾರದ ಪದಕ ಗೆದ್ದು ಕೊಟ್ಟು ವಿಶ್ವದ ಮುಂದೆ ಭಾರತದ ಕೀರ್ತಿಪತಾಕೆ ಎತ್ತರಕ್ಕೆ ಹಾರುವಂತೆ ಮಾಡಿದ್ದ ವಿನೇಶಾ ಪೋಗಟ್ ಅವರ ನೋವಿನ ನುಡಿ.
ಒಲಂಪಿಕ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತರಾದ ವಿನೇಶಾ ಫೋಗಟ್, ಸಾಕ್ಷಿ ಮಲ್ಲಿಕ್, ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದವನ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ದಿಟ್ಟತನದಿಂದ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿದ ಈ ಆಟಗಾರ್ತಿಯರು ಇಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋಗಳನ್ನು ಮಾಡುವುದು ಬಿಟ್ಟು ಆ ಹೆಂಗೂಸುಗಳ ಮನ್ ಕಿ ಬಾತ್ ಏನೆಂದು ಕೇಳಬಾರದೇ?
ಮಧ್ಯರಾತ್ರಿ ಬಂದ ಪೊಲೀಸರು ಬೀಸಿದ ಲಾಟಿಗಳಿಂದ ಕುಸ್ತಿ ಪಟುಗಳ ತಲೆಗೆ ಪೆಟ್ಟಾಗಿದೆ. ಈ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ದೇಶದ ಮಹಿಳೆಯರನ್ನು ಯಾವ ಸ್ಥಿತಿಗೆ ದೂಡುತ್ತಿವೆ? ಕುಡಿದು ಬಂದ ಪೊಲೀಸರು ಮಹಿಳೆಯರ ಮೇಲೆ ತೋರಿದ ದುರ್ವರ್ತನೆ ಮತ್ತು ದೌರ್ಜನ್ಯಗಳನ್ನು ಇಡೀ ದೇಶ ಖಂಡಿಸುತ್ತಿದೆ. ಈ ಕ್ರೀಡಾಪಟುಗಳು ದೂರು ನೀಡಿ ಮೂರು ತಿಂಗಳಾದರೂ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸದಿರುವ ಹಿನ್ನೆಲೆಯಲ್ಲಿ ಈಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.
“ಬೇಟಿ ಬಚಾವೋ ಬೇಟಿ ಪಢಾವೋ” ಎನ್ನುವ ಪ್ರಧಾನಿಗೆ ಇದು ತಿಳಿದೇ ಇಲ್ಲವೇ? ಮಹಿಳೆಯರ ಸುರಕ್ಷತೆ ಅವರ ಕರ್ತವ್ಯವಲ್ಲವೇ? ಅವರ ಪಕ್ಷ ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಕೊಲೆಗಡುಕರನ್ನು ರಕ್ಷಿಸುವ ಅಡಗುತಾಣವೇ? ಧರಣಿ ನಿರತರಿಗೆ ನೈತಿಕ ಧೈರ್ಯ ತುಂಬಲು ಬಂದ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹುಡಾ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಅನ್ಯಾಯ. ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ನನ್ನು ಇಲ್ಲಿಯವರೆಗೂ ಯಾಕೆ ಬಂಧಿಸಿಲ್ಲ ಎಂಬುದು ಜನತೆಯ ಪ್ರಶ್ನೆ.
ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲಿ ಪೊಲೀಸರ ಹೊಡೆತ ತಿನ್ನುತ್ತಾರೆಂದರೆ ಇದರ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಮನೆಗೆ ಕರೆದು ಅವರೊಂದಿಗೆ ಟೀ ಕುಡಿದ ಪ್ರಧಾನಿಗೆ ಈಗ ಅವರ ನೆರವಿಗೆ ಹೋಗಬೇಕೆಂಬ ಅರಿವಿಲ್ಲವೇ?
ಕುಸ್ತಿಪಟುಗಳ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. ಜೆ.ಎನ್.ಯು ವಿದ್ಯಾರ್ಥಿಗಳೂ, ರೈತರೂ ಬೆಂಬಲ ಸೂಚಿಸಿದ್ದಾರೆ. ಮೊದಲು “ಹೀಗೆ ಪ್ರತಿಭಟಿಸುವುದು ಅಶಿಸ್ತಿನ ವರ್ತನೆ” ಎಂದು ಹೇಳಿದ್ದ ಹಿರಿಯ ಅಥ್ಲೆಟ್ ಹಾಗೂ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಕೂಡ ಜಂತರ್ ಮಂತರ್ಗೆ ಹೋಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರವರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ಈ ದೇಶದ ಗೌರವಾನ್ವಿತ ಮಹಿಳೆಯರ ಘನತೆಯ ಪ್ರಶ್ನೆಯಾಗಿದೆ ಎಂದು ಸಾನಿಯಾ ಹೇಳಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ ಏಳು ಕ್ರೀಡಾಳುಗಳಲ್ಲಿ ಒಬ್ಬ ಅಪ್ರಾಪ್ತ ಹುಡುಗಿಯೂ ಇದ್ದಾಳೆ!
ನಮಗೆ ನಮ್ಮ ಸಂವಿಧಾನ ಮುಖ್ಯ. ಸಂವಿಧಾನ ಪರವಾದ ನಡೆ ಸರ್ಕಾರ ತೋರಿಸದಿದ್ದರೆ, ಜನರು ತಿರುಗಿ ಬೀಳುವ ದಿನಗಳು ದೂರವಿಲ್ಲ.
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ