ಹೋರಾಟಗಾರರು ಮತ್ತು ವಿಚಾರವಾದಿಗಳ ಕೊಲೆ ಸಂಚಿಗೆ ಬಲಿಯಾದವರಲ್ಲಿ ಗೌರಿ- ನಾಲ್ಕನೆಯವರು. ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಮೇರು ವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಕೊಲೆಯಾಗಿದ್ದರು. ಗೌರಿ ಹತ್ಯೆಗೆ ವೃತ್ತಿ ವೈಷಮ್ಯ, ಕಚೇರಿಯೊಳಗಿನ ಭಿನ್ನಾಭಿಪ್ರಾಯ, ನಕ್ಸಲ್ ಹೋರಾಟ, ಕೌಟುಂಬಿಕ ವೈಮನಸ್ಸು- ಯಾವುದೂ ಕಾರಣವಾಗಿರಲಿಲ್ಲ ಎಂಬುದನ್ನು ಎಸ್ಐಟಿ ಕಂಡುಕೊಂಡಿತು
ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಸಮಾನತೆಗಾಗಿ ಅವಿರತ ಶ್ರಮಿಸಿದ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ (ಸೆಪ್ಟೆಂಬರ್ 5, 2023) ಆರು ವರ್ಷಗಳು ಪೂರ್ಣಗೊಂಡಿವೆ. ಇಡೀ ಜಗತ್ತಿನಾದ್ಯಂತ ಮಾರ್ದನಿಸಿದ ಪ್ರಕರಣಗಳಲ್ಲಿ ಗೌರಿ ಲಂಕೇಶ್ ಹತ್ಯೆಯೂ ಒಂದು. ಪೊಲೀಸ್ ವ್ಯವಸ್ಥೆಗೆ ಸವಾಲಾಗಿದ್ದ ಈ ಪ್ರಕರಣ ಈಗ ಯಾವ ಹಂತದಲ್ಲಿದೆ? ಕೊಲೆ ಮಾಡಿದರು ಯಾರು? ಏನಾಯ್ತು ಪ್ರಕರಣ ? ಇತ್ಯಾದಿ ಪ್ರಶ್ನೆಗಳನ್ನು ಅನೇಕ ಸಂದರ್ಭಗಳಲ್ಲಿ ಜನಸಾಮಾನ್ಯರು ಕೇಳುವುದುಂಟು.
ಅಂದು ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಐಟಿ (ವಿಶೇಷ ತನಿಖಾ ದಳ) ರಚಿಸಿತು. ಐಜಿಪಿ ರ್ಯಾಂಕ್ನ ಬಿ.ಕೆ.ಸಿಂಗ್ ಅದರ ನೇತೃತ್ವ ವಹಿಸಿದರು. ಐಪಿಎಸ್ ರ್ಯಾಂಕ್ನ ಅನುಚೇತ್ ತನಿಖಾಧಿಕಾರಿಯಾದರು. ಸುಮಾರು 52ಕ್ಕೂ ಹೆಚ್ಚು ಜನರ ಸಂಖ್ಯಾಬಲದ ಈ ತಂಡ, ತಕ್ಷಣವೇ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿತು. ಗೌರಿ ಅವರ ಮನೆಯಲ್ಲಿನ ಸಿಸಿಟಿವಿ, ಅವರ ಮನೆಯ ಎದುರಲ್ಲಿ ಹತ್ಯೆಯನ್ನು ಯಾರಾದರೂ ನೋಡಿದ್ದಾರಾ? ಈ ಸುತ್ತಮುತ್ತಲು ಯಾರಾದರೂ ಓಡಾಡಿದ್ದಾರಾ? ಯಾವ ಗುಂಡುಗಳನ್ನು ಬಳಸಲಾಗಿದೆ? ಈ ಗುಂಡುಗಳಿಗೆ ಯಾವ ಬಗೆಯ ಪಿಸ್ತೂಲು ಬಳಸಲಾಗುತ್ತದೆ? ಇತ್ಯಾದಿ ಮಾಹಿತಿ ಸಂಗ್ರಹಿಸಿದರು. ಗೌರಿಯವರಿಗೆ ಮೂರು ಗುಂಡುಗಳು ತಗುಲಿದ್ದವು. ಈ ಗುಂಡುಗಳು ನಿರ್ದಿಷ್ಟ ಪಿಸ್ತೂಲಿನಿಂದಲೇ ಬಂದಿವೆ ಎಂಬುದು ಸ್ಪಷ್ಟವಾಗಿತ್ತು.
ಹೋರಾಟಗಾರರು ಮತ್ತು ವಿಚಾರವಾದಿಗಳ ಕೊಲೆ ಸಂಚಿಗೆ ಬಲಿಯಾದವರಲ್ಲಿ ಗೌರಿ- ನಾಲ್ಕನೆಯವರು. ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಮೇರು ವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಈ ಮೊದಲೇ ಕೊಲೆಯಾಗಿದ್ದರು. ಗೌರಿ ಹತ್ಯೆಗೆ ವೃತ್ತಿ ವೈಷಮ್ಯ, ಕಚೇರಿಯೊಳಗಿನ ಭಿನ್ನಾಭಿಪ್ರಾಯ, ನಕ್ಸಲ್ ಹೋರಾಟ, ಕೌಟುಂಬಿಕ ವೈಮನಸ್ಸು- ಯಾವುದೂ ಕಾರಣವಾಗಿರಲಿಲ್ಲ ಎಂಬುದನ್ನು ಎಸ್ಐಟಿ ಕಂಡುಕೊಂಡಿತು.
ಈ ದೇಶದ ಶೋಷಿತ, ಅಲ್ಪಸಂಖ್ಯಾತರ, ಮಹಿಳಾ ಸಮುದಾಯದ ಮೇಲೆ ನಿರಂತರವಾಗಿ ಹಿಂದುತ್ವ ರಾಜಕಾರಣ ನಡೆಸುತ್ತಿರುವ ದಾಳಿಯ ವಿರುದ್ಧ ಗೌರಿ ಲಂಕೇಶ್ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಸೈದ್ಧಾಂತಿಕ ದ್ವೇಷದ ಆಯಾಮವನ್ನು ಎಸ್ಐಟಿ ಕೈಗೆತ್ತಿಕೊಂಡಿತು.
ಆರೋಪಿಗಳ ಪತ್ತೆಗೆ ಹರಸಾಹಸ
ಆರೋಪಿಗಳ ಪತ್ತೆಗಾಗಿ ಸಾವಿರಾರು ಫೋನ್ ಕೆರೆಗಳನ್ನು ಪೊಲೀಸರು ಕೂತು ಕೇಳಿಸಿಕೊಂಡಿದ್ದಾರೆ. ಹಿಂದುತ್ವ ಕಾರ್ಯಕರ್ತರ ನಡುವೆ ಏನಾದರೂ ಸಂಭಾಷಣೆ ನಡೆದಿರಬಹುದಾ ಎಂದು ತಿಳಿಯಲು 52 ಮಂದಿ ಪೊಲೀಸರು ಹಗಲು ರಾತ್ರಿ ಫೋನ್ ಕರೆಗಳನ್ನು ಆಲಿಸಿದ್ದರು. 2017ರ ನವೆಂಬರ್, ಡಿಸೆಂಬರ್ ವೇಳೆಗೆ ಒಂದು ಸಣ್ಣ ಸುಳಿವು ಪೊಲೀಸರಿಗೆ ಸಿಗುತ್ತದೆ. ಮಂಡ್ಯದ ಕೆ.ಟಿ.ನವೀನ್ ಕುಮಾರ್ ಎಂಬಾತನ ಕರೆ ಸಂಚಲನಕ್ಕೆ ಕಾರಣವಾಗುತ್ತದೆ.
ಈತ ತನ್ನದೇ ಹಿಂದುತ್ವ ಸಂಘಟನೆ ಮಾಡಿಕೊಂಡು, ಆರ್ಎಸ್ಎಸ್, ಹಿಂದೂ ಜನಜಾಗೃತಿ ವೇದಿಕೆ ಮತ್ತು ಮಹಾರಾಷ್ಟ್ರದ ಸನಾತನ ಸಂಸ್ಥೆಯ ಜೊತೆ ಸಂಪರ್ಕದಲ್ಲಿದ್ದ. ಸ್ನೇಹಿತನೊಬ್ಬನ ಜೊತೆ ಮಾತನಾಡುತ್ತಾ, “ಎಲ್ಲಿ ಹೋಗಿದ್ದೆ ಇಷ್ಟು ದಿವಸ?” ಎಂದು ಕೇಳುತ್ತಾನೆ. ಅದಕ್ಕೆ ನವೀನ್ ಸ್ನೇಹಿತ, “ಒಂದು ದೊಡ್ಡ ಕೆಲಸ ಮಾಡಲು ಹೋಗಿದ್ದೆ. ಹೀಗಾಗಿ ತಲೆಮರೆಸಿಕೊಳ್ಳಬೇಕಾಗಿತ್ತು” ಎಂದು ಉತ್ತರ ಕೊಡುತ್ತಾನೆ. ಏನು ದೊಡ್ಡ ಕೆಲಸ ಎಂದು ಕೇಳುತ್ತಾನೆ. “ಗೊತ್ತಲ್ಲಪ್ಪ ಗೌರಿ ಲಂಕೇಶ್ ಕೊಲೆ” ಎಂಬರ್ಥದಲ್ಲಿ ಮಾತನಾಡುತ್ತಾನೆ. ಇದನ್ನು ಕೇಳಿಸಿಕೊಂಡ ಪೊಲೀಸರು ಕೆ.ಟಿ.ನವೀನ್ಕುಮಾರ್ ಫೋನ್ ಕರೆಗಳ ಮೇಲೆ ನಿಗಾ ವಹಿಸುತ್ತಾರೆ. ನವೀನ್ನ ಎಲ್ಲ ಕರೆಗಳು ಕಣ್ಗಾವಲಿಗೆ ಒಳಪಡುತ್ತವೆ. ಒಬ್ಬ ನಿರ್ದಿಷ್ಟವಾದ ವ್ಯಕ್ತಿ ಟೆಲಿಫೋನ್ ಬೂತ್ಗಳಿಂದ ಈತನಿಗೆ ಪದೇ ಪದೇ ಕರೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬರುತ್ತದೆ. ಹೀಗೆ ಪೋನ್ ಮಾಡುತ್ತಿರುವವನು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪಣತೊಡುತ್ತಾರೆ.

ಇದರ ನಡುವೆ ವಿಚಾರವಾದಿ ಚಿಂತಕ ಕೆ.ಎಸ್.ಭಗವಾನ್ ಅವರ ಹತ್ಯೆಗಾಗಿ ಬಂದೂಕು ಖರೀದಿಸಲು ಕೆ.ಟಿ.ನವೀನ್ಕುಮಾರ್ ಬೆಂಗಳೂರಿಗೆ ಬರುತ್ತಾನೆ ಎಂಬುದು ಫೋನ್ ಕರೆಗಳ ಮೂಲಕ ಸ್ಪಷ್ಟವಾಗುತ್ತದೆ. ಕೆ.ಎಸ್.ಭಗವಾನ್ ಹತ್ಯೆಯ ಸಂಚಿನ ಪ್ರಕರಣದಲ್ಲಿ 2018ರ ಫೆಬ್ರುವರಿಯಲ್ಲಿ ನವೀನ್ಕುಮಾರ್ ಬಂಧನವಾಗುತ್ತದೆ
ಆತನನ್ನು ವಿಚಾರಣೆಗೆ ಒಳಪಡಿಸಿದಾಗ- “ನನಗೆ ಫೋನ್ ಮಾಡುವವನು ಪ್ರವೀಣ್ ಎಂಬಾತ” ಎಂದು ಬಾಯಿ ಬಿಡುತ್ತಾನೆ. ಬ್ರಹ್ಮಾವರದಲ್ಲಿ ನಡೆಯುವ ಮದುವೆ ಕಾರ್ಯಕ್ರಮವೊಂದರಲ್ಲಿ ಈ ಪಿಸ್ತೂಲನ್ನು ಪ್ರವೀಣ್ಗೆ ನವೀನ್ ಕೊಡಬೇಕಾಗಿತ್ತು ಎಂಬುದು ತಿಳಿಯುತ್ತದೆ. ಗೌರಿ ಹತ್ಯೆಯ ವರದಿ ಮಾಧ್ಯಮಗಳಲ್ಲಿ ಬಂದಿದ್ದರಿಂದ ಬ್ರಹ್ಮಾವರದ ಮದುವೆಗೆ ಯಾರೂ ಬರುವುದಿಲ್ಲ. ಪ್ರವೀಣ್ ಎಂಬಾತನ ದನಿ ಈಗಾಗಲೇ ಪತ್ತೆಯಾಗಿದ್ದರಿಂದ ಅದರ ಸುತ್ತಲಿನ ತನಿಖೆಯನ್ನು ಚುರುಕುಗೊಳಿಸಲಾಗುತ್ತದೆ. ಆತನನ್ನು ಪತ್ತೆ ಹಚ್ಚಿದರೂ ತಕ್ಷಣಕ್ಕೆ ಬಂಧಿಸುವುದಿಲ್ಲ. ಈತ ಮಂಡ್ಯದಲ್ಲಿ ನವೀನ್ ಕುಮಾರ್ನನ್ನು ಭೇಟಿಯಾಗಿದ್ದ ಎಂಬುದು ತಿಳಿಯುತ್ತದೆ.
ಈ ಪ್ರವೀಣ್ ದಾವಣಗೆರೆಯಲ್ಲಿರುವ ಬಾಯ್ ಸಾಬ್ ಎಂಬ ಅಡ್ಡಹೆಸರಿನಲ್ಲಿರುವ, ಕೊಲೆಗಡುಕ ಗುಂಪಿನ ಇನ್ನೊಬ್ಬ ಹಿರಿಯ ಸದಸ್ಯನನ್ನು ಭೇಟಿಯಾಗಲು ಹೋಗುತ್ತಿರುವುದು ಸಂಭಾಷಣೆಯಿಂದ ಸ್ಪಷ್ಟವಾಗುತ್ತದೆ. ಉಡುಪಿಯಿಂದ ಹೊರಟಿದ್ದ ಆತನನ್ನು ಬಂಧಿಸಲಾಗುತ್ತದೆ. ಜೊತೆಗೆ ಆತ ಯಾರನ್ನು ಭೇಟಿಯಾಗಲು ಉದ್ದೇಶಿಸಿದ್ದಾನೆಯೋ ಅವರನ್ನು ತೋರಿಸಲು ಹೇಳಲಾಗುತ್ತದೆ. ಆಗ ಕರ್ನಾಟಕ ಪೊಲೀಸರಿಗೆ ಗೌರಿ ಹತ್ಯೆ ಪ್ರಕರಣದಲ್ಲಿ ಬಹುದೊಡ್ಡ ಬ್ರೇಕ್ ಸಿಗುತ್ತದೆ.
ಪ್ರವೀಣ್ನ ನಿಜವಾದ ಹೆಸರು ಸುಜಿತ್ ಕುಮಾರ್. ಶಿವಮೊಗ್ಗದ ಸೊರಬದ ವ್ಯಕ್ತಿ. ಈ ಸುಜಿತ್ ಸನಾತನ ಸಂಸ್ಥೆಯ ಸಂಘಟಕ. ಕೊಲೆಯಂತಹ ಕೃತ್ಯಗಳಿಗೆ ಜನರನ್ನು ನೇಮಕ ಮಾಡಿಕೊಳ್ಳುತ್ತಿದ್ದದ್ದು ಈತನೇ. ನವೀನ್ಕುಮಾರ್ನನ್ನು ನೇಮಕ ಮಾಡಿಕೊಂಡಿದ್ದು ಇದೇ ಸುಜಿತ್. ಇವನಿಗೆ ಮಾರ್ಗದರ್ಶನ, ನಿರ್ದೇಶನ ನೀಡುತ್ತಿದ್ದದ್ದು ಸನಾತನ ಸಂಸ್ಥೆಯ ಪ್ರಧಾನ ನಾಯಕ ಮಹಾರಾಷ್ಟ್ರದ ಅಮೋಲ್ ಕಾಳೆ. ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಉತ್ತರ ಕರ್ನಾಟಕದ ಮನೋಹರ್ ಯಡವೆ ಎಂಬ ಮೂವರನ್ನು ನಂತರ ಬಂಧಿಸಲಾಗುತ್ತದೆ.

ಗೌರಿ ಹತ್ಯೆಯಷ್ಟೇ ಅಲ್ಲ, ದಾಬೋಲ್ಕರ್, ಪಾನ್ಸಾರೆ, ಎಂ.ಎಂ.ಕಲ್ಬುರ್ಗಿ ಈ ನಾಲ್ಕು ಹತ್ಯೆಗಳಿಗೆ ಮಾಸ್ಟರ್ ಮೈಂಡ್ ಈ ಅಮಿತ್. ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಮನೋಹರ್ ಯಡವೆ– ಈ ಮೂವರ ಡೈರಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ. ಆ ಡೈರಿಯಲ್ಲಿ ಕೋಡ್ ಲಾಂಗ್ವೇಜ್ನಲ್ಲಿ ಹಲವಾರು ಟಿಪ್ಪಣಿಗಳು, ಹಲವಾರು ಫೋನ್ ನಂಬರ್ಗಳು, ಬೇರೆ ಬೇರೆಯವರ ಹೆಸರುಗಳು ಇರುತ್ತವೆ. ತಕ್ಷಣವೇ ಇವುಗಳನ್ನು ಡೀಕೋಡ್ ಮಾಡಲು ಸಾಧ್ಯವಾಗುವುದಿಲ್ಲ. ಬಂಧಿತರು ವಿಚಾರಣೆಗೆ ಸಹಕರಿಸುವುದಿಲ್ಲ. ಏನಾದರೂ ಪ್ರಶ್ನಿಸಿದರೆ ಭಜನೆ ಮಾಡಲು ಶುರು ಮಾಡುತ್ತಾರೆ. ಆ ನಂತರದಲ್ಲಿ ಪೊಲೀಸರು ಬಗೆಬಗೆಯಾದ ತಂತ್ರಗಳನ್ನು ಬಳಸುತ್ತಾರೆ. ಸೈದ್ಧಾಂತಿಕ ಚರ್ಚೆಗಳನ್ನು ಆರಂಭಿಸಿ, ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಅಮಿತ್ ದೇಗ್ವೇಕರ್- “ಗೌರಿಯನ್ನು ಹತ್ಯೆ ಮಾಡಿದ್ದು ಒಬ್ಬ ಬಿಲ್ಡರ್” ಎಂದು ಬಾಯಿ ಬಿಡುತ್ತಾನೆ. ಬಿಲ್ಡರ್ ಎಂಬ ಹೆಸರಿನ ಯಾವುದಾದರೂ ಅಂಶ ಡೈರಿಯಲ್ಲಿ ಇದೆಯಾ ಎಂದು ಪೊಲೀಸರು ಹುಡುಕುತ್ತಾರೆ. ಆಗ ಬಿಲ್ಡರ್ ಎಂಬ ಹೆಸರಲ್ಲಿ ಒಂದು ಫೋನ್ ನಂಬರ್ ಸಿಗುತ್ತದೆ. ಈ ನಂಬರ್ ಉತ್ತರ ಕರ್ನಾಟಕದ ಸಿಂಧಗಿಯಲ್ಲಿನ ಒಬ್ಬ ವ್ಯಕ್ತಿಯ ಹೆಸರಲ್ಲಿದೆ ಎಂಬುದು ಗೊತ್ತಾಗುತ್ತದೆ. ತಕ್ಷಣವೇ ಪೊಲೀಸರು ಸಿಂಧಗಿಯತ್ತ ಗಮನ ಹರಿಸುತ್ತಾರೆ. ಅಲ್ಲಿ ಹಿಂದುತ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ, ಈಗಾಗಲೇ ಪ್ರಕರಣಗಳನ್ನು ಎದುರಿಸುತ್ತಿರುವವರ ಪಟ್ಟಿಯನ್ನು ತೆಗೆದುಕೊಳ್ಳುತ್ತಾರೆ.
ಗೌರಿಯವರ ಮನೆಯ ಸಿಸಿಟಿವಿ ಮೂಲಕ ಹಂತಕನ ಎತ್ತರ, ಆಕಾರ ಮತ್ತು ಗಾತ್ರವನ್ನು ಪತ್ತೆ ಹಚ್ಚಲಾಗಿರುತ್ತದೆ. ತಲೆಗೆ ಹೆಲ್ಮೇಟ್ ಧರಿಸಿದ್ದರಿಂದ ಮುಖ ಚಹರೆ ಪತ್ತೆಯಾಗಿರಲಿಲ್ಲ. ಆದರೆ ಅಂದಾಜು 5 ಅಡಿ 1 ಇಂಚಿನ ಒಬ್ಬ ವ್ಯಕ್ತಿ ಗುಂಡು ಹಾರಿಸಿದ್ದಾನೆ ಎಂಬುದನ್ನು ಫೋರೆನ್ಸಿಕ್ ಸಾಕ್ಷಿಗಳು ದೃಢಪಡಿಸಿರುತ್ತವೆ. ಇದನ್ನೇ ಮುಂದಿಟ್ಟುಕೊಂಡು ಈ ರೀತಿಯ ವ್ಯಕ್ತಿ ಸಿಂಧಗಿಯಲ್ಲಿ ಯಾರಿದ್ದಾರೆ ಎಂದು ಹುಡುಕುತ್ತಾರೆ. ಆಗ ಸಿಗುವ ಹೆಸರೇ ’ಪರಶುರಾಮ್ ವಾಗ್ಮೋರೆ’. ಈತ ಪ್ರಮೋದ್ ಮುತಾಲಿಕರ ಶ್ರೀರಾಮಸೇನೆಯಲ್ಲಿ ಹಿಂದೆ ಸಕ್ರಿಯನಾಗಿದ್ದ. ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಿ ಮುಸ್ಲಿಮರ ತಲೆಗೆ ಕಟ್ಟಿದ್ದು, ಹುಬ್ಬಳ್ಳಿ ಕೋರ್ಟ್ನಲ್ಲಿ ಒಂದು ಬಾಂಬ್ ಬ್ಲಾಸ್ಟ್ ಮಾಡಿದ್ದು- ಇಂತಹ ಪ್ರಕರಣಗಳಲ್ಲಿ ಪರಶುರಾಮ್ ವಾಗ್ಮೋರೆ ಭಾಗಿಯಾಗಿದ್ದ. ಇದೆಲ್ಲದರ ಆಧಾರದಲ್ಲಿ ಪರಶುರಾಮ್ ವಾಗ್ಮೋರೆಯನ್ನು 2018ರ ಮೇ ಕೊನೆಯಲ್ಲಿ ಅರೆಸ್ಟ್ ಮಾಡುತ್ತಾರೆ.

ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಪರಶುರಾಮ್ ವಾಗ್ಮೋರೆ, “ಓ ನೀವು ಬಂದ್ರಾ? ನೀವು ಯಾವತ್ತಾದರೂ ಬರ್ತೀರಾ ಅಂತ ಗೊತ್ತಿತ್ತು” ಎಂದು ಹೇಳಿರುವುದಾಗಿ ಚಾರ್ಜ್ ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಪರಶುರಾಮ್ ವಾಗ್ಮೋರೆಯ ಬಂಧನದ ಬಳಿಕ ಅಮೂಲ್ ಕಾಳೆ ತುಂಬಾ ವಿಚಲಿತನಾಗುತ್ತಾನೆ.
ಪರಶುರಾಮ್ ವಾಗ್ಮೋರೆ ಶೂಟರ್ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಈತನಿಗೆ ಸಹಾಯ ಮಾಡಿದವರು ಯಾರು? ಎಂಬುದನ್ನು ತಿಳಿಯಬೇಕಾಗುತ್ತದೆ. ತನ್ನನ್ನು ಬೈಕ್ನಲ್ಲಿ ಕರೆದುಕೊಂಡು ಬಂದಿದ್ದು ಹುಬ್ಬಳ್ಳಿಯ ವ್ಯಕ್ತಿ ಎಂದು ಬಾಯಿಬಿಡುತ್ತಾನೆ ಪರಶುರಾಮ್. “ಕರೆದುಕೊಂಡು ಬಂದವನ ಕಾಲಿನಲ್ಲಿರುವ ನರಗಳು ನೂಡಲ್ ರೀತಿ ಇದ್ದವು” ಎಂದು ವಿವರಿಸುತ್ತಾನೆ. ಇದು ’ವೆರಿಕೊ ವೇಯ್ನ್ಸ್’- ಉಬ್ಬಿರುವ ರಕ್ತನಾಳದ ಸಮಸ್ಯೆಯಾಗಿರುತ್ತದೆ. ಮತ್ತೆ ಪೊಲೀಸರು ಹುಬ್ಬಳ್ಳಿಯಲ್ಲಿ ಹಿಂದುತ್ವ ಚಟುವಟಿಕೆಯಲ್ಲಿ ಸಕ್ರಿಯರಾಗಿರುವವರು, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿರುವವರ ಪಟ್ಟಿಯನ್ನೆಲ್ಲ ಮಾಡಿದಾಗ ಅಮಿತ್ ಬಡ್ಡಿ ಎಂಬಾತನಿಗೆ ವರಿಕೋ ವೇಯ್ನ್ಸ್ ಇರುವುದು ತಿಳಿಯುತ್ತದೆ. ಹುಬ್ಬಳ್ಳಿಯ ಹಲವು ಗಲಭೆಗಳಲ್ಲಿ ಈತ ಪ್ರಕರಣಗಳನ್ನು ಎದುರಿಸುತ್ತಿರುತ್ತಾನೆ. ಗಣೇಶ್ ಮಿಷ್ಕಿನ್ ಎಂಬ ಇನ್ನೊಬ್ಬ ವ್ಯಕ್ತಿ ಇವರ ಜೊತೆಯಲ್ಲಿದ್ದ ಎಂಬುದು ಬಯಲಾಗುತ್ತದೆ.
ಬಳಸಿದ ಪಿಸ್ತೂಲ್ ಎಲ್ಲಿದೆ, ಬಳಸಿದ ವಾಹನ ಎಲ್ಲಿದೆ, ಯಾವ ವಾಹನ ಬಳಸಿದ್ದಾರೆ, ಅವರು ಇಲ್ಲಿರಲು ಅವಕಾಶ ಮಾಡಿಕೊಟ್ಟವರು ಯಾರು- ಈ ರೀತಿಯ ತನಿಖೆಯನ್ನು ಶುರು ಮಾಡಿದಾಗ ಒಂದೊಂದೇ ಡೈರಿಗಳು ತೆರೆದುಕೊಳ್ಳುತ್ತವೆ. ದಕ್ಷಿಣ ಕನ್ನಡದ ಸಂಪಾಜೆಯ ಮೋಹನ್ ನಾಯಕ್ ಎಂಬಾತನಿಗೂ ಸನಾತನ ಸಂಸ್ಥೆಗೂ ಬಹಳ ಹತ್ತಿರದ ಸಂಬಂಧ. ಬೆಂಗಳೂರು- ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿ ಆಕ್ಯುಪಂಕ್ಚರ್ ವೃತ್ತಿಯ ಹೆಸರಲ್ಲಿ ಒಂದು ಮನೆಯನ್ನು ಪಡೆದಿರುವುದು ತಿಳಿಯುತ್ತದೆ. ಗೌರಿಯವರ ಮನೆ ಮಾರ್ಗದಲ್ಲೇ ಬಾಡಿಗೆ ಮನೆ ಪಡೆಯಲಾಗಿರುತ್ತದೆ. ಕುಮಾರ್ ಎಂಬಾತ ಮಾಗಡಿ ರಸ್ತೆಯಲ್ಲಿನ ಸೀಗೇಹಳ್ಳಿಯಲ್ಲಿ ಇನ್ನೊಂದು ಮನೆಯನ್ನು ಮಾಡಿಕೊಂಡಿರುತ್ತಾನೆ. ಹಂತಕನಿಗೆ ಬಂದೂಕಿನ ತರಬೇತಿಯನ್ನು ನೀಡಿದ್ದು ರಾಜೇಶ್ ಬಂಗೇರ ಎಂಬ ವ್ಯಕ್ತಿ. ಆತ ಕೊಡಗಿನವರು ಮತ್ತು ಸರ್ಕಾರಿ ನೌಕರ ಕೂಡ ಆಗಿದ್ದನು. ಬೆಳಗಾವಿಯ ಕಾಡು ಪ್ರದೇಶಕ್ಕೆ ಭರತ್ ಕುರ್ಣೇ ಎಂಬ ವ್ಯಕ್ತಿ ಇವರನ್ನೆಲ್ಲ ಕರೆದುಕೊಂಡು ಹೋಗಿ ಬಂದೂಕು ತರಬೇತಿಗೆ ಸಹಕರಿಸಿರುತ್ತಾನೆ.
ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೇಕರ್ ಇವರೆಲ್ಲ ಮಹಾರಾಷ್ಟ್ರದವರು. ಅವರೇಕೆ ಇಲ್ಲಿಗೆ ಬಂದರು? ಅವರಿಗೂ ಗೌರಿಯವರಿಗೂ ಏನು ಸಂಬಂಧ?- ಇದನ್ನು ನೋಡಿದರೆ ಇದೆಲ್ಲದರ ಹಿಂದೆ ಒಂದು ಸೈದ್ಧಾಂತಿಕವಾದ ಮತ್ತು ಸಂಘಟಿತವಾದ ಅಪರಾಧ ನಡೆಸುವ ಗುಂಪಿದೆ ಎಂಬುದು ತಿಳಿದುಬರುತ್ತದೆ. ಪೊಲೀಸರು ದಾಳಿ ಮಾಡಿ ಆರೋಪಿಗಳ ಮನೆಯಿಂದ ವಶಕ್ಕೆ ಪಡೆದ ಎಲ್ಲರ ಮನೆಗಳಲ್ಲಿ ಸನಾತನ ಸಂಸ್ಥೆಯ ’ಕ್ಷಾತ್ರಧರ್ಮ ಸಾಧನ’ ಎಂಬ ಕೃತಿ ಸಿಗುತ್ತದೆ. ಇವರೆಲ್ಲರೂ ಸನಾತನ ಸಂಸ್ಥಾ, ಹಿಂದೂ ಜಾಗೃತ ಸಮಿತಿಯ ಸದಸ್ಯರು ಎಂಬುದು ಗೊತ್ತಾಗುತ್ತದೆ.
ಈ ಕ್ಷಾತ್ರಧರ್ಮ ಸಾಧನಾ ಏನು ಹೇಳುತ್ತದೆ?
“ಭಾರತದ ಸನಾತನ ಸಂಸ್ಕೃತಿಗೆ ಬಹಳ ದೊಡ್ಡ ಆಪತ್ತು ಬಂದಿದೆ. ಈ ಆಪತ್ತಿಗೆ ಕಾರಣ- ಹಿಂದೂ ಧರ್ಮದಲ್ಲೇ ಇರುವ ದುರ್ಜನರು. ಅಂಥವರ ನಾಮಾವಶೇಷವಾಗದೆ ಹಿಂದೂ ರಾಷ್ಟ್ರ, ಸನಾತನ ರಾಷ್ಟ್ರ ಸಾಧ್ಯವಾಗದು. ಈ ದುರ್ಜನರನ್ನು ನಾಶ ಮಾಡಿದರೆ, ಪರಲೋಕದಲ್ಲಿ ನಮಗೆ ಸದ್ಗತಿ ಉಂಟಾಗುತ್ತದೆ” ಎಂಬುದು ’ಕ್ಷಾತ್ರಧರ್ಮ ಸಾಧನ’ದ ಸಾರಾಂಶ.
ಇಂತಹ ವಿಚಾರಗಳಿಂದ ಪ್ರಚೋದಿತರಾಗಿದ್ದ ಇವರು, ಹತ್ಯೆಗಳಲ್ಲಿ ಭಾಗಿಯಾಗಿದ್ದರು. 2018ರ ನವೆಂಬರ್- ಡಿಸೆಂಬರ್ನಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಹಲವು ಕಡೆ ಪೊಲೀಸರು ದಾಳಿ ಮಾಡುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಬಂದೂಕು ಮತ್ತು ಪಿಸ್ತೂಲ್ಗಳನ್ನು ವಶಕ್ಕೆ ಪಡೆಯುತ್ತಾರೆ. ಸಂಗ್ರಹ ಮತ್ತು ಸಂಚು ಮಾಡುತ್ತಿದ್ದ ಸನಾತನ ಸಂಸ್ಥೆಗೆ ಸೇರಿದ ಸುಧನ್ವ ಗೊಂದಲೇಕರ್, ವಾಸುದೇವರಾವ್ ಸೂರ್ಯವಂಶಿ, ಶ್ರೀಕಾಂತ್ ಪಂಗಾರ್ಕರ್, ಹೃಷಿಕೇಶ್ ದೇವಡೇಕರ್ ಸಿಕ್ಕಿಬೀಳುತ್ತಾರೆ.
ವಾಸುದೇವರಾವ್ ಸೂರ್ಯವಂಶಿ ಎಂಬ ವ್ಯಕ್ತಿ ದಾವಣಗೆರೆಯಲ್ಲಿ ಒಂದು ವಾಹನವನ್ನು ಕದ್ದು ಗೌರಿ ಕೊಲೆಯ ಕೃತ್ಯಕ್ಕೆ ಬಳಸಿರುತ್ತಾನೆ. ಮತ್ತೆ ಅದನ್ನು ತೆಗೆದುಕೊಂಡು ಹೋಗಿ ಮಹಾರಾಷ್ಟ್ರದ ಗಡಿಭಾಗದಲ್ಲಿ ಇಟ್ಟುಕೊಂಡಿದ್ದ. ಆ ವಾಹನವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗೌರಿ, ಪಾನ್ಸಾರೆ, ಎಂ.ಎಂ.ಕಲ್ಬುರ್ಗಿ, ನರೇಂದ್ರ ದಾಬೋಲ್ಕರ್- ಈ ನಾಲ್ವರ ಹತ್ಯೆಗೂ ಒಂದೇ ರೀತಿಯ ಪಿಸ್ತೂಲನ್ನು ಇವರು ಬಳಸಿದ್ದಾರೆ. ಇವರ ಪ್ರಕಾರ- ಈ ಬಂದೂಕು ವಿಷ್ಣುವಿನ ಕೈಯಲ್ಲಿರುವ ಸುದರ್ಶನ ಚಕ್ರದ ರೀತಿ. ಶತ್ರುಗಳ ತಲೆ ಕತ್ತರಿಸಿದ ಬಳಿಕ ಈ ಸುದರ್ಶನ ಚಕ್ರ ಮತ್ತೆ ವಿಷ್ಣುವಿನ ಕೈ ಸೇರುತ್ತದೆ. ಹೀಗಾಗಿ ಒಂದೇ ಪಿಸ್ತೂಲು ಬಳಕೆಯಾಗಿದೆ. ಆದರೆ ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ಪುಣೆಯ ಬಳಿಯ ನದಿಯೊಂದರಲ್ಲಿ ಎಸೆಯುತ್ತಾರೆ. ಬಂದೂಕು ಸಿಕ್ಕರೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ತಿಳಿದು ಸಾಕ್ಷ್ಯನಾಶ ಮಾಡುತ್ತಾರೆ. ಮೋಹನ್ ಮತ್ತು ಕುಮಾರ್ ತಾವಿದ್ಧ ಸ್ಥಳದಲ್ಲಿದ್ದ ಎಲ್ಲ ಸಾಕ್ಷಿಗಳನ್ನು ನಾಶ ಮಾಡಿರುವ ಅಪರಾಧವನ್ನು ಎಸಗಿದ್ದಾರೆ. ಆದರೆ ಎಲ್ಲ ಸಾಕ್ಷ್ಯಗಳನ್ನು ಮತ್ತೆ ವಾಪಸ್ ಸಂಗ್ರಹಿಸುವ ನಿಟ್ಟಿನಲ್ಲಿ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗಿದೆ. 2018ರ ನವೆಂಬರ್ ವೇಳೆಗೆ 18 ಆರೋಪಿಗಳ ಪೈಕಿ 16 ಜನರ ಬಂಧನವಾಗಿರುತ್ತದೆ. 2020ರಲ್ಲಿ ಜಾರ್ಖಂಡ್ನಲ್ಲಿ ಋಷಿಕೇಶ್ ದೇವಡೇಕರ್ನನ್ನು ಬಂಧಿಸುವ ಮೂಲಕ 17 ಜನರನ್ನು ವಶಕ್ಕೆ ಪಡೆದಂತಾಗುತ್ತದೆ. ಆದರೆ ವಿಕಾಸ್ ಪಾಟೀಲ್ ಎಂಬಾತ ಮಾತ್ರ ಈಗಲೂ ತಲೆಮರೆಸಿಕೊಂಡಿದ್ದಾನೆ.

ಅತಿದೊಡ್ಡ ಪ್ರಕರಣವನ್ನು ಬೇಧಿಸಿದ ಕರ್ನಾಟಕ ಪೊಲೀಸರ ಶ್ರಮ ಶ್ಲಾಘನೀಯ. 2018ರ ನವೆಂಬರ್ 23ನೇ ತಾರೀಕು ಸುಮಾರು 9,235 ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಆರೋಪಿಗಳ ಮೇಲೆ ಕೊಲೆ, ಸಂಘಟಿತ ಸಂಚು, ಇತ್ಯಾದಿಗಳ ಸೆಕ್ಷನ್ 302, 120 (ಬಿ), ಇತ್ಯಾದಿಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ ಕಲಮುಗಳು ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ (KOCCA) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ಗೌರಿ ಲಂಕೇಶ್ ಅವರನ್ನು ಕೊಲ್ಲಲು ಒಂದು ವರ್ಷ ಕಾಲ ಸಂಚು ನಡೆದಿತ್ತು. ಹಿಂದೂ ಧರ್ಮದಲ್ಲಿನ ಬ್ರಾಹ್ಮಣ್ಯ ಹೇಗೆ ಸನಾತನ ಧರ್ಮ ಎಂಬ ಹೆಸರಲ್ಲಿ ಶೂದ್ರರಿಗೆ ದಲಿತರಿಗೆ ಅನ್ಯಾಯ ಮಾಡುತ್ತಿದೆ, ಹಿಂದೂರಾಷ್ಟ್ರ ಪರಿಕಲ್ಪನೆಯು ಪ್ರಜಾತಂತ್ರಕ್ಕೆ ಕಂಠಕವಾಗಿದೆ ಎಂಬುದನ್ನು ಗೌರಿ ಪದೇಪದೇ ಹೇಳುತ್ತಿದ್ದರು. ಹೀಗಾಗಿ ಇವರನ್ನು ದುರ್ಜನರು ಎಂದು ಪಾತಕಿಗಳು ನಿರ್ಧರಿಸಿದ್ದರು. ಗೌರಿಯವರು ಸಾರ್ವಜನಿಕವಾಗಿ ಹಿಂದೂಧರ್ಮವನ್ನು ಕಟುವಾಗಿ ಟೀಕಿಸಿದ ವಿಡಿಯೊವೊಂದರ ಸಣ್ಣ ತುಣುಕೊಂದನ್ನು ಕಾರಣವಾಗಿ ಇಟ್ಟುಕೊಂಡು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಹದಿನೆಂಟು ಜನ ಆರೋಪಿಗಳಲ್ಲಿ ಯಾರೊಬ್ಬರೂ ಗೌರಿ ಲಂಕೇಶ್ ಪತ್ರಿಕೆಯನ್ನು ಓದಿದವರಲ್ಲ. ಗೌರಿ ಲಂಕೇಶ್ ಅವರ ಬಗ್ಗೆ ತಿಳಿದವರೂ ಅಲ್ಲ.
ಪ್ರೊ ನರೇಂದ್ರ ನಾಯಕ್, ಕೆ. ಎಸ್ ಭಗವಾನ್ – ಹೀಗೆ ಇಪ್ಪತ್ತೈದರಿಂದ ಮೂವತ್ತು ಜನ ವಿಚಾರವಾದಿಗಳು ಈ ಗುಂಪಿನ ಹಿಟ್ ಲಿಸ್ಟ್ನಲ್ಲಿದ್ದರು. ಆದರೆ ಗೌರಿ ತಾನು ಸಾಯುವ ಮೂಲಕ ಉಳಿದವರನ್ನೆಲ್ಲ ಬದುಕಿಸಿದರು ಎಂದರೆ ತಪ್ಪಾಗಲಾರದು.
ವಿಚಾರಣೆ ಯಾವ ಹಂತದಲ್ಲಿದೆ?
ಪ್ರಕರಣದ ವಿಚಾರಣೆ ಮೂರು ವರ್ಷ ಆರಂಭವೇ ಆಗಿರಲಿಲ್ಲ. ಇದರ ನಡುವೆ ಕೋವಿಡ್ ಬಂತು. ಆರೋಪಿಗಳು ವಿವಿಧ ಜೈಲಿನಲ್ಲಿ ಇದ್ದಾರೆ. ಅಂತಿಮವಾಗಿ 2022ರ ಜುಲೈನಲ್ಲಿ ವಿಚಾರಣೆ ಶುರುವಾಗಿದೆ. 405 ಸಾಕ್ಷಿಗಳನ್ನು, 909 ಪುರಾವೆಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ವಿಚಾರಣೆ ಮತ್ತು ಪಾಟಿ ಸವಾಲು ಆಗಬೇಕು.
ಕುಂಟುತ್ತಾ ಸಾಗಿರುವ ವಿಚಾರಣೆ ತ್ವರಿತಗತಿಯಲ್ಲಿ ನಡೆದು ತೀರ್ಪು ಹೊರಬೀಳಬೇಕು ಎಂಬುದು ಗೌರಿ ಒಡನಾಡಿಗಳ ಆಗ್ರಹ. ಹೀಗಾಗಿ ಈ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಆದರೂ ವಿಚಾರಣೆ ಪ್ರಾರಂಭವಾಗಲು ಐದು ವರ್ಷಗಳೇ ಬೇಕಾಯಿತು. ಅದಕ್ಕೆ ಆರೋಪಿ ಪರ ವಕೀಲರು ವಿನಾಕಾರಣ ವಿಳಂಬ ಮಾಡುತ್ತಿದ್ದದ್ದು ಒಂದು ಕಾರಣ ಎಂಬುದು ಪ್ರಾಸಿಕ್ಯೂಷನ್ ಆರೋಪ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಕೋರ್ಟ್ ಹಾಲ್ 1 ರಲ್ಲಿ ಸಿಟಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2022ರ ಜುಲೈನಿಂದ ವಿಚಾರಣೆಯು ನಡೆಯುತ್ತಿದೆ. ಪ್ರತಿ ತಿಂಗಳಲ್ಲಿ ಮೊದಲ ಅಥವಾ ಎರಡನೇ ವಾರದ ಐದು ದಿನಗಳಲ್ಲಿ ಗೌರಿ ಹತ್ಯಾ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ನಡೆಸುತ್ತಿದೆ. ಪ್ರಾಸಿಕ್ಯೂಷನ್ ಪರವಾಗಿ 2018ರಿಂದಲೂ ಖ್ಯಾತ ಜನಪರ ವಕೀಲರಾದ ಬಾಲನ್ ಅವರೇ ಕೇಸು ನಡೆಸುತ್ತಿದ್ದಾರೆ. ಆರೋಪಿಗಳ ಪರವಾಗಿ ಮಡಿಕೇರಿಯ ಕೆ. ಎಂ. ಕೃಷ್ಣಮೂರ್ತಿಯವರು ನಾಯಕತ್ವ ವಹಿಸಿದ್ದು ಅವರಿಗೆ ಏಳೆಂಟು ಹಿರಿಯ ಮತ್ತು ಕಿರಿಯ ವಕೀಲರು ಸಾಥ್ ನೀಡುತ್ತಿದ್ದಾರೆ.
2022ರ ಜುಲೈ ನಿಂದ 2023ರ ಆಗಸ್ಟ್ ವರೆಗೆ 83 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 300ಕ್ಕೂ ಹೆಚ್ಚು ಪುರಾವೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ದಾಖಲೀಕರಿಸಲಾಗಿದೆ. ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ಬದಲಾಗಿದ್ದಾರೆ. ಈ ಅವಧಿಯಲ್ಲಿ ಆರೋಪಿ ಮೋಹನ್ ಜಾಮೀನು ಪಡೆಯಲು ಸೆಷನ್ಸ್ ನ್ಯಾಯಾಲಯದಿಂದ ಹಿಡಿದು, ಸುಪ್ರೀಂವರೆಗೆ ಪ್ರಯತ್ನಿಸಿದರೂ ಎಲ್ಲಾ ನ್ಯಾಯಾಲಯಗಳಲ್ಲೂ ಜಾಮೀನು ನಿರಾಕರಣೆಯಾಗಿದೆ. ವಿಚಾರಣೆಗೆ ಒಳಪಟ್ಟ 83 ಸಾಕ್ಷಿಗಳಲ್ಲಿ ಒಬ್ಬ ಸಾಕ್ಷಿ (ಆರೋಪಿಗಳ ಸಂಘಟನೆಗೆ ಸಂಬಂಧಪಟ್ಟವ) ಉಲ್ಟಾ ಹೊಡೆದಿದ್ದಾನೆ.
ಇನ್ನಿಬ್ಬರು ಸಾಕ್ಷಿಗಳು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸಿನಲ್ಲಿ ಗುರುತು ಹಿಡಿಯುವಲ್ಲಿ ಮತ್ತು ಕೆಲವು ದಾಖಲೆಗಳನ್ನು ಧೃಢೀಕರಿಸುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಪ್ರಾಸಿಕ್ಯೂಷನ್ ಯೋಜನಾಬದ್ಧವಾಗಿ ಕೇಸನ್ನು ಮುನ್ನೆಡೆಸುತ್ತಿದೆ.
ಸಾಕ್ಷಿಗಳ ನೆನಪು ಮಾಸಿ ಹೋಗಬಾರದು ಮತ್ತು ಯಾವುದೇ ಒತ್ತಡಗಳಿಗೆ ಬೀಳಬಾರದು. ವಿಚಾರಣೆ ವಿಳಂಬವಾಗಿ ಆರೋಪಿಗಳು ವಿಚಾರಣಾಧೀನ ಕೈದಿಗಳಾಗಿ ಮುಂದುವರಿಯುವುದು ಗೌರಿಯವರ ಆಶಯಕ್ಕೂ ವಿರುದ್ಧ. ಹೀಗಾಗಿ ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಲು ಅನುಕೂಲವಾಗುವಂತೆ ಈ ಪ್ರಕರಣಕ್ಕಾಗಿ ಒಂದು ವಿಶೇಷ ಕೋರ್ಟ್ ರಚಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.