ಛೇರ್ಮನ್ ಗಿರಿಯಿಂದ ಅಲ್ಲೊಂದು ಇಲ್ಲೊಂದು ಚರಂಡಿ ತೋಡಿಸಿ ರಸ್ತೆ ಸರಿ ಮಾಡಬಹುದು. ಆದರೆ ಈ ಪಂಚಾಯ್ತಿಯ ಕಪ್ಪು ಜನರ ಹೃದಯಗಳ ನೋವನ್ನು ಒಂದುಗೂಡಿಸಿದರೆ ಮಾತ್ರ ಆತನ ಬದುಕಿಗೆ ಅರ್ಥ ಬರುತ್ತದೆ.
“ನಮ್ಮ ಜೀವನರಾಮು ಕೊನೆಗೂ ಛೇರ್ಮನ್ ಆಗಲಿಲ್ಲ. ಬರ್ತೂರಿನ ಬೇರನ್ನು ಈ ಪಂಚಾಯ್ತಿಯ ಕತ್ತೆಗಳು ಎಷ್ಟು ಗಲೀಜು ಮಾಡಿದ್ದಾರೆಂದರೆ, ನಮ್ಮ ರಾಮು ಹಿಡಿಯುತ್ತಿದ್ದುದು ಈ ದರಿದ್ರ ಛೇರನ್ನು, ಊರಿನ ಯಜಮಾನ ಸಂಜೀವಿಯ ಆಶೀರ್ವಾದದಿಂದ ರಾಮು ಕುರ್ಚಿ ಏರಬೇಕಾಗಿರಲಿಲ್ಲ. ರಾಮು ನಮ್ಮೆಲ್ಲರ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವ ಕಪ್ಪು ಸಂಕೇತ. ನಮ್ಮ ಅನ್ಯಾಯಗಳ ಸಂಕೇತ ಕೂಡ.
“ಪಂಚಾಯ್ತಿಯ ಜನ ಬಹಳ ಮಾತಾಡಿಕೊಳ್ಳುತ್ತಾರೆ. ಗುಂಡಗೆ ಕಪ್ಪಗಿರುವ ಜೀವನ ರಾಮು ವ್ಯಂಗ್ಯ ಚಿತ್ರ ಬರೆಯುವವನಿಗೆ ಹಬ್ಬವಾಗಬಲ್ಲ, ಈತನನ್ನು ಬಿಳಿ ಹಾಳೆಯ ಮೇಲೆ ಕಪ್ಪು ಇಂಕು ಚೆಲ್ಲಿ ಎರಡು ಕಣ್ಣು ಬರೆದು ಬಿಳಿ ಟೋಪಿ ಹಾಕಿ ತಮಾಷೆ ಮಾಡುವುದು ಸುಲಭ. ಆದರೆ ಈ ಕಪ್ಪು ಆಕಾರದ ಹಿಂದೆ ಅರ್ಧಶತಮಾನದ ಅನುಭವ ಇದೆ. ಕೋಟ್ಯಂತರ ಕಪ್ಪು, ಜನರ ನೋವು ಇದೆ. ಗಾಂಧೀಜಿ ಅನುಭವಿಸಿದ ದುರಂತವಿದೆ. ವೇದೋಪನಿಷತ್ತು ಹೇಳಿ ಮೋಸ ಮಾಡಿದವರ, ಸುಲಿದು ಉಂಡವರ ಅಟ್ಟಹಾಸದ ನೆನಪುಗಳಿವೆ. ಚರಣಪ್ಪನಂತ ಕಟ್ಟೆ ಮುಖಂಡರ ತಾತ್ಸಾರ ಮತ್ತು ಶೋಷಣೆ ಇದೆ. ಯಜಮಾನ ಸಂಜೀವಿಯಂಥವರ ಪಿತೂರಿ ಮತ್ತು ಸೇಡುಗಳ ಬರೆ ಸ್ಪಷ್ಟವಾಗಿದೆ. ಜಾತಿ, ವರ್ಗಗಳ ಕೊಲೆಗಡುಕ ಚೌಕಟ್ಟು ನಮ್ಮೆಲ್ಲರ ಕಣ್ಣು ಕುಕ್ಕುವಷ್ಟು ಸರಳವಾಗಿ ಎದ್ದು ಕಾಣುತ್ತಿದೆ.
ಈ ಸುದ್ದಿ ಓದಿದ್ದೀರಾ?: ತಾಯಿ ಮೇಲೆ ಆಣೆಯಿಟ್ಟ ಬೊಮ್ಮಾಯಿಯಿಂದ ಪಂಚಮಸಾಲಿಗಳಿಗೆ ಮೋಸ; ಸ್ವಾಮೀಜಿಯೇಕೆ ಹೀಗೆ ಮಾಡಿದರು?
ಜೀವನರಾಮು ಈಗಲಾದರೂ ತನ್ನ ದಾರಿ ಕಂಡುಕೊಳ್ಳಬೇಕು. ಛೇರ್ಮನ್ಗಿರಿಯಿಂದ ಅಲ್ಲೊಂದು ಇಲ್ಲೊಂದು ಚರಂಡಿ ತೋಡಿಸಿ ರಸ್ತೆ ಸರಿ ಮಾಡಬಹುದು. ಆದರೆ ಈ ಪಂಚಾಯ್ತಿಯ ಕಪ್ಪು ಜನರ ಹೃದಯಗಳ ನೋವನ್ನು ಒಂದುಗೂಡಿಸಿದರೆ ಮಾತ್ರ ಆತನ ಬದುಕಿಗೆ ಮತ್ತು ಅವನ ಶತ್ರುಗಳೆನ್ನಿಸಿಕೊಂಡ ಖಳರೆಲ್ಲರ ಬದುಕಿಗೆ ಅರ್ಥ ಬರುತ್ತದೆ. ಮೂವತ್ತು ವರ್ಷಗಳ ಮರಳು ರಾಜಕೀಯದಿಂದ ಅಲ್ಲ, ಜೀವನ ರಾಮುವಿನ ಎರೆಮಣ್ಣಿನ ರಾಜಕೀಯದಿಂದ ಒಳ್ಳೆಯದಾಗುತ್ತದೆ. ಈ ನೆಲಕ್ಕಿನ್ನೂ ಜೀವ ಬರಿಸುವ ಶಕ್ತಿ ಉಳಿದಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಗಾಳಿಯಲ್ಲಿ ಓಡಾಡುವ ಮೇಲುವರ್ಗದ ಜನಕ್ಕೆ ಕಾಣದ ಇದ್ದದ್ದು ಈ ಮಣ್ಣಿನ ಕಂದಮ್ಮನಿಗೆ ಕಾಣಬೇಕಾಗುತ್ತದೆ. ನಮ್ಮ ಕಪ್ಪು ಮುಖದ ಮಗುವಿನಂಥ ರಾಮುವಿನಲ್ಲಿ ಇನ್ನೂ ಸಾಕಷ್ಟು ಜೀವನದ್ರವ್ಯ ಇದೆಯೆಂದು ಆಶಿಸೋಣ. ಈತನ ನೋವಿನಲ್ಲಿ ಭಾಗಿಗಳಾಗೋಣ. ನಮ್ಮ ರಾಮು ತನ್ನ ಸ್ಪರ್ಧೆಯಲ್ಲಿ ಸೋತರೂ ಅದಕ್ಕಿರುವ ನಿಜವಾದ ಗೆಲುವಿನ ಬಗ್ಗೆ ಆಶಾವಾದಿಗಳಾಗೋಣ. ರಾಮುವಿನ ಬಗ್ಗೆ ಬರೆಯುವಾಗ ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತಿದೆ. ಇದು ಖಂಡಿತ ಕರುಣೆ ಅಥವಾ ತೊಟ್ಟಿ ಅನುಕಂಪದ್ದಲ್ಲ. ಈ ಗಾಂಧೀಜಿಯ ನೆಲದ ಅನ್ಯಾಯ ದಿಂದ ಹೊರಟದ್ದು.”
– ಪಿ.ಲಂಕೇಶ್