ವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

Date:

ಹಿಂದಿಯಲ್ಲೊಂದು ಗಾದೆಯಿದೆ; ‘ಛಾಜ್ ಬೊಲೆ ತೊ ಬೋಲೆ, ಛಲನಿ ಭಿ ಬೋಲಿ ಜಿಸ್‍ಮೆ ಸತ್ತರ್ ಛೇದ್’ ಎಂದು. ಅದಕ್ಕೆ ಕನ್ನಡದಲ್ಲಿ ‘ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣ ಇಟ್ಟುಕೊಂಡು, ಪಕ್ಕದವನ ತಟ್ಟೆಯಲ್ಲಿನ ನೊಣ ಓಡಿಸಿದನಂತೆ’ ಎಂಬ ಗಾದೆ ಸೂಕ್ತವಾಗಿದೆ. ರಾಹುಲ್ ಗಾಂಧಿ ಇಂಗ್ಲೆಂಡಿನ ಪ್ರವಾಸದಲ್ಲಿ ನೀಡಿದ ಹೇಳಿಕೆಗಳ ಮೇಲೆ ಸೃಷ್ಟಿಸುತ್ತಿರುವ ಗಲಾಟೆ ನೋಡಿದರೆ ಈ ಗಾದೆಯೇ ನೆನಪಾಗುವುದು.

ನಿಸ್ಸಂಶಯವಾಗಿ ದೇಶದ ಆಂತರಿಕ ವಿಷಯಗಳ ಬಗ್ಗೆ ವಿದೇಶದಲ್ಲಿ ಮಾಡುವ ಹೇಳಿಕೆಗಳಲ್ಲಿ ಒಂದು ಮಟ್ಟದ ಘನತೆ ಇರಲೇಬೇಕು. ವಿರೋಧಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಈ ಘನತೆಯ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದರು; ಆದರೆ ಯಾವುದೇ ಪಕ್ಷದ ಯಾವ ನಾಯಕರೂ ಇಂದು ಆ ಹಂತಕ್ಕೆ ತಲುಪುವುದಿಲ್ಲ. ಅಂದಹಾಗೆ ಈಗ ಮನೆಯ ಮಾತು ಮನೆಯಲ್ಲಿಯೇ ಮುಚ್ಚಿಡಬಹುದಾದ ಆ ದಿನಗಳೂ ಇಲ್ಲ. ಇಂಟರ್‌ನೆಟ್‌ ಮತ್ತು ಜಾಗತಿಕ ಮಾಧ್ಯಮಗಳ ಕಾಲದಲ್ಲಿ ಅಂತರಿಕ ಗೌಪ್ಯ ವಿಷಯಗಳನ್ನು ಹೊರಗೆ ಹೇಳಬೇಕಾದ-ಹೇಳಬಾರದ ಸಂಗತಿಗಳೆಂದೂ ಉಳಿದಿಲ್ಲ. ಆದರೂ, ಕನಿಷ್ಠ ಮೂರು ಘನತೆಯ ಸೂತ್ರಗಳನ್ನು ವ್ಯಾಖ್ಯಾನಿಸಬಹುದಾಗಿದೆ.

ಮೊದಲನೆಯದಾಗಿ ಯಾವುದೇ ಪಕ್ಷ ಇತರ ಪಕ್ಷಗಳನ್ನು ಟೀಕೆ ಮಾಡಲಿ, ಆದರೆ ಯಾವುದೇ ಕೆಳಮಟ್ಟ ಅಗ್ಗದ ಗಾಸಿಪ್‍ ಅನ್ನು ಹೊರಗೆ ಹೋಗಿ ಹರಡಬಾರದು. ಎರಡನೆಯದಾಗಿ, ಇತರ ಪಕ್ಷಗಳ ಆಡಳಿತದ ಬಗ್ಗೆ ಟೀಕೆ ಮಾಡಬಹುದು, ಆದರೆ ಇಡೀ ದೇಶದ ಗೌರವವನ್ನು ತಗ್ಗಿಸುವ ಮಾತುಗಳನ್ನು ಆಡಬಾರದು. ಮೂರನೆಯದಾಗಿ, ನಮ್ಮ ಸಮಸ್ಯೆಗಳು ಏನೇ ಇರಲಿ, ವಿದೇಶಿಯರ ಹಸ್ತಕ್ಷೇಪದ ಬೇಡಿಕೆ ಇಡಬಾರದು ಹಾಗೂ ಅವರ ವಿಷಯಗಳಲ್ಲಿ ನಾವು ತಲೆತೂರಿಸಬಾರದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೊದಲ ಮಾನದಂಡವನ್ನು ತೆಗೆದುಕೊಂಡರೆ, ರಾಹುಲ್ ಗಾಂಧಿಯ ಹೇಳಿಕೆಯಲ್ಲಿ ಅಗ್ಗದ ಅಥವಾ ತೀರಾ ಕೆಳಮಟ್ಟದ ಅಂತಹ ಯಾವ ಮಾತೂ ಕಾಣಿಸಲಿಲ್ಲ. ಅವರು ಸಂಸತ್ತಿನಲ್ಲಿ ವಿರೋಧಪಕ್ಷಗಳ ನಾಯಕರ ಮೈಕ್ ಬಂದ್ ಮಾಡುವುದರ ಬಗ್ಗೆ ಹೇಳಿದರು, ವಿರೋಧಪಕ್ಷದವರ ಮೇಲೆ ತನಿಖಾ ಸಂಸ್ಥೆಗಳು ಮಾಡುತ್ತಿರುವ ರೇಡ್‍ಗಳ ಬಗ್ಗೆ ಹೇಳಿದರು ಹಾಗೂ ವಿರೋಧಪಕ್ಷಗಳ ನಾಯಕರ ಮೇಲೆ ಪೆಗಸಸ್ ಮೂಲಕ ಕಣ್ಗಾವಲು ಇಟ್ಟಿದ್ದರ ಬಗ್ಗೆ ಹೇಳಿದರು. ಈ ವಾಸ್ತವಗಳು ಜಗಜ್ಜಾಹೀರಾಗಿರುವ ವಾಸ್ತವಗಳು. ರಾಹುಲ್ ಗಾಂಧಿ ಗೌಪ್ಯವಾಗಿದ್ದ ಏನನ್ನೂ ಹೇಳಿಲ್ಲ. ಭಾರತವಷ್ಟೇ ಅಲ್ಲ, ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಇಂತಹದ್ದೇ ರೀತಿಯಲ್ಲಿ ದಾಳಿಗಳು ಆಗುತ್ತಿವೆ. ಒಂದು ವೇಳೆ ಒಂದು ದೇಶದ ಒಬ್ಬ ಸಂಸದ, ಇನ್ನೊಂದು ದೇಶದ ಸಂಸದರೊಂದಿಗೆ ಮುಚ್ಚಿದ ಕೋಣೆಯಲ್ಲಿ ಮಾತನಾಡಿದರೆ, ಅವರು ಈ ಪ್ರಶ್ನೆಗಳ ಮೇಲೆ ಚರ್ಚೆ ಮಾಡದೇ ಇದ್ದರೆ ಮತ್ಯಾವುದರ ಬಗ್ಗೆ ಚರ್ಚೆ ಮಾಡಿಯಾರು?

ಈ ಹೇಳಿಕೆಯನ್ನು ನೀವು 2022ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬರ್ಲಿನ್‍ನ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣದೊಂದಿಗೆ ಹೋಲಿಸಿ. ಅಲ್ಲಿ ಮೋದಿಯವರು ರಾಜೀವ್ ಗಾಂಧೀಯನ್ನು ಟೀಕಿಸುತ್ತ ಹೇಳಿದ್ದೇನೆಂದರೆ, ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಕೆಳಗೆ ತಲುಪುವ ಆ ದಿನಗಳು ಈಗಿಲ್ಲ ಎಂದರು. ಅಷ್ಟೇ ಅಲ್ಲ, ಅಲ್ಲಿ ಸೇರಿದ ಜನರಿಗೆ ಅತ್ಯಂತ ಅಸಭ್ಯ ರೀತಿಯಲ್ಲಿ ‘ಆ 85 ಪೈಸೆಗಳನ್ನು ಸವೆಸುತ್ತಿದ್ದ ‘ಕೈ’ ಯಾವುದಿತ್ತು’ ಎಂದು ಕೇಳಿದರು. ವಿದೇಶದಲ್ಲಿ ಮಾಡಿದ ಈ ಅಗ್ಗದ ಚುನಾವಣಾ ಭಾಷಣದ ಬಗ್ಗೆ ಪ್ರಧಾನಮಂತ್ರಿಯವರು ಕ್ಷಮೆಯನ್ನೂ ಕೇಳಲಿಲ್ಲ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಯಾವ ಉತ್ತರವನ್ನೂ ನೀಡಲಿಲ್ಲ.

ಬಹುಶಃ ಬಿಜೆಪಿಯ ನಾಯಕರ ದೂರು ಎರಡನೆಯ ಮಾನದಂಡದ ಬಗ್ಗೆ ಇದೆ; ಅದು ರಾಹುಲ್ ಗಾಂಧಿ ಮಾತುಗಳಲ್ಲಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಘನತೆಯ ಪತನದ ಬಗ್ಗೆ ವ್ಯಕ್ತಪಡಿಸಿದ ಕಾಳಜಿಯಿಂದ ದೇಶದ ಇಮೇಜ್ ಕುಸಿದಿದೆ ಎಂದು. ಒಂದು ವೇಳೆ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಶಕ್ತಿಗಳು ಇಲ್ಲವಾಗಿವೆ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಡೆಸುವುದು ಭಾರತೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದರೆ, ಆ ಮಾನದಂಡ ಉಲ್ಲಂಘಿಸಿದ್ದಾರೆ ಎನ್ನಬಹುದಾಗಿತ್ತು. ಆದರೆ ಅವರು ಇಂಥದ್ದೇನೂ ಹೇಳಲಿಲ್ಲ, ಅದರ ಬದಲಿಗೆ ಭಾರತದ ಜನರಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯು ಆಳವಾಗಿ ಬೇರುಬಿಟ್ಟಿದ್ದನ್ನು ಎತ್ತಿತೋರಿಸಿದರು. ಅವರ ಈ ಹೇಳಿಕೆಯನ್ನು, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ 2015ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ನೀಡಿದ ಭಾಷಣದೊಂದಿಗೆ ಹೋಲಿಕೆ ಮಾಡಿನೋಡಿ. ಅಲ್ಲಿ ಹಿಂದಿನ ಸರಕಾರಗಳ ಮೇಲೆ ದಾಳಿ ಮಾಡುತ್ತ ಮೋದಿಯವರು ‘ಹೀಗೂ ಒಂದು ಸಮಯವಿತ್ತು, ಆಗ ಜನರು ತಮ್ಮ ಕಳೆದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೋ ಏನೋ, ಅದಕ್ಕಾಗಿ ಹಿಂದುಸ್ತಾನದಲ್ಲಿ ಹುಟ್ಟಿದ್ದೀವಿ ಎಂದು ಯೋಚಿಸುತ್ತಿದ್ದರು’ ಎಂದು ಹೇಳಿದರು. ದೇಶದ ಪ್ರತಿಷ್ಠೆಯನ್ನು ತಗ್ಗಿಸುವ ಮಾನದಂಡದಲ್ಲಿ ದೇಶವನ್ನು ಅವಮಾನಿಸುವ ದೊಡ್ಡ ದೋಷಿ ಮೋದಿಜಿಯ ಈ ಹೇಳಿಕೆ ಎಂದು ನಿಸ್ಸಂಶಯವಾಗಿ ಹೇಳಬೇಕಿದೆ.

ಮೂರನೆಯ ಮಾನದಂಡ ವಿದೇಶಿಯರ ಹಸ್ತಕ್ಷೇಪವನ್ನು ಆಹ್ವಾನಿಸುವುದರ ಬಗ್ಗೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಅಂದಿನ ಜನಸಂಘದ ಸಂಸದ ಸುಬ್ರಮಣ್ಯಂ ಸ್ವಾಮಿಯೊಂದಿಗೆ ಅನೇಕ ವಿರೋಧಪಕ್ಷದ ನಾಯಕರು ಅಮೆರಿಕ ಮತ್ತು ಇತರ ದೇಶಗಳಿಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹಸ್ತಕ್ಷೇಪ ಮಾಡುವ ಬೇಡಿಕೆ ಇಟ್ಟಿದ್ದರು. ಅಂತಹ ವಿಪತ್ತಿನ ಕಾಲದಲ್ಲಿ ಹೀಗೆ ಮಾಡಬೇಕೇ ಇಲ್ಲವೇ ಎಂಬುದು ಚರ್ಚೆಯ ವಿಷಯವಾಗಿದೆ, ಆದರೆ ಸದ್ಯಕ್ಕೆ ಇಂತಹದ್ದೇನೂ ಆಗಿಲ್ಲ. ಬಿಜೆಪಿಯ ನಾಯಕರು ಆರೋಪವನ್ನಂತೂ ಮಾಡುತ್ತಿದ್ದಾರೆ, ಆದರೆ ಇಂಗ್ಲೆಂಡಿನ ಸಂಸದರು ಭಾರತೀಯ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕು ಎಂಬ ಮನವಿ ಮಾಡಿರುವಂತಹ ಯಾವ ಹೇಳಿಕೆಗಳೂ ರಾಹುಲ್ ಗಾಂಧಿಯ ಮಾತುಗಳಲ್ಲಿ ಕಾಣಸಿಗುತ್ತಿಲ್ಲ. ಸ್ವಾಭಾವಿಕವಾಗಿಯೇ, ಇಂತಹ ಆರೋಪ ಮೋದಿಯವರ ಮೇಲೆಯೂ ಇಲ್ಲ. ಆದರೆ, ಇನ್ನೊಂದು ದಿಕ್ಕಿನಿಂದ ಅವರು ಖಂಡಿತವಾಗಿಯೂ ಈ ಘನತೆಯ ಉಲ್ಲಂಘನೆ ಮಾಡಿದ್ದಾರೆ; ಅದು ಅವರು ಅಮೆರಿಕದ ಹೂಸ್ಟನ್ ನಗರದಲ್ಲಿ 2019ರಲ್ಲಿ ಆದ ರ್ಯಾಲಿಯಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ (ಈ ಬಾರಿ ಟ್ರಂಪ್ ಸರಕಾರ) ಎಂಬ ಘೋಷಣೆಯನ್ನು ಕೂಗಿ, ಸುಮ್‍ಸುಮ್ನೆ ಅಮೇರಿಕದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಲಸ ಮಾಡಿದರು. ಈ ಅಸಫಲ ಮತ್ತು ಹಾಸ್ಯಾಸ್ಪದ ಪ್ರಯತ್ನದ ಪರಿಣಾಮಗಳನ್ನು ದೇಶ ಅನುಭವಿಸಬೇಕಾಯಿತು.

ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಮೂರು ಮಾನದಂಡಗಳು ರಾಹುಲ್ ಗಾಂಧಿಯ ಮೇಲೆ ಅನ್ವಯ ಆಗುವುದಿಲ್ಲ ಎಂದಮೇಲೆ ಬಿಜೆಪಿ ಇಷ್ಟು ವಿಚಲಿತವಾಗಿದ್ದು ಏಕೆ? ಒಂದೋ, ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಗಲಾಟೆ ಸೃಷ್ಟಿಸುತ್ತಿದ್ದಾರೆ, ಅಥವಾ ರಾಹುಲ್ ಗಾಂಧಿಯು ಮೋದಿ ಸರಕಾರದ ಮರ್ಮಸ್ಥಾನದ ಮೇಲೆಯೇ ಪೆಟ್ಟುಕೊಟ್ಟಿದ್ದಾರೆಯೇ? ನಿಜ ಏನೆಂದರೆ, ಭಾರತದ ಪ್ರಜಾಸತ್ತಾತ್ಮಕ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಭಾರತ ಸರಕಾರವು ಬಿಬಿಸಿಯ ಸಾಕ್ಷ್ಯಚಿತ್ರವನ್ನು ಬ್ಯಾನ್ ಮಾಡಿದಾಗ ಹಾಗೂ ಬಿಬಿಸಿ ಕಚೇರಿಗಳ ಮೇಲೆ ರೇಡ್ ಮಾಡಿದ್ದಾರೆ ಎಂದು ಇಡೀ ಜಗತ್ತಿಗೆ ಗೊತ್ತಾದಾಗ. ಭಾರತೀಯ ಅರ್ಥವ್ಯವಸ್ಥೆಯ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಹಿಂಡನ್‍ಬರ್ಗ್ ವರದಿಯಿಂದ ಷೇರು ಮಾರುಕಟ್ಟೆಯಲ್ಲಿ ಆದ ಹಗರಣ ತಡೆಯಲು ಭಾರತ ಸರಕಾರ ಮತ್ತು ಅದರ ಸಂಸ್ಥೆಗಳು ಏನನ್ನೂ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಾದಾಗ. ಒಂದು ಸಶಕ್ತ ದೇಶದ ರೂಪದಲ್ಲಿ ಭಾರತದ ಪ್ರತಿಷ್ಠೆ ಯಾವಾಗ ಕುಸಿಯುತ್ತೆ ಎಂದರೆ, ಚೀನಾ ದೇಶವು ಭಾರತದ 2000 ಚದರ ಕಿಲೊಮೀಟರ್ ಆಕ್ರಮಿಸಿದೆ ಎಂದು ಸೆಟಲೈಟ್ ಮೂಲಕ ಜಗತ್ತಿಗೆ ತಿಳಿದಾಗ ಹಾಗೂ ಸರಕಾರ ಅದರ ಬಗ್ಗೆ ಮೌನವಹಿಸಿದ್ದನ್ನು ನೋಡಿದಾಗ. ಯಾರೂ ನಮ್ಮ ಗಡಿಯಲ್ಲಿ ಪ್ರವೇಶಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳ್ತಾರೆ ಹಾಗೂ ಚೀನಾದ ಬಳಿ ಎಷ್ಟು ಆರ್ಥಿಕ ಶಕ್ತಿ ಇದೆಯೆಂದರೆ, ನಾವು ಅವರೊಂದಿಗೆ ಕಾಲ್ಕೆರೆದು ಜಗಳವಾಡಲು ಸಾಧ್ಯವಿಲ್ಲ ಎಂದು ವಿದೇಶ ಮಂತ್ರಿ ಹೇಳುತ್ತಾರೆ. ಒಂದು ವೇಳೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯ ಮೇಲೆ ದೇಶದ ಪ್ರತಿಷ್ಠೆ ಕಡಿಮೆ ಮಾಡಿದ ಆರೋಪ ಹೊರಿಸುವ ಬದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಆಕ್ರಮಣದ ಬಗ್ಗೆ ಬಾಯ್ಬಿಟ್ಟಿದ್ದರೆ ದೇಶದ ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...