- ಭಾರತ-ಚೀನಾ ಗಡಿ ವಿವಾದದ ಬಗ್ಗೆ ಚರ್ಚಿಸುವಂತೆ ಒತ್ತಾಯ
- ಬಿಜೆಪಿಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಕಾಂಗ್ರೆಸ್
ಲೋಕಸಭೆಯಲ್ಲಿ ತುರ್ತು ವಿಷಯಗಳ ಕುರಿತು ಚರ್ಚಿಸಲು ಸದನದ ಇತರೆ ವ್ಯವಹಾರಗಳನ್ನು ಮುಂದೂಡುವಂತೆ ಇಬ್ಬರು ಕಾಂಗ್ರೆಸ್ ನಾಯಕರು ನಿರ್ಣಯ ಮಂಡಿಸಿದ್ದಾರೆ.
ಲೋಕಸಭೆಯ ಸದನದಲ್ಲಿ ಪ್ರಮುಖ ತುರ್ತು ವಿಷಯಗಳ ಕುರಿತು ಚರ್ಚಿಸಬೇಕು ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಮತ್ತು ಮನೀಶ್ ತಿವಾರಿ ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಸದನದ ವ್ಯವಹಾರ ಮುಂದೂಡಿಕೆಯ ನಿರ್ಣಯ ಮಂಡಿಸಿದ್ದಾರೆ.
“ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ 18 ನಾಯಕರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಡ್ಡಿದ ಅಪಾಯವಾಗಿದೆ. ಈ ಕುರಿತು ಸದನದಲ್ಲಿ ಚರ್ಚಿಸಬೇಕು” ಎಂದು ಮಾಣಿಕಂ ಟ್ಯಾಗೋರ್ ನಿರ್ಣಯ ಮಂಡಿಸಿದ್ದಾರೆ.
“ರಾಹುಲ್ ಗಾಂಧಿ ಅವರು ಉದ್ಯಮಿ ಗೌತಮ್ ಅದಾನಿ ದೇಶಕ್ಕೆ ಮಾಡಿರುವ ಮೋಸದ ಬಗ್ಗೆ ಮಾತನಾಡಲು ಇಚ್ಚಿಸಿದ್ದರು. ಸಂಸದೀಯ ಜಂಟಿ ಸಮಿತಿಯ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದರು. ಆದರೆ, ಕೇಂದ್ರ ಸರ್ಕಾರ ಅವರ ಧ್ವನಿ ಅಡಗಿಸಲು ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.
“ಈ ಸದನದಲ್ಲಿ ಉತ್ತರ ನೀಡುವಂತೆ ಸದನವೂ ಪ್ರಧಾನಿಯನ್ನು ಒತ್ತಾಯಿಸಬೇಕು. ಕಾರ್ಪೊರೇಟ್ ವಸಾಹತುಶಾಹಿಯ ಪುನರಾವರ್ತನೆಯಿಂದ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ. ಆದ್ದರಿಂದ ಸದನದ ದಿನನಿತ್ಯದ ವ್ಯವಹಾರಗಳನ್ನು ಬದಿಗಿಟ್ಟು ಚರ್ಚಿಸುವುದು ಸೂಕ್ತ” ಎಂದು ಮನವಿ ಮಾಡಿಕೊಂಡಿದ್ದಾರೆ.
ತುರ್ತು ವಿಷಯಗಳ ಕುರಿತು ಚರ್ಚಿಸುವ ನಿರ್ಣಯ ಮಂಡಿಸಿರುವ ಮನೀಶ್ ತಿವಾರ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
“2020ರಿಂದ ಚೀನಾ ಭಾರತದೊಳಗೆ ಭೂಹಗರಣ ನಡೆಸುತ್ತಿದೆ. ಭಾರತ ಮತ್ತು ಚೀನಾ ಕಮಾಂಡರ್ಗಳ ನಡುವೆ ಹದಿನೇಳು ಸುತ್ತಿನ ಮಾತುಕತೆ ನಡೆದಿವೆ. ಆದರೆ, ದೊರೆತಿದ್ದು ಅಲ್ಪ ಯಶಸ್ಸು ಮಾತ್ರ. ಚೀನಾ ತನ್ನ ಸೈನಿಕರಿಗೆ ಸೇತುವೆಗಳು, ರಸ್ತೆಗಳು ಮತ್ತು ವಸತಿ ಸೇರಿದಂತೆ ಗಮನಾರ್ಹ ಮೂಲಸೌಕರ್ಯಗಳನ್ನು ನಿರ್ಮಿಸುವುದನ್ನು ಮುಂದುವರೆಸಿದೆ. ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾ ಪ್ರಯತ್ನಿಸುತ್ತಿದೆ ಈ ಕುರಿತು ಸದನದಲ್ಲಿ ತುರ್ತಾಗಿ ಚರ್ಚಿಸಬೇಕು” ಎಂದಿದ್ದಾರೆ.
“ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಚೀನಾದೊಂದಿಗಿನ ಗಡಿ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ. ನಾನು ಈ ಮೂಲಕ, ಈ ವಿಷಯವನ್ನು ಪ್ರಸ್ತಾಪಿಸಲು ಅನುಮತಿ ಕೇಳುತ್ತೇನೆ” ಎಂದು ಪತ್ರ ಬರೆದಿದ್ದಾರೆ.