- ವಿಪಕ್ಷದ ನಾಯಕನನ್ನು ಮೊದಲು ನೇಮಿಸಿ ಎಂದು ಸಲಹೆ
- ಟ್ವೀಟರ್ ನಲ್ಲಿ ಬಿಜೆಪಿ ಕುಟುಕಿದ ಆಡಳಿತ ಪಕ್ಷ ಕಾಂಗ್ರೆಸ್
ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ.
ಸರ್ಕಾರ ರಚನೆಯಾಗಿ ಅರ್ಧ ತಿಂಗಳಾಗುತ್ತಾ ಬಂದರೂ ವಿಪಕ್ಷಕ್ಕೆ ಇನ್ನೂ ನಾಯಕರೇ ಸಿಗದಿರುವುದು ದುರಂತ, ನಮ್ಮನ್ನು ವಿರೋಧಿಸುವ ಮೊದಲು ವಿಪಕ್ಷ ನಾಯಕನನ್ನಿಟ್ಟುಕೊಂಡಾದರೂ ವಿರೋಧಿಸಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕಾಂಗ್ರೆಸ್ ಟ್ವೀಟ್ ಹೀಗಿದೆ. ನಾವು ಗೆದ್ದೂ ಆಯ್ತು, ಸಿಎಂ, ಡಿಸಿಎಂ ಆಯ್ಕೆಯೂ ಆಯ್ತು, ಸಚಿವ ಸಂಪುಟವೂ ರೆಡಿ ಆಯ್ತು, ಸರ್ಕಾರದ ರಚನೆಯೂ ಆಯ್ತು, ಆದರೆ ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ರಾಜ್ಯ ಬಿಜೆಪಿಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ ಎಂದು ಅಣಕಿಸಿದೆ.
ಮುಂದುವರೆದ ಕಾಂಗ್ರೆಸ್ ನೈತಿಕತೆ ಇರದಿದ್ದರೇನಂತೆ, ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊಂಡಾದರು ಬಿಜೆಪಿ ನಮ್ಮನ್ನು ವಿರೋಧಿಸಲಿ ಎಂದು ಕುಹಕವಾಡಿದೆ.
ಆಡಳಿತ ಪಕ್ಷ ಟ್ವೀಟ್ ಲೇವಡಿ ಏನೇ ಇರಲಿ. ಅದರಾಚೆಗೂ ಕಾಂಗ್ರೆಸ್ ಹೇಳಿದ ವಿಚಾರ ನಿಜಕ್ಕೂ ಗಮನ ಹರಿಸುವಂತಹದ್ದೇ. ಬಹುಮತದೊಂದಿಗೆ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಬಿಜೆಪಿಗೆ ಕನಿಷ್ಠ ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳುವ ಸೀಟುಗಳು ದಕ್ಕಿರುವುದೇ ಈಗ ಸಾಧನೆ.
ಪ್ರಯೋಗಾಧಾರಿತ ಚುನಾವಣೆ ಎದುರಿಸುವ ಸಲುವಾಗಿ ಪಕ್ಷದ ಹಿರಿಯ ಹಾಗೂ ಅನುಭವಿ ನಾಯಕರನ್ನು ದೂರ ಸರಿಸಿ ಭರ್ಜರಿ ಸಾಧನೆಗೈಯುವ ಹುಮ್ಮಸ್ಸಿನಲ್ಲಿದ್ದ ಕಮಲ ಪಕ್ಷಕ್ಕೀಗ ಆಗಿರುವ ಆಘಾತದಿಂದ ಸುಧಾರಿಸಿಕೊಂಡು ಮೇಲೇಳುವುದೇ ಸವಾಲಾಗಿದೆ.
ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅಂತಹ ನಾಯಕರನ್ನು ದೂರ ಸರಿಸಿದ ಪರಿಣಾಮ ಪಕ್ಷಕ್ಕೊಬ್ಬ ಸಮರ್ಥ ಮೇಟಿ ದೊರಕದಂತಾಗಿದೆ. ಇದ್ದುದರಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹೊರತುಪಡಿಸಿ ಆಡಳಿತ ಪಕ್ಷ ಎದುರಿಸಿ ನಿಲ್ಲಬಲ್ಲ ನಾಯಕರುಗಳು ಬಿಜೆಪಿಯಲ್ಲಿ ಇಲ್ಲದಿರುವುದೇ ಈಗ ದುರಂತ.
ಈ ಸುದ್ದಿ ಓದಿದ್ದೀರಾ?: ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಸರಣಿ ಸಭೆಗೆ ಮುಂದಾದ ಸಿಎಂ, ಡಿಸಿಎಂ
ಅಪ್ಪಿತಪ್ಪಿಯೂ ಈ ಹಾದಿಯಲ್ಲಿ ಹಾದು ಹೋಗಬಲ್ಲ ನಾಯಕರು ಯಾರಾದರೂ ಇದ್ದಾರೆಂದು ನೋಡಿದರೆ ಅವರಲ್ಲಿ ಕೆಲವರದ್ದು ಒಂದೊಂದು ಹಾದಿ. ಬೊಮ್ಮಾಯಿ ಹೊರತುಪಡಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಈ ಜವಾಬ್ದಾರಿ ನೀಡಲು ಯೋಚನೆ ಮಾಡಿದ್ದೇ ಆದರೆ, ಉಗ್ರ ಹಿಂದುತ್ವವಾದಿಯಾದ ಯತ್ನಾಳ್ ಕೆಲ ವೇಳೆ ಸಭಾ ಮರ್ಯಾದೆಯನ್ನು ಧಿಕ್ಕರಿಸಿದರೂ ಅಚ್ಚರಿ ಇಲ್ಲ.
ಉಳಿದಂತೆ ಹಿಂದುಳಿದ ವರ್ಗದ ಸುನಿಲ್ ಕುಮಾರ್, ಆರ್ ಅಶೋಕ್ ಇದ್ದುದರಲ್ಲಿ ಕೊಂಚ ವಾಸಿ ಎನ್ನುವವರು. ಆದರೆ ಸಿಎಂ ಸಿದ್ದರಾಮಯ್ಯ ಎದುರಲ್ಲಿ ಸಮನಾಗಿ ನಿಲ್ಲುವವರು ಇವರಲ್ಲ ಎನ್ನುವುದೂ ಅಷ್ಟೇ ಸತ್ಯ.
ಹೀಗಾಗಿ ಕಾಂಗ್ರೆಸ್ ಸರ್ಕಾರ ಮೊದಲ ಅಧಿವೇಶನಕ್ಕೆ ಸಿದ್ದತೆ ನಡೆಸುತ್ತಿದ್ದರೂ ವಿಪಕ್ಷ ಮಾತ್ರ ಇನ್ನೂ ತನ್ನ ಸಭಾ ನಾಯಕನ ಆಯ್ಕೆಗೆ ತಿಣುಕಾಟ ನಡೆಸುತ್ತಲೇ ಇರುವುದು ನಿಜಕ್ಕೂ ವಿಪರ್ಯಾಸವೇ.