- ಯುವಕನ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹ
- ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಿಡಿಯುವ, ಹಾರಿಸುವ ಹಕ್ಕು ಕನ್ನಡಿಗರಿಗಿದೆ
ರಾಮನವಮಿ ದಿನದಂದು ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಘಟನೆಗೆ ಜೆಡಿಎಸ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಧಮ್ಮು ತಾಕತ್ತು ಬಿಜೆಪಿಗೆ ಇಲ್ಲ ಎಂದು ಕಿಡಿಕಾರಿದೆ.
ನಗರದ ತಿಲಕ್ ಚೌಕ್ ಬಳಿ ರಾಮನವಮಿ ಮೆರವಣಿಗೆ ವೇಳೆ ಭಗವಾಧ್ವಜ ಹಿಡಿದ ನೂರಾರು ಯುವಕರು ಕನ್ನಡ ಬಾವುಟ ಹಿಡಿದ ಮಂಜುನಾಥ ಢಂಗ ಮೇಲೆ ದಾಳಿ ಮಾಡಿದ್ದರು. ಈ ಕುರಿತು ಜೆಡಿಎಸ್ ಸರಣಿ ಟ್ವೀಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ. ಆದರೆ, ನಿನ್ನೆ ಬೆಳಗಾವಿಯಲ್ಲಿ ರಾಮನ ಹಬ್ಬದ ಕಾರ್ಯಕ್ರಮದಲ್ಲಿ ತೊಡಗಿದ್ದ ಯುವಕನೊಬ್ಬ ಕನ್ನಡ ಧ್ವಜ ಹಿಡಿದಿದ್ದ ಕಾರಣಕ್ಕೆ ಆತನ ಮೇಲೆ ಕೆಲ ಪುಂಡರು ಹಲ್ಲೆ ಮಾಡಿದ್ದಾರೆ. ಇದು ತೀವ್ರ ಖಂಡನೀಯ ಎಂದು ಟ್ವೀಟ್ ಮಾಡಿದೆ.
ಯುವಕನ ಮೇಲೆ ಹಲ್ಲೆ ನಡೆಸಿರುವ ಮರಾಠ ಪುಂಡರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಆಗ್ರಹಿಸಿದೆ.
ಈ ಸುದ್ದಿ ಓದಿದ್ದೀರಾ? ಅಭ್ಯರ್ಥಿ ಪಟ್ಟಿ ಘೋಷಣೆಗೆ ಕಡೆಗೂ ಸಿದ್ದವಾದ ಬಿಜೆಪಿ; ಏಪ್ರಿಲ್ 7ಕ್ಕೆ ಹುರಿಯಾಳುಗಳ ಪಟ್ಟಿ ಬಿಡುಗಡೆ?
“ಗಡಿ, ಭಾಷೆಯ ವಿಷಯ ಇಟ್ಟುಕೊಂಡು ಪದೇ ಪದೇ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಸರ್ಕಾರ, ಮರಾಠಿ ಭಾಷೆಯ ಹೆಸರಿನಲ್ಲಿ ಹುಟ್ಟಿಕೊಂಡಿರುವ ದುರಭಿಮಾನಿಗಳು ಬೆಳಗಾವಿಯಲ್ಲಿ ಇಂತಹ ವಾತಾವರಣ ಸೃಷ್ಟಿಸಿದ್ದಾರೆ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
“ನಮ್ಮ ಮಾನಗೇಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದಕ್ಕೆಲ್ಲ ಕಡಿವಾಣ ಹಾಕುವ ಧಮ್ಮು-ತಾಕತ್ತು ಇಲ್ಲವೇ ಇಲ್ಲ” ಎಂದು ಕಿಡಿಕಾರಿದೆ.
“ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಿಡಿಯುವ, ಹಾರಿಸುವ, ಸಂಭ್ರಮಿಸುವ ಎಲ್ಲ ಹಕ್ಕು ಕನ್ನಡಿಗರಿಗಿದೆ. ಯಾವುದೇ, ಯಾರದ್ದೇ ಮುಲಾಜಿಗೆ ಒಳಗಾಗದೆ ಇದನ್ನು ಗಟ್ಟಿಧ್ವನಿಯಲ್ಲಿ ನಾವೆಲ್ಲ ಹೇಳಲೇಬೇಕು” ಎಂದು ಜೆಡಿಎಸ್ ಕರೆ ಕೊಟ್ಟಿದೆ.
“ಹಲ್ಲೆ ಮಾಡಿದ ಯುವಕ ಅಥವಾ ಅವನ ಗುಂಪಿನ ಮೇಲೆ ದೂರು ದಾಖಲಿಸಬೇಕು. ಇಂತಹ ಘಟನೆ ಮತ್ತೆ ನಡೆಯದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು” ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.