- ಎಚ್ಡಿಕೆ ಜೊತೆ ಜೆಡಿಎಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಂಡೆ ಮಂಜ
- ಶೀಘ್ರವೇ ಜೆಡಿಎಸ್ ಸೇರ್ಪಡೆಯಾಗಲಿದ್ದಾರಂತೆ ಕೊಲೆ ಪ್ರಕರಣದ ಆರೋಪಿ
ರಾಷ್ಟ್ರೀಯ ಪಕ್ಷಗಳೊಳಗೆ ಆರಂಭವಾದ ರೌಡಿಗಳ ಪಕ್ಷ ಸೇರ್ಪಡೆ ಕಾರ್ಯ ಈಗ ಪ್ರಾದೇಶಿಕ ಪಕ್ಷಗಳಿಗೂ ವಿಸ್ತರಿಸಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹಿಗ್ಗಾಮುಗ್ಗ ಜಾಡಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ತಮ್ಮದೇ ಪಕ್ಷದ ಕಾರ್ಯಕ್ರಮದ ಭೋಜನ ಕೂಟದ ವೇಳೆ ರೌಡಿಶೀಟರ್ ಜೊತೆ ಕುಳಿತು ವಿವಾದಕ್ಕೆ ಎಡೆಯಾಗಿದ್ದಾರೆ.
ಅಂದ ಹಾಗೆ ಎಚ್ ಡಿ ಕುಮಾರಸ್ವಾಮಿ ಜೊತೆ ಕಾಣಿಸಿಕೊಂಡಿರುವ ರೌಡಿ ಶೀಟರ್ ಹೆಸರು ಬಂಡೆ ಮಂಜ. ಈತ ಆನೇಕಲ್ನ ಪ್ರಭಾವಿ ಉದ್ಯಮಿ, ರಾಜಕಾರಣಿ ಬಿಎಂಎಲ್ ಕೃಷ್ಣಪ್ಪ ಕೊಲೆ ಪ್ರಕರಣದ ಎರಡನೇ ಆರೋಪಿ. ಇಂತಹ ಗುರುತರ ಆರೋಪ ಹೊತ್ತಿರುವ ರೌಡಿಶೀಟರ್ ಜೊತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಜೆಡಿಎಸ್ನ ಮಾಜಿ ವಿಧಾನ ಪರಿಷತ್ ಸದಸ್ಯ, ಹಾಲಿ ಕಾಂಗ್ರೆಸ್ ಮುಖಂಡ ಬಿಇಎಂಎಲ್ ಕಾಂತರಾಜು, ಎಚ್ ಡಿ ಕುಮಾರಸ್ವಾಮಿ ಹಾಗೂ ಬಂಡೇ ಮಂಜು ನಡುವಿನ ಗೆಳೆತನದ ಈ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.
ಆನೇಕಲ್ನಲ್ಲಿ ನಡೆದ ಜಲಧಾರೆ ಕಾರ್ಯಕ್ರಮದಲ್ಲಿ ಬಂಡೆ ಮಂಜ, ಹೆಚ್ಡಿಕೆ ಜೊತೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಾರ್ಯಕ್ರಮವೊಂದರ ಗುದ್ದಲಿ ಪೂಜೆಯಲ್ಲೂ ಭಾಗವಹಿಸಿದ್ದರು, ಶಾಸಕ ಶ್ರೀನಿವಾಸ್ ಮೂರ್ತಿ ಜೊತೆ ಸೇರಿಕೊಂಡಿರುವ ಮಂಜ, ನೆಲಮಂಗಲವನ್ನ ರಕ್ತಮಂಗಲವನ್ನಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ಇಂತಹವರಿಗೆ ಕುಮಾರಸ್ವಾಮಿ ಜೊತೆಯಾಗುತ್ತಾರೆಂದರೆ ಏನು ಅರ್ಥ ಎಂದು ಕಾಂತರಾಜು ಎಚ್ಡಿಕೆಯವರನ್ನು ಪ್ರಶ್ನಿಸಿದ್ದಾರೆ.
ಮಾಹಿತಿ ಮೂಲವೊಂದರ ಪ್ರಕಾರ ಬಂಡೆ ಮಂಜ ಶೀಘ್ರದಲ್ಲೇ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಅದರ ಪೂರ್ವಭಾವಿಯಾಗಿ ಪಕ್ಷ ಪ್ರಮುಖರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.