ಸಂಸದೆ ಸ್ಮೃತಿ ಇರಾನಿಯಿಂದ ತೊಡಗಿ ಸಂಸದ ತೇಜಸ್ವಿ ಸೂರ್ಯರವರೆಗೆ ಬಿಜೆಪಿಯ ನಾಯಕರು ಅಖಾಡಕ್ಕೆ ಇಳಿದು ‘ಬಿಜೆಪಿ ಒಬಿಸಿ ಪರ, ಕಾಂಗ್ರೆಸ್ ಒಬಿಸಿ ವಿರೋಧಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಿದ್ದರೆ ಅಂಕಿ ಅಂಶಗಳು ಏನು ಹೇಳುತ್ತಿವೆ?
ಕರ್ನಾಟಕ ಸರ್ಕಾರ ಹೊಸ ಮೀಸಲಾತಿ ನೀತಿ ಜಾರಿಗೆ ತಾನು ಒಬಿಸಿ ಸಮುದಾಯದ ಪರವಾಗಿದ್ದೇವೆ ಎಂದು ಬಿಂಬಿಸಿಕೊಂಡಿದೆ. ಮಾತ್ರವಲ್ಲದೆ, ರಾಹುಲ್ ಗಾಂಧಿ ಅವರ ‘ಮೋದಿ ಉಪನಾಮ’ ಹೇಳಿಕೆ ಒಬಿಸಿ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಸಂಸದೆ ಸ್ಮೃತಿ ಇರಾನಿಯಿಂದ ತೊಡಗಿ ಸಂಸದ ತೇಜಸ್ವಿ ಸೂರ್ಯರವರೆಗೆ ಬಿಜೆಪಿ ನಾಯಕರು ಅಖಾಡಕ್ಕೆ ಇಳಿದು ‘ಬಿಜೆಪಿ ಒಬಿಸಿ ಪರ, ಕಾಂಗ್ರೆಸ್ ಒಬಿಸಿ ವಿರೋಧಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದು ವಾಸ್ತವವೇ, ಅಂಕಿ ಅಂಶಗಳು ಏನು ಹೇಳುತ್ತಿವೆ?
ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ರಾಜ್ಯಸಭೆಯ ಮುಂದಿಟ್ಟಿರುವ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ಕಳೆದ ಐದು ವರ್ಷಗಳಲ್ಲಿ ಅಖಿಲ ಭಾರತ ಆಡಳಿತಾತ್ಮಕ ಸೇವೆಗಳಲ್ಲಿ ಒಬಿಸಿ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಅತಿ ಕಡಿಮೆಯಿದೆ.
ಆಡಳಿತಾತ್ಮಕ ಸೇವೆಗಳಿಗೆ ಮಾಡಲಾಗಿರುವ ನೇಮಕಗಳ ಶೇಕಡಾವಾರು ಗಮನಿಸಿದಲ್ಲಿ ಕಳೆದ ಐದು ವರ್ಷಗಳಲ್ಲಿ ಒಬಿಸಿ ಸಮುದಾಯದವರ ನೇಮಕ ಪ್ರಮಾಣ ಶೇ. 15.92ರಷ್ಟಿದೆ. ಪರಿಶಿಷ್ಟ ಜಾತಿಯವರ ಪ್ರಮಾಣ ಶೇ 7.65ರಷ್ಟಿದೆ ಹಾಗೂ ಪರಿಶಿಷ್ಟ ಪಂಗಡದವರು ಪ್ರಮಾಣ ಶೇ. 3.80ರಷ್ಟಿದೆ.
ವಾಸ್ತವದಲ್ಲಿ 2022ರ ಸಮಯದ ಅಂಕಿ ಅಂಶವನ್ನು 2011ರ ಅಂಕಿ ಅಂಶಕ್ಕೆ ಹೋಲಿಸಿ ನೋಡಿದರೆ ಬಿಜೆಪಿ ಸರ್ಕಾರದ ನಿಜ ಬಣ್ಣ ಬಹಿರಂಗವಾಗುತ್ತದೆ. 2011ರಲ್ಲಿ ಆಡಳಿತಾತ್ಮಕ ಸೇವೆಗಳ ಒಟ್ಟು ನೇಮಕಾತಿಯ ಶೇ 41-52ರಷ್ಟು ಪ್ರಮಾಣದಲ್ಲಿ ಒಬಿಸಿ ಸಮುದಾಯದ ಅಭ್ಯರ್ಥಿಗಳಿದ್ದರು. ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ಶೇ 16.6ರಷ್ಟಿದ್ದರೆ, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಶೇ. 8.6ರಷ್ಟಿದ್ದರು.
ಅಂಕಿ ಅಂಶಗಳು ಏನು ಹೇಳುತ್ತವೆ?
ಕೇರಳದ ಸಂಸದ ಜಾಬ್ ಬ್ರಿಟಸ್ ಅವರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು 2018ರಿಂದ 2012ರಲ್ಲಿ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ಗಳಲ್ಲಿ ಎಷ್ಟು ಒಬಿಸಿ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರ್ಷವಾರು ವಿವರವನ್ನು ನೀಡಿದ್ದಾರೆ.
ಈ ವಿವರಗಳ ಪ್ರಕಾರ, ಐಎಎಸ್, ಐಪಿಎಸ್ ಮತ್ತು ಐಒಎಫ್ಎಸ್ಗೆ 2018ರಿಂದ 2022ರ ನಡುವೆ ಒಟ್ಟು 4365 ಅಭ್ಯರ್ಥಿಗಳಲ್ಲಿ ಒಬಿಸಿ ಸಮುದಾಯದ 695, ಪರಿಶಿಷ್ಟ ಜಾತಿಯಿಂದ 334 ಹಾಗೂ ಪರಿಶಿಷ್ಟ ಪಂಗಡದಿಂದ 166 ಮಂದಿಯನ್ನು ನೇಮಿಸಲಾಗಿದೆ.
2018ರಲ್ಲಿ ಒಟ್ಟು 464 ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರಲ್ಲಿ ಒಬಿಸಿ ಸಮುದಾಯದಿಂದ 54, ಪರಿಶಿಷ್ಟ ಜಾತಿಯಿಂದ 29 ಹಾಗೂ ಪರಿಶಿಷ್ಟ ಸಮುದಾಯದಿಂದ 14 ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ. 2019-2022ರ ನಡುವೆ ನೇಮಕಗೊಂಡ ಐಎಎಸ್ ಅಧಿಕಾರಿಗಳಲ್ಲಿ ಒಬಿಸಿ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳಿಂದ ನೇಮಕಗೊಂಡ ಒಟ್ಟು ಅಭ್ಯರ್ಥಿಗಳನ್ನು ತೆಗೆದುಕೊಂಡಲ್ಲಿ ವರ್ಷದ ನೇಮಕಾತಿ ಸಂಖ್ಯೆ ನೂರರ ಒಳಗೇ ಇದೆ.
ಐಪಿಎಸ್ ಮತ್ತು ಐಎಫ್ಒಎಸ್ನಲ್ಲೂ ಕಳೆದ ಐದು ವರ್ಷಗಳಲ್ಲಿ ಒಬಿಸಿ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳಿಂದ ನೇಮಕಗೊಂಡಿರುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯೇ ಇದೆ. 2020ರಲ್ಲಿ ಆಯ್ಕೆಯಾದ 337 ಮಂದಿ ಐಪಿಎಸ್ ಅಧಿಕಾರಿಗಳಲ್ಲಿ ಒಬಿಸಿಯಿಂದ 49, ಪರಿಶಿಷ್ಟ ಜಾತಿಯ 25 ಹಾಗೂ ಪರಿಶಿಷ್ಟ ಪಂಗಡದವರು 20 ಮಂದಿ. 2021ರಲ್ಲಿ 339 ಐಪಿಎಸ್ ಅಧಿಕಾರಿಗಳು ಆಯ್ಕೆಯಾಗಿದ್ದು, ಅವರಲ್ಲಿ ಒಬಿಸಿ ಸಮುದಾಯದವರು 57, ಪರಿಶಿಷ್ಟ ಜಾತಿಯ 28 ಹಾಗೂ ಪರಿಶಿಷ್ಟ ಸಮುದಾಯದವರು 14 ಮಂದಿ.
ಸಚಿವರು ನೀಡಿದ ಮಾಹಿತಿ ಪ್ರಕಾರ 2019ರಲ್ಲಿ 371 ಐಎಎಸ್ ಅಧಿಕಾರಿಗಳು, 2020ರಲ್ಲಿ 478 ಐಎಎಸ್ ಅಧಿಕಾರಿಗಳು ನೇಮಕಗೊಂಡಿದ್ದು, ಎರಡೂ ವರ್ಷಗಳಲ್ಲಿ ತಲಾ 61 ಒಬಿಸಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 2019ರಲ್ಲಿ 28 ಮಂದಿ ಪರಿಶಿಷ್ಟ ಜಾತಿ ಮತ್ತು 14 ಮಂದಿ ಪರಿಶಿಷ್ಟ ವರ್ಗದಿಂದ ಆಯ್ಕೆಯಾಗಿದ್ದರು. 2020ರಲ್ಲಿ ಪರಿಶಿಷ್ಟ ಜಾತಿಯಿಂದ 25 ಮತ್ತು ಪರಿಶಿಷ್ಟ ಪಂಗಡದಿಂದ 14 ಮಂದಿ ಆಯ್ಕೆಯಾಗಿದ್ದಾರೆ.
2021ರಲ್ಲಿ ಒಬಿಸಿಯಿಂದ 54 ಐಎಎಸ್ ಅಧಿಕಾರಿಗಳಷ್ಟೇ ಆಯ್ಕೆಯಾದರೆ, 2022ರಲ್ಲಿ 58 ಒಬಿಸಿ ಅಭ್ಯರ್ಥಿಗಳು ಐಎಎಸ್ ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. 2021ರಲ್ಲಿ 30 ಮಂದಿ ಪರಿಶಿಷ್ಟ ಜಾತಿ ಮತ್ತು 13 ಮಂದಿ ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದರು.
2022ರಲ್ಲಿ 28 ಮಂದಿ ಪರಿಶಿಷ್ಟ ಜಾತಿ ಮತ್ತು 14 ಮಂದಿ ಪರಿಶಿಷ್ಟ ವರ್ಗದಿಂದ ಆಯ್ಕೆಯಾಗಿದ್ದರು.
2021ರಲ್ಲಿ ಆಯ್ಕೆಯಾದ 190 ಐಎಫ್ಒಎಸ್ ಅಧಿಕಾರಿಗಳಲ್ಲಿ 40 ಮಂದಿ ಒಬಿಸಿ ಸಮುದಾಯದವರು, 16 ಪರಿಶಿಷ್ಟ ಜಾತಿ ಮತ್ತು 8 ಮಂದಿ ಪರಿಶಿಷ್ಟ ಪಂಗಡದವರು.
ಈ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಮುಂದಿಟ್ಟಿರುವ ಜಾನ್ ಬ್ರಿಟಾಸ್, ಎಲ್ಲಾ ಆಡಳಿತಾತ್ಮಕ ಸೇವೆಗಳಲ್ಲಿ ಸಮುದಾಯಗಳ ಪ್ರಾತಿನಿಧ್ಯವನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೀಸಲಾತಿ ಹಂಚಿಕೆ | ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ರಾಜಕೀಯ ಗಿಮಿಕ್: ಸಿದ್ದರಾಮಯ್ಯ ಕಿಡಿ
ಪ್ರಚಾರ ಕಣದಲ್ಲಿ ಮಾತ್ರ ಒಬಿಸಿ ಪರ
ಆದರೆ, ಚುನಾವಣಾ ಕಣದಲ್ಲಿ ಬಿಜೆಪಿ ಬೇರೆಯೇ ಚಿತ್ರಣವನ್ನು ಮುಂದಿಡುತ್ತಿದೆ. 2022ರಲ್ಲಿ ಉತ್ತರ ಪ್ರದೇಶದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಸಮುದಾಯದ ಮುಖ್ಯಸ್ಥರಾದ ಭೂಪೇಂದ್ರ ಚೌಧರಿ ಅವರನ್ನು ರಾಜ್ಯಾಧ್ಯಕ್ಷನಾಗಿ ನೇಮಿಸಿದ್ದರು. ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರ ‘ಠಾಕೂರ್- ಬ್ರಾಹ್ಮಣ’ ವಿರೋಧಿ ಎನ್ನುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರನ್ನು ನೇಮಿಸುವ ಮೂಲಕ ಪರಿಶಿಷ್ಟ ಪಂಗಡಗಳಿಗೆ ಅಧಿಕಾರ ನೀಡಿರುವುದಾಗಿ ಹೇಳಿದೆ. ಆದರೆ, ಇವು ಯಾವುವೂ ನಿಜವಾದ ಅಧಿಕಾರ ಆಗಿರದೆ ತೋರಿಕೆಯ ಅಧಿಕಾರಗಳಾಗಿದ್ದವು.
ಅದೇ ರೀತಿ ಈಗ ಕರ್ನಾಟಕ ಚುನಾವಣಾ ಕಣದಲ್ಲಿ ಒಬಿಸಿ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗಿತ್ತು. ಮುಂದೆ ಚುನಾವಣೆ ನಡೆಯಲಿರುವ ಬಿಹಾರ ಮತ್ತು ಒಡಿಶಾದಲ್ಲಿ ಒಬಿಸಿ ನಾಯಕರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಕಳೆದ ವಾರವಷ್ಟೇ ಬಿಜೆಪಿ ನೇಮಿಸಿದೆ.
ಅಷ್ಟು ಸಾಲದೆಂಬಂತೆ, ಕರ್ನಾಟಕ ಚುನಾವಣಾ ಕಣದಲ್ಲಿ ಪೂರ್ಣರೂಪದಲ್ಲಿ ಕಾಂಗ್ರೆಸ್ ಒಬಿಸಿ ವಿರೋಧಿ ಎನ್ನುವ ಪ್ರಚಾರ ಮುಂದಿಡಲಾಗುತ್ತಿದೆ. ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡುವ ಮೂಲಕ ಒಬಿಸಿ ಪರವಾಗಿ ಕೆಲಸ ಮಾಡಿರುವುದಾಗಿ ಹೇಳಿಕೊಳ್ಳುತ್ತಿದೆ. ವಾಸ್ತವದಲ್ಲಿ ಮೋದಿ ಸಮುದಾಯವನ್ನು ಒಬಿಸಿಗೆ ಸೇರಿಸಿರುವುದೇ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ. ಮೂಲ ಒಬಿಸಿ ಪಟ್ಟಿಯಲ್ಲಿ ಮೋದಿ ಸಮುದಾಯದ ಹೆಸರೇ ಇರಲಿಲ್ಲ ಎನ್ನುವುದು ಮತ್ತೊಂದು ಸತ್ಯ!