- ‘ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊಂಡಾದರು ನಮ್ಮನ್ನು ವಿರೋಧಿಸಲಿ!‘
- ‘ಬಿಜೆಪಿಯ ಭರವಸೆಗಳನ್ನು ಜನತೆ ನಂಬಿಲ್ಲ ಎಂದು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ!‘
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆ ಚುನಾವಣೆಗೂ ಮುನ್ನಾ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸುವಂತೆ ವಿರೋಧ ಪಕ್ಷದ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ, ಗ್ಯಾರಂಟಿಗಳ ಜಾರಿಗಾಗಿ ಪ್ರತಿಭಟಿಸುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನೀಡಿದ್ದ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಹೀನಾಯ ಸೋಲು ಅನುಭವಿಸಿದ ಜೆಡಿಎಸ್ ಮತ್ತು ಬಿಜೆಪಿ ಆಡಳಿತ ಪಕ್ಷದ ವಿರುದ್ಧ ಗ್ಯಾರಂಟಿ ಜಾರಿ ವಿಷಯವನ್ನೇ ಅಸ್ತ್ರ ಮಾಡಿಕೊಂಡು ದಾಳಿ ನಡೆಸುತ್ತಿವೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ನಾವು ನೀಡಿದ ಭರವಸೆಗಳನ್ನು ಈಡೇರಿಸುವುದು ‘ಗ್ಯಾರಂಟಿ’. ಆದರೆ, ಬಿಜೆಪಿ ನಾಯಕರು ಚುನಾವಣೆಗೂ ಮೊದಲು ಉಚಿತ ಯೋಜನೆಗಳನ್ನು ನೀಡಬಾರದು, ಉಚಿತ ಕೊಟ್ಟರೆ ಶ್ರೀಲಂಕಾ ಆಗತ್ತೆ, ಪಾಕಿಸ್ತಾನ್ ಆಗತ್ತೆ ಎಂದು ವಿರೋಧಿಸಿದ್ದವರು ಇಂದು ಗ್ಯಾರಂಟಿ ಜಾರಿಗಾಗಿ ಪ್ರತಿಭಟಿಸುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಗರಿಗೆ ಒಂದೇ ನಿಲುವು ಇಲ್ಲದಿರುವುದೇಕೆ?” ಎಂದು ತಿರುಗೇಟು ನೀಡಿದೆ.
“ಚುನಾವಣೆಗೆ ನಾವೂ ಭರವಸೆಗಳನ್ನು ಕೊಟ್ಟಿದ್ದೆವು. ಬಿಜೆಪಿಯೂ ಭರಪೂರ ಭರವಸೆಗಳನ್ನು ಕೊಟ್ಟಿತ್ತು. ಆದರೆ, ಬಿಜೆಪಿ ಇಂದು ಜನತೆ ಕಾಂಗ್ರೆಸ್ಸಿನ ಭರವಸೆಗಳಿಗೆ ಮತ ಹಾಕಿದ್ದಾರೆ ಎನ್ನುತ್ತಿದೆ. ಹಾಗಾದರೆ ಬಿಜೆಪಿಯ ಭರವಸೆಗಳನ್ನು ಜನತೆ ನಂಬಿಲ್ಲ, ಸುಳ್ಳಿನ ಬಿಜೆಪಿ ಮೇಲೆ ಜನತೆಗೆ ಭರವಸೆ ಉಳಿದಿಲ್ಲ ಎನ್ನುವುದನ್ನು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ!” ಎಂದು ಕುಟುಕಿದೆ.
ಈ ಸುದ್ದಿ ಓದಿದ್ದೀರಾ? ಮೊದಲ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಎಂಟು ಮಂದಿ
“ನಾವು ಗೆದ್ದೂ ಆಯ್ತು, ಸಿಎಂ, ಡಿಸಿಎಂ ಆಯ್ಕೆಯೂ ಆಯ್ತು, ಸಚಿವ ಸಂಪುಟವೂ ರೆಡಿ ಆಯ್ತು, ಸರ್ಕಾರದ ರಚನೆಯೂ ಆಯ್ತು, ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ! ನೈತಿಕತೆ ಇರದಿದ್ದರೇನಂತೆ, ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊಂಡಾದರು ಬಿಜೆಪಿ ನಮ್ಮನ್ನು ವಿರೋಧಿಸಲಿ!” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.