- ಟೇಕಾಫ್ ಆದ ಸರ್ಕಾರ; ಜನತಾದರ್ಶನ ಆರಂಭಿಸಿದ ಸಿದ್ದರಾಮಯ್ಯ
- ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ಹರಿದು ಬಂದ ಜನ
ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಜನಸೇವೆಯತ್ತ ಮುಖ ಮಾಡಿ ಜನತಾ ದರ್ಶನ ಆರಂಭಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಎರಡು ದಿನದಲ್ಲೇ ರಾಜಧಾನಿಯಲ್ಲಿನ ಮಳೆ ಅವಾಂತರಕ್ಕೆ ಸಿಕ್ಕು ಸಾವನ್ನಪ್ಪಿದ್ದ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಿ, ಮಳೆಗಾಲಕ್ಕೆ ನಗರವನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಿದ್ದರು.
ಜನಪರ ಕಾಳಜಿಕ ಕೆಲಸದ ಮೂಲಕ ಆಡಳಿತ ಯಂತ್ರಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಅದರ ಮುಂದಿನ ಭಾಗವಾಗಿ ಜನತಾದರ್ಶನ ಆರಂಭಿಸಿದ್ದಾರೆ.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರ ಕನಸಿನ ಕೂಸಾದ ಈ ಯೋಜನೆಯನ್ನು ಜನಾನುರಾಗಿಯಾಗಿ, ಅಷ್ಟೇ ಸಮರ್ಥವಾಗಿ ಮುನ್ನಡೆಸಿಕೊಂಡು ಬಂದವರು ಸಿದ್ದರಾಮಯ್ಯ.
ತಮ್ಮ ಎರಡನೇ ಅವಧಿಯಲ್ಲೂ ಅದರತ್ತ ಆಸ್ಥೆ ವಹಿಸಿರುವ ಸಿಎಂ, ಸೋಮವಾರ ಮುಂಜಾನೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಜನರ ದೂರು, ಅಹವಾಲುಗಳನ್ನು ಆಲಿಸಿ, ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಗ್ಯಾರಂಟಿ ಜಾರಿಗೆ ಸಮಯ ಬೇಕು; ಕೊಟ್ಟ ಮಾತು ಈಡೇರಿಸುತ್ತೇವೆ : ಡಿ ಕೆ ಶಿವಕುಮಾರ್
ಸಿಎಂ ಅವರ ಈ ಕಾರ್ಯಕ್ಕೆ ನೆರೆದಿದ್ದವರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇದಾದ ಬಳಿಕ ನಿಗದಿಯಂತೆ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಜಾರಿ ಸಲುವಾಗಿ ಸಭೆ ನಡೆಸಿದರು.
ಈ ಸಭೆಯಲ್ಲಿ ಎಲ್ಲ ಇಲಾಖೆ ಪ್ರಮುಖರು ಭಾಗವಹಿಸಿ, ಇಲಾಖೆಗಳಲ್ಲಿನ ಆರ್ಥಿಕ ಸ್ಥಿತಿ, ಪ್ರಗತಿ ಹಾಗೂ ಯೋಜನೆ ಜಾರಿಗೆ ಅಗತ್ಯವಾದ ಸಲಹೆ ಸೂಚನೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಿದರು.