- ಕಾಂಗ್ರೆಸ್ನ 5ನೇ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ
- ಮಹಿಳಾ ಮತದಾರರಿಗೆ ಬಂಪರ್ ಕೊಡುಗೆ ಘೋಷಿಸಿದ ಕೈ ಪಕ್ಷ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಬೇಟೆಗೆ ನಿಂತಿರುವ ಕಾಂಗ್ರೆಸ್, 5ನೇ ಗ್ಯಾರಂಟಿ ಯೋಜನೆ ಘೋಷಿಸುವ ಮೂಲಕ, ತನ್ನ ಗ್ಯಾರಂಟಿ ಯೋಜನೆಗಳ ಸರಣಿಯನ್ನು ಮುಂದುವರೆಸಿದೆ.
ಇದರಂತೆ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಕೊಡುಗೆಯನ್ನು ಘೋಷಿಸಿದೆ. ಆ ಮೂಲಕ ರಾಜ್ಯದಲ್ಲಿರುವ 2,63,98,483 ಮಹಿಳಾ ಮತದಾರರನ್ನು ತನ್ನತ್ತ ಸೆಳೆದುಕೊಳ್ಳಲು ಮೆಗಾ ಪ್ಲಾನ್ ರೂಪಿಸಿದೆ.
ಇದು ಮಹಿಳೆಯರಿಗಾಗಿಯೇ ಘೋಷಿಸಿರುವ ಕಾಂಗ್ರೆಸ್ನ ಎರಡನೇ ದೊಡ್ಡ ಯೋಜನೆ. ಈ ಮೊದಲು ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಘೋಷಿಸಿತ್ತು.
ಇಂದು (ಏ 27) ಮಂಗಳೂರಿನಲ್ಲಿ ಐದನೇ ಗ್ಯಾರಂಟಿ ಯೋಜನೆ ಘೋಷಿಸಿದ ರಾಹುಲ್ ಗಾಂಧಿ, ನಮ್ಮ ಮನೆ ಮಹಿಳೆಯರ ಹುಂಡಿ ಡಬ್ಬಿಗಳಿಂದ ರಾಜ್ಯದ 40% ಸರ್ಕಾರ ಹಣ ಕದ್ದಿದೆ. ಇದನ್ನು ನಾವು ಮರಳಿ ಈ ಯೋಜನೆ ರೂಪದಲ್ಲಿ ಕೊಡಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೊದಲ ಕ್ಯಾಬಿನೆಟ್ನಲ್ಲೇ ಇದನ್ನು ಘೋಷಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಸವಾಲೆಸೆದ ರಾಹುಲ್ ಗಾಂಧಿ, “ಮೋದಿಜಿ, ನಾವು ನಾಲ್ಕು ಭರವಸೆ ಈಡೇರಿಸುತ್ತೇವೆ. ನೀವು ದೇಶದಲ್ಲಿ ಇದನ್ನು ಈಡೇರಿಸುತ್ತೀರಾ” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಉಳಿದ ನಾಲ್ಕು ಗ್ಯಾರಂಟಿ ಘೋಷಣೆಗಳು ಹೀಗಿವೆ.
ಗೃಹ ಜ್ಯೋತಿ ಯೋಜನೆ
ಕಾಂಗ್ರೆಸ್ ಈ ವರ್ಷದ ಜನವರಿಯಲ್ಲಿ ತಮ್ಮ ಮೊದಲ ಭರವಸೆಯಾಗಿ ಗೃಹ ಜ್ಯೋತಿ ಯೋಜನೆಯನ್ನು ಘೋಷಿಸಿತು. ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ ಎಂದಿದೆ.
ಗೃಹ ಲಕ್ಷ್ಮೀ ಯೋಜನೆ
ತನ್ನ ಎರಡನೇ ಚುನಾವಣಾ ಭರವಸೆಯಲ್ಲಿ, ಕಾಂಗ್ರೆಸ್ ಗೃಹ ಲಕ್ಷ್ಮೀ ಯೋಜನೆಯನ್ನು ಘೋಷಿಸಿದೆ. ಇದರಂತೆ ಈ ಯೋಜನೆಯಡಿ ರಾಜ್ಯದ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಯೋಜನೆಯಿಂದ 1.5 ಕೋಟಿ ಗೃಹಿಣಿಯರಿಗೆ ಅನುಕೂಲವಾಗಲಿದೆ. ಈ ಯೋಜನೆಯು ಕುಟುಂಬದ ಮುಖ್ಯಸ್ಥ ಮಹಿಳೆಗೆ ನೀಡಲಾಗುತ್ತದೆ.
ಅನ್ನ ಭಾಗ್ಯ
ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಜಾರಿ ತಂದಿದ್ದ ಜನಪ್ರಿಯ ಅನ್ನಭಾಗ್ಯ ಯೋಜನೆಯನ್ನು ಮರಳಿ ಅಧಿಕಾರಕ್ಕೆ ಬಂದರೆ ಪುನರಾರಂಭಿಸುವುದಾಗಿ ಕಾಂಗ್ರೆಸ್ ಮೂರನೇ ಯೋಜನೆ ರೂಪದಲ್ಲಿ ವಾಗ್ದಾನ ನೀಡಿದೆ.
‘ಅನ್ನ ಭಾಗ್ಯ’ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ.
ಈ ಸುದ್ದಿ ಓದಿದ್ದೀರಾ? : ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಯುವ ನಿಧಿ
ನಿರುದ್ಯೋಗಿ ಯುವಕರಿಗೆ ನೆರವಾಗಲು ಯುವ ನಿಧಿ ಯೋಜನೆಯನ್ನು ಜಾರಿ ತರಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಯೋಜನೆ ಅಡಿಯಲ್ಲಿ ಪದವಿ ಪಡೆದಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಲಾಗುತ್ತದೆ.
ಜೊತೆಗೆ ರಾಜ್ಯದಲ್ಲಿ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಭತ್ಯೆಯಾಗಿ ಪ್ರತಿ ತಿಂಗಳು 1500 ರೂಪಾಯಿ ನೀಡಲಾಗುತ್ತದೆ.