- ʼಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆʼ
- ʼಹೆಂಡ ಹಂಚುವ ಕಾರ್ಯಸೂಚಿ ಆರ್ಎಸ್ಎಸ್ ಕಚೇರಿಯಿಂದ ಬಂತಾ ರವಿ ಅವರೇ?ʼ
“ಬಿಜೆಪಿಯ ಸಿ ಟಿ ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ, ಜೊತೆಗೊಂದು ಮಾರಕಾಸ್ತ್ರ ಇರುತ್ತದೆ. ಈ ʼಸಿಟಿʼ ರವಿಗೂ, ಕಾರು ಆಘಾತಕ್ಕೂ, ʼಓಟಿʼ ಮದ್ಯಕ್ಕೂ ಏನು ಈ ಜನ್ಮಾಂತರದ ಸಂಬಂಧ!” ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ!” ಎಂದು ಕುಟುಕಿದೆ.
“ ʼಸಿಟಿʼ ರವಿಗೂ ʼಓಟಿʼ ಮದ್ಯಕ್ಕೂ ಯಾವ ಜನ್ಮದ ಮೈತ್ರಿ ಇದೆಯೋ? ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು. ಹೆಂಡ ಹಂಚುವ ಕಾರ್ಯಸೂಚಿ ಆರ್ಎಸ್ಎಸ್ ಕಚೇರಿಯಿಂದ ಬಂದಿದ್ದೇ ಸಿ ಟಿ ರವಿ ಅವರೇ? ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಮೋದಿ, ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ?” ಎಂದು ಕಿಚಾಯಿಸಿದೆ.
“ಶಾಸಕರಿಗೆ “ಬಾಂಬೆ ಮಿಠಾಯಿ” ಆಮಿಷ ತೋರಿಸಿ ಆಪರೇಷನ್ ಮಾಡುವ ಬಿಜೆಪಿ ಮತದಾರರಿಗೆ ಹೆಂಡ ತೋರಿಸಿ ಮತ ಪಡೆಯಲು ಮುಂದಾಗಿದೆ. ಚಿಕ್ಕಮಗಳೂರಿನಲ್ಲಿ ಸಿಟಿ ರವಿಗೆ ಸಂಬಂಧಿಸಿದ ಕಾರಿನಲ್ಲಿ “ಓಟಿ ಮದ್ಯ” ಹಾಗೂ ಲಾಂಗ್ ಪತ್ತೆಯಾಗಿದೆ. ಹೆಂಡ ಕುಡಿಸಿ, ಬೆದರಿಸಿ ಮತ ಪಡೆಯುವ ಜವಾಬ್ದಾರಿಯನ್ನು ರೌಡಿ ಮೋರ್ಚಾಗೆ ವಹಿಸಲಾಗಿದೆಯೇ” ಎಂದು ಬಿಜೆಪಿಯನ್ನು ಹಿಯಾಳಿಸಿದೆ.
ಚಿಕ್ಕಮಗಳೂರು ನಗರದ ಎಐಟಿ ವೃತ್ತ ಸಮೀಪ ಭಾನುವಾರ ರಾತ್ರಿ ಅಪಘಾತಕೀಡಾಗಿದ್ದ ಕಾರಿನಲ್ಲಿ ಶಾಸಕ ಸಿ ಟಿ ರವಿ ಭಾವಚಿತ್ರದ ಕ್ಯಾಲೆಂಡರ್ಗಳು, ಮದ್ಯದ ಪ್ಯಾಕೆಟ್ಗಳು, ಕತ್ತಿ (ಲಾಂಗ್) ಸಿಕ್ಕಿವೆ. ಕಾರು, ಚಾಲಕ ಮಂಜುನಾಥ, ಮಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.