- ದೀನದಲಿತರ ಪರ ಇರುವ ಏಕೈಕ ಧ್ವನಿ ಕಾಂಗ್ರೆಸ್ ಪಕ್ಷ
- ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ
ಬಿಜೆಪಿ ವ್ಯಾಪಾರಸ್ಥರ ಪಕ್ಷ, ಕಾಂಗ್ರೆಸ್ ದೀನದಲಿತರ ಪರ ಇರುವ ಪಕ್ಷ. ಈ ಬಾರಿ ಜನ ಯೋಚಿಸಿ ಮತ ನೀಡಿ ನಿಮ್ಮ ಆಯ್ಕೆ ಪ್ರದರ್ಶಿಸಿ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.
ತಮ್ಮ ಸ್ವಕ್ಷೇತ್ರ ಟಿ ನರಸೀಪುರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಕ್ಷದ ಸ್ಟಾರ್ ಕ್ಯಾಂಪೇನರ್ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಹದೇವಪ್ಪ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಬಡವರ, ದೀನದಲಿತರ ಪರ ಕೆಲಸ ಮಾಡುವುದಿಲ್ಲ ಅವರದ್ದೇನಿದ್ದರೂ ಅಂಬಾನಿ, ಅದಾನಿಗಳಿಗಳಿಗಿರುವ ಪಕ್ಷ. ಅವರ ಉದ್ದಾರವೇ ಬಿಜೆಪಿಯ ಸಾಧನೆ ಎಂದು ಕಿಡಿಕಾರಿದರು.
ಬಿಜೆಪಿಯವರು ಯಾವತ್ತಿಗೂ ದೇಶ ಉಳಿಸುವ ಯೋಜನೆ ಹಾಗೂ ಯೋಚನೆಯನ್ನು ಮಾಡುವವರಲ್ಲ. ಇವರದ್ದೇನಿದ್ದರೂ ಮಾರುವ ಯೋಜನೆಗಳಷ್ಟೇ ಎಂದು ಮಹದೇವಪ್ಪ ಲೇವಡಿ ಮಾಡಿದರು.
ಭಾರತೀಯ ಜನತಾಪಕ್ಷ ಹಾಗೂ ಮೋದಿ ಆಡಳಿತದಲ್ಲಿ ಸಂವಿಧಾನ ಸಂಕಷ್ಟಕ್ಕೀಡಾಗಿದೆ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ.
ಸಮಾನತೆ, ಸ್ವಾತಂತ್ರ್ಯದ ಉದ್ದೇಶವನ್ನು ಇವರು ಹಾಳು ಮಾಡುತ್ತಾರೆ. ಇವರಿಗೆ ಮತ್ತೆ ಆಡಳಿತ ನೀಡಿದರೆ ದೇಶವನ್ನು ಅವನತಿ ಕಡೆಗೆ ಒಯ್ಯುತ್ತಾರೆ ಎಂದು ಮಾಜಿ ಸಚಿವರು ಹೇಳಿದರು.
ಬಿಜೆಪಿ ಆರ್ಎಸ್ಎಸ್ ಆಣತಿಯಂತೆ ಕೆಲಸ ಮಾಡುವ ಜನವಿರೋಧಿ ಪಕ್ಷ. ಜನ ಇಲ್ಲಿ ಬದುಕುವುದು ಅಸಾಧ್ಯ ಎನ್ನುವ ವಾತಾವರಣವನ್ನು ದೇಶ ಕಂಡಿದೆ.
ಇವರೇ ಅಧಿಕಾರದಲ್ಲಿದ್ದರೆ ನಿಮ್ಮ ಅಭಿವೃದ್ದಿ ಅಸಾಧ್ಯ. ಕಾಂಗ್ರೆಸ್ ದೇಶದ ಜನರ ಪಕ್ಷ. ಇದರೊಂದಿಗಿದ್ದರೆ ಜನ ಸದಾ ಸುರಕ್ಷಿತ, ದೇಶದ ಜೊತೆ ಸಂವಿಧಾನವೂ ಭದ್ರ ಎಂದು ಮಹದೇವಪ್ಪ ಹೇಳಿದರು.
ಹಿಂದೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 165 ಭರವಸೆಗಳನ್ನೂ ಈಡೇರಿಸಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿಯವರು ಹೇಳಿದ್ದಷ್ಟೇ ಹೊರತು ಮಾಡಿದ್ದೇನೂ ಇಲ್ಲ ಎಂದರು.
ಈ ಸುದ್ದಿ ಓದಿದ್ದೀರಾ?:ಹಳೆ ಮೈಸೂರಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ : ಪ್ರಚಾರದ ಕಣಕ್ಕೆ ಎಚ್ಡಿಡಿ, ಎಚ್ಡಿಕೆ
ಸಮಯ ಸಾಧಕ ರಾಜಕೀಯನ್ನಷ್ಟೇ ಮಾಡುವ ಭಾಜಪದವರು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಮಹಿಳೆಯರು, ದಲಿತರು,ದುಡಿಯುವ ವರ್ಗವನ್ನು ಇವರು ಪ್ರಪಾತಕ್ಕೆ ತಳ್ಳಿದ್ದಾರೆ.
ಜನಪರ ಸೂಕ್ಷ್ಮತೆ, ಕಾಳಜಿ ಇಲ್ಲದ ಈ ಸರ್ಕಾರ ಎಮ್ಮೆಯ ದಪ್ಪ ಚರ್ಮದಂತೆ. ʼಇಂತಹ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಎಂದು ಮಹದೇವಪ್ಪ ಗುಡುಗಿದರು.
ನೀವೆಲ್ಲ ಮತ್ತೊಮ್ಮೆ ಯೋಚನೆ ಮಾಡಿ, ಸ್ಥಿರ ಹಾಗೂ ಸುಭದ್ರ ಸರ್ಕಾರ ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ, ನನಗೂ ಹಾಗೂ ನಮ್ಮ ಜಿಲ್ಲೆಯ ಎಲ್ಲರನ್ನೂ ಆಶೀರ್ವದಿಸಿ ಎಂದು ಕ್ಷೇತ್ರದ ಮತದಾರರು ಹಾಗೂ ಕಾಂಗ್ರೆಸ್ ಅಭಿಮಾನಿಗಳಲ್ಲಿ ವಿನಂತಿಸಿದರು.