- ಗರಿಗೆದರಿದೆ ಹಳೇ ಮೈಸೂರು ಭಾಗದ ರಾಜಕೀಯ ಲೆಕ್ಕಾಚಾರ
- ನರಸಿಂಹರಾಜ ಕ್ಷೇತ್ರದ ಗೆಲುವಿಗೆ ಜೆಡಿಎಸ್ನಿಂದ ಮಹಾ ಪ್ರಯೋಗ
ಹಳೇ ಮೈಸೂರು ಭಾಗದಲ್ಲಿ ಪಕ್ಷದ ಪ್ರಾಬಲ್ಯ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್, ಚುನಾವಣಾ ನಿವೃತ್ತಿ ಘೋಷಿಸಿರುವ ಶಾಸಕ ತನ್ವೀರ್ ಸೇಠ್ ಅವರಿಗೆ ನರಸಿಂಹರಾಜ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದ ನಾಯಕರ ನಡುವೆ ಟಿಕೆಟ್ ಜಿದ್ದಾಜಿದ್ದಿ ಏರ್ಪಡುವುದು ಸರ್ವೇ ಸಾಮಾನ್ಯ. ಆದರೆ, ಟಿಕೆಟ್ ಬೇಡವೆಂದು ಚುನಾವಣಾ ನಿವೃತ್ತಿ ಘೋಷಿಸಿದರೂ ಕಾಂಗ್ರೆಸ್ ಮಾತ್ರ ತನ್ವೀರ್ ಸೇಠ್ ಅವರನ್ನು ಸ್ಪರ್ಧೆಯಿಂದ ದೂರ ಉಳಿಯಲು ಬಿಟ್ಟಿಲ್ಲ.
ಕೆಲ ದಿನಗಳ ಹಿಂದೆ ತನ್ವೀರ್ ಸೇಠ್ ಚುನಾವಣಾ ನಿವೃತ್ತಿ ಘೋಷಿಸಿದ್ದರು. ಈ ಕುರಿತು ಎಐಸಿಸಿಗೆ ಪತ್ರ ಬರೆದಿದ್ದ ಅವರು ಚುನಾವಣೆಯಿಂದ ದೂರವಿದ್ದು, ಪಕ್ಷದ ಗೆಲುವಿಗೆ ಶ್ರಮಿಸುವೆ ಎಂದಿದ್ದರು. ತನ್ವೀರ್ ಸೇಠ್ ಅವರ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಕ್ಷೇತ್ರದಲ್ಲಿ ಕಾರ್ಯಕರ್ತರು ರಾಜಕೀಯ ಹೈಡ್ರಾಮವನ್ನೇ ಮಾಡಿದ್ದರು. ಅಭಿಮಾನಿಯೋರ್ವನಂತೂ ಆತ್ಮಹತ್ಯೆಗೆ ಕಟ್ಟಡ ಏರಿ ಕುಳಿತಿದ್ದ. ಮತ್ತೊಬ್ಬ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಳ್ಳಲು ಯತ್ನಿಸಿದ್ದ. ಈ ಎಲ್ಲ ಬೆಳವಣಿಗೆಗಳು ರಾಜ್ಯದ ಜನರ ಗಮನ ಸೆಳೆದಿದ್ದವು.
ತನ್ವೀರ್ ಸೇಠ್ ಹೇಳಿದ್ದೇನು?
“ಚುನಾವಣಾ ನಿವೃತ್ತಿ ಘೋಷಣೆ ಮಾಡಿರೋದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಬೇರಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಒಂದು ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ನಾನೇ ಮುಂದೆ ನಿಂತು ಗೆಲ್ಲಿಸುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ಗೆ ಕೆಲಸ ಮಾಡುತ್ತೇನೆ” ಎಂದಿದ್ದರು.
ಆರೋಗ್ಯದ ನೆಪವೊಡ್ಡಿದ್ದ ತನ್ವೀರ್ ಸೇಠ್ ಚುನಾವಣೆಯ ಸ್ಪರ್ಧೆಯಿಂದ ದೂರ ಉಳಿಯಲು ಯತ್ನಿಸಿದ್ದರು. ಆದರೆ, ಕಾರ್ಯಕರ್ತರ ಒತ್ತಾಯಕ್ಕೆ ಮಣಿಯಬೇಕಾಗಿದೆ.
ನರಸಿಂಹರಾಜದಲ್ಲಿ ಘಟಾನುಘಟಿಗಳ ಗುದ್ದಾಟ
ತನ್ವೀರ್ ಸೇಠ್ ಅವರನ್ನು ಕೈಬಿಡದಿರಲು ಕಾಂಗ್ರೆಸ್ಗೆ ಪ್ರಬಲ ಕಾರಣವೊಂದಿದೆ. ಕಾಂಗ್ರೆಸ್ನ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು, ಹಳೇ ಮೈಸೂರು ಭಾಗದಲ್ಲಿನ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಯತ್ನಿಸುತ್ತಿದೆ. ಈ ಉದ್ದೇಶದಿಂದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರನ್ನೇ ನರಸಿಂಹರಾಜ ಕ್ಷೇತ್ರದಿಂದ ಅಖಾಡಕ್ಕಿಳಿಸಲು ಸಜ್ಜಾಗಿದೆ.
ಸಿ ಎಂ ಇಬ್ರಾಹಿಂ ಅವರ ಸ್ಪರ್ಧೆಯಿಂದ ಕಾಂಗ್ರೆಸ್ಗೆ ಹಿನ್ನೆಡೆಯಾಗುವ ಸಾಧ್ಯತೆಗಳಿವೆ. ಮುಸ್ಲಿಂ ಮತದಾರರ ಬಾಹುಳ್ಯದ ಕ್ಷೇತ್ರದಲ್ಲಿ ಈ ಹಿಂದೆ ಎಸ್ಡಿಪಿಐ ಸೇರಿದಂತೆ ಇತರೆ ಪಕ್ಷಗಳ ಮುಸ್ಲಿಂ ಅಭ್ಯರ್ಥಿಗಳು ಗಮನಾರ್ಹ ಮತಗಳನ್ನು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ರಾಜ್ಯಾಧ್ಯಕ್ಷರನ್ನೇ ಅದೃಷ್ಟ ಪರೀಕ್ಷೆಗೆ ಬಿಟ್ಟಿದೆ.
ಆದರೆ, ಕಳೆದ ಹನ್ನೊಂದು ಚುನಾವಣೆಗಳಲ್ಲೂ ಸೇಠ್ ಮನೆತನ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿಕೊಂಡೇ ಬಂದಿದೆ. ಹಿಂದೆ ಎನ್ಆರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ತನ್ವೀರ್ ಸೇಠ್ ತಂದೆ ಅಜೀಜ್ ಸೇಠ್ ಇಲ್ಲಿ ಪಾರಮ್ಯ ಮೆರೆದರೆ, ಅವರ ಬಳಿಕ ಮಗ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಕ್ಷೇತ್ರದ ಮೇಲಿನ ಹಿಡಿತ ಕೈತಪ್ಪಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ತನ್ವೀರ್ ಸೇಠ್ ಅವರನ್ನು ಮತ್ತೆ ಚುನಾವಣಾ ಕಣಕ್ಕಿಳಿಸಿದೆ. ಮುಸ್ಲಿಂ ಮತದಾರರ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಇಬ್ಬರು ಘಟಾನುಘಟಿಗಳ ಸ್ಪರ್ಧೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಮುಸಲ್ಮಾನ ಮತದಾರರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಜೆಡಿಎಸ್ಗಿಂತ ಉತ್ತಮ ಸಾಧನೆಯನ್ನು ಎಸ್ಡಿಪಿಐ, ಪಿಎಫ್ಐ ಹಾಗೂ ಎಂಇಪಿ ಪಾರ್ಟಿಗಳು ಮಾಡಿವೆ. ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ ಸೋಲಿನೆಡೆಗೆ ಮುಖಮಾಡಿದ ಜೆಡಿಎಸ್ಗೆ ಈ ಬಾರಿ ಬಲ ತುಂಬಲು ಖುದ್ದು ರಾಜ್ಯಾಧ್ಯಕ್ಷರೇ ಕಣಕ್ಕಿಳಿಯಲಿದ್ದಾರೆ.