- ಕ್ಷೇತ್ರ ಪ್ರವೇಶಕ್ಕೂ ಮೊದಲೇ ಮುನಿಯಪ್ಪಗೆ ವಿರೋಧ
- ಸ್ಥಳೀಯರಿಗೆ ಮನ್ನಣೆ ನೀಡಿ ಎಂದ ದೇವನಹಳ್ಳಿ ಕಾಂಗ್ರೆಸ್ಸಿಗರು
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ ಎಚ್ ಮುನಿಯಪ್ಪ ಅವರಿಗೆ ಆರಂಭಿಕ ಹಿನ್ನಡೆಯಾಗಿದೆ.
ಮುನಿಯಪ್ಪಗೆ ಕ್ಷೇತ್ರದಿಂದ ಟಿಕೆಟ್ ನೀಡುವುದನ್ನು ವಿರೋಧಿಸಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಮುಖಂಡರು ರಾಜೀನಾಮೆ ಸಲ್ಲಿಸಿದ್ದಾರೆ.
ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿಯಲು ಸಜ್ಜಾದಂತೆ, ದೇವನಹಳ್ಳಿಯಿಂದ ಅದೃಷ್ಟ ಪರೀಕ್ಷೆಗೆ ಕೆ ಎಚ್ ಮುನಿಯಪ್ಪ ಮುಂದಾಗಿದ್ದರು. ಆದರೆ ಇದಕ್ಕೆ ದೇವನಹಳ್ಳಿ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ದೇವನಹಳ್ಳಿ ಟಿಕೆಟ್ ನೀಡದಂತೆ ವಿರೋಧ ವ್ಯಕ್ತವಾಗಿವೆ.
ಅವರಿಗೆ ಟಿಕೆಟ್ ನೀಡಿದಲ್ಲಿ ಕ್ಷೇತ್ರದಲ್ಲಿ ಪಕ್ಷ ಸೋಲುವ ಭೀತಿ ಇದೆ. ಜೊತೆಗೆ ಎಡಗೈ ಸಮುದಾಯದ ಮತಗಳು ಚದುರುವ ಸಾಧ್ಯತೆ ಇದೆ. ಹೀಗಾಗಿ ಕೆ ಹೆಚ್ ಮುನಿಯಪ್ಪಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ಸ್ಥಳೀಯರು ಟಿಕೆಟ್ ಆಕಾಂಕ್ಷಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡದೆಯೇ ಹೊರಗಿನಿಂದ ಬರುವವರು ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ ಎನ್ನುವುದೇ ಇಲ್ಲಿನ ಕಾಂಗ್ರೆಸ್ ನಾಯಕರ ಆಕ್ರೋಶ.
ದಲಿತ ಮತಗಳ ಪ್ರಾಬಲ್ಯ ಹೊಂದಿರುವ ಮೀಸಲು ಕ್ಷೇತ್ರದಲ್ಲಿ ದಶಕಗಳಿಂದ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಕಳೆದ ಎರಡು ಚುನಾವಣೆಗಳಿಂದ ಇಲ್ಲಿನ ಮತದಾರರು ಜೆಡಿಎಸ್ ನತ್ತ ಒಲವು ತೋರಿ ಕಾಂಗ್ರೆಸ್ ಗೆ ಹಿನ್ನೆಡೆಯುಂಟಾಗುವಂತೆ ಮಾಡಿದ್ದಾರೆ. ಈ ಕಾರಣದಿಂದ ಮತಕ್ಷೇತ್ರದಲ್ಲಿ ಮರಳಿ ಕಾಂಗ್ರೆಸ್ ಗೆಲುವು ದಾಖಲಿಸಲು ಮುನಿಯಪ್ಪರನ್ನು ಕಣಕ್ಕಿಳಿಸಿಲು ಕೈ ಪಡೆ ಯೋಜನೆ ರೂಪಿಸಿದೆ.
ಸದ್ಯ ವ್ಯಕ್ತವಾಗಿರುವ ವಿರೋಧವನ್ನು ಪಕ್ಷ ಹೇಗೆ ಶಮನಗೊಳಿಸುತ್ತದೆ ಎನ್ನುವುದರ ಮೇಲೆ ಕೆ ಎಚ್ ಮುನಿಯಪ್ಪನವರ ರಾಜ್ಯ ರಾಜಕಾರಣ ಪ್ರವೇಶದ ಭವಿಷ್ಯ ನಿರ್ಧಾರವಾಗಲಿದೆ.