- ಏ.6ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ ಹೈಕೋರ್ಟ್
- ನ್ಯಾ. ಕೆ ನಟರಾಜನ್ ಏಕಸದಸ್ಯ ಪೀಠದಿಂದ ಅರ್ಜಿ ವಿಚಾರಣೆ
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ರಾಜ್ಯ ಪ್ರಾಸಿಕ್ಯೂಷನ್ ವಿರುದ್ಧ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರವು ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸಲು ಅನುಮತಿ ನೀಡಿ, ಅಧಿಸೂಚನೆ ಹೊರಡಿಸಿತ್ತು. ಡಿ ಕೆ ಶಿವಕುಮಾರ್ ಪರ ವಾದ ಮಂಡಿಸುವ ವಕೀಲರು ಈ ಅಧಿಸೂಚನೆ ಪ್ರಶ್ನಿಸಿ ನ್ಯಾಯಮೂರ್ತಿ ಕೆ ನಟರಾಜನ್ ನೇತೃತ್ವದ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಪ್ರಾಸಿಕ್ಯೂಷನ್ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವಿ ಎಸ್ ಹೆಗಡೆ ಪೀಠದ ಮುಂದೆ ಮಾತನಾಡಿ, “ರಿಟ್ ಅರ್ಜಿಯ ತಿದ್ದುಪಡಿ ಪ್ರತಿ ನಮ್ಮ ಕೈಸೇರಿಲ್ಲ. ಈಗಾಗಲೇ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿ ಅಧಿಕಾರಿಗಳೆಲ್ಲ ಬಿಡುವಿಲ್ಲದೇ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇಂತಹ ಪ್ರಕರಣ ಕೈಗೆತ್ತಿಕೊಂಡಾಗ ಹೆಚ್ಚಿನ ಕಾನೂನು ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇರುತ್ತದೆ. ಇದಷ್ಟು ಮಾತ್ರವಲ್ಲದೇ ಅಡ್ವೊಕೇಟ್ ಜನರಲ್ ಅವರಿಂದ ಕೂಡ ವಿವರಣೆ ಪಡೆಯಬೇಕಾಗಿರುತ್ತದೆ. ಹಾಗಾಗಿ ಆಕ್ಷೇಪಣೆ ಅರ್ಜಿ ಸಲ್ಲಿಸಲು ನಾಲ್ಕು ವಾರಗಳಷ್ಟು ಸಮಯ ನೀಡಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಒಪ್ಪದ ನ್ಯಾಯಾಧೀಶರು, “ನೀವು ಪ್ರತಿಭಾರಿ ಸಮಯವನ್ನಷ್ಟೇ ಕೇಳುತ್ತಿದ್ದೀರಿ, ಅರ್ಜಿಯ ಪ್ರಗತಿಗಾಗಿ ಕೋರ್ಟ್ ಶ್ರಮಿಸಬೇಕಾಗಿದೆಯಲ್ಲಾ, ಶಿವಕುಮಾರ್ ಪರ ವಕೀಲರು ಬೇರೊಂದು ಪೀಠದಲ್ಲಿದ್ದ ಈ ಅರ್ಜಿಯನ್ನು ಇಲ್ಲೇ ವಿಚಾರಣೆ ನಡೆಸುವಂತೆ ಕೋರಿದ ಹಿನ್ನೆಲೆಯಲ್ಲಿ ಇಲ್ಲಿಗೆ ತರಿಸಿಕೊಳ್ಳಲಾಗಿದೆ. ಆದರೆ, ಮತ್ತೊಂದು ಪೀಠದಲ್ಲಿದ್ದಾಗ ರಾಜ್ಯ ಪ್ರಾಸಿಕ್ಯೂಷನ್ ಏಕೆ ಸುಮ್ಮನಿತ್ತು? ಮತ್ತೊಂದು ಕಡೆ ಸಿಬಿಐ ಕೂಡ ಬೇಗ ಬೇಗ ವಿಚಾರಣೆ ನಡೆಸುವಂತೆ ಕೇಳಿಕೊಳ್ಳುತ್ತಿದೆ. ನೀವು ನೋಡಿದರೆ ಕಾಲ ತಳ್ಳುತ್ತಿದ್ದೀರಿ. ನಿಮಗೆ ಯಾಕೆ ಸಮಯ ಕೊಡಬೇಕು?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? : ಚುನಾವಣೆ 2023 | ಕಾಂಗ್ರೆಸ್ನ ಎರಡನೇ ಪಟ್ಟಿ ಸಿದ್ಧ: ವರಿಷ್ಠರ ಅನುಮೋದನೆಗೆ ಸಲ್ಲಿಕೆ
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು “ಹೊಳ್ಳ ಅವರೇ ನೀವೇಕೆ ಸುಮ್ಮನಿದ್ದಿರಿ?” ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಹೊಳ್ಳ ಅವರು, “ಸ್ವಾಮಿ ರಾಜ್ಯ ಪ್ರಾಸಿಕ್ಯೂಷನ್, ಪ್ರತಿಬಾರಿಯೂ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು ಎಂದು ಇಷ್ಟು ದಿನ ನೂಕುತ್ತಲೇ ಬಂದಿದೆ” ಎಂದು ದೂರಿದರು.
ಮತ್ತೊಂದು ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಶಿವಕುಮಾರ್ ಪರ ಹಿರಿಯ ವಕೀಲ ಸಿ ಎಚ್ ಜಾಧವ್ ಅವರ ಕೋರಿಕೆಯ ಮೇರೆಗೆ ಮುಂದಿನ ವಿಚಾರಣೆವರೆಗೂ ವಿಸ್ತರಿಸಿತು. ಸಿಬಿಐ ಪರ ಪಿ.ಪ್ರಸನ್ನಕುಮಾರ್ ಹಾಜರಿದ್ದರು. ಉಭಯ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 6ಕ್ಕೆ ಮುಂದೂಡಿತು.
ನ್ಯಾಯಾಧೀಶರು ಅಂತಿಮವಾಗಿ ಎರಡು ದಿನಗಳ ಸಮಯ ಕೊಡಲು ಮುಂದಾದರು. ಕೊನೆಗೆ ಏ. 6ಕ್ಕೆ ವಿಚಾರಣೆಯನ್ನು ನಿಗದಿಪಡಿಸಿ ಆದೇಶ ನೀಡಿದರು. ಮತ್ತೊಂದು ಪ್ರಕರಣದಲ್ಲಿ ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್. ಜಾಧವ್ ಅವರ ಕೋರಿಕೆಯ ಮೇರೆಗೆ ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು, ಮುಂದಿನ ವಿಚಾರಣೆಯವರೆಗೂ ವಿಸ್ತರಣೆ ಮಾಡಿದರು.