- ರಾಜ್ಯ ರಾಜಕಾರಣದಲ್ಲಿ ಗೊಂಬೆ ನುಡಿದ ಭವಿಷ್ಯ ನಿಜವಾಗುತ್ತಾ?
- ಈ ಹಿಂದೆಯೂ ನುಡಿದಿದ್ದ ಗೊಂಬೆ ಭವಿಷ್ಯ ನಿಜವಾಗಿತ್ತು
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭವಿಷ್ಯದ ಬಗೆಗಿನ ಚರ್ಚೆ ಆರಂಭವಾಗಿದೆ. ಮತದಾರದಿಂದ ಹಿಡಿದು ರಾಜಕಾರಣಿಗಳವರೆಗೂ ಮುಂದೇನು ಎನ್ನುವ ಕುತೂಹಲ ಕಾಡುತ್ತಿದೆ.
ಈ ನಡುವೆ ಧಾರವಾಡದ ಗ್ರಾಮವೊಂದರಲ್ಲಿ ನಡೆದ ಯುಗಾದಿ ಆಚರಣೆಯ ವಾಡಿಕೆಯೊಂದು ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದು, ಹೊಸ ಮುಖ್ಯಮಂತ್ರಿಯ ಸಾಧ್ಯತೆಯನ್ನು ಸೂಚಿಸಿದೆ.
ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿಯಂದು ಗೊಂಬೆ ಭವಿಷ್ಯವನ್ನು ಸಂಪ್ರದಾಯದಂತೆ ಆಚರಿಸಲಾಗುತ್ತದೆ.
ಅದರಂತೆ ಯುಗಾದಿ ಅಮವಾಸ್ಯೆಯಂದು ತುಪ್ಪರಿ ಹಳ್ಳದ ದಂಡೆಯ ಮೇಲೆ ಸಮತಟ್ಟಾದ ನೆಲದಲ್ಲಿ ಆಯತಾಕಾರದ ವೇದಿಕೆ ನಿರ್ಮಿಸಿ, ಮಣ್ಣಿನ ಗೊಂಬೆ ರೀತಿಯ ಕಲಾಕೃತಿಗಳನ್ನು ಮಾಡಿ ಅದರೊಳಗೆ ಇರಿಸಲಾಗುತ್ತದೆ. ಇದರ ಹೊರಗೆ ಕಾವಲಿಗಾಗಿ ನಾಲ್ಕೂ ದಿಕ್ಕಿಗೆ ಸೇನಾಧಿಪತಿ ಬೊಂಬೆಗಳನ್ನು ನಿಲ್ಲಿಸಿರುತ್ತಾರೆ. ಒಳ ಆವರಣದಲ್ಲಿ ರೈತರು, ಸೈನಿಕರು ಹಾಗು ಕಾಳುಗಳನ್ನು ಇಡಲಾಗುತ್ತದೆ. ಬಳಿಕ ಇದಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಗ್ರಾಮಸ್ಥರು ನಿರ್ಗಮಿಸುತ್ತಾರೆ.
ಮರುದಿನ ಬೆಳಗ್ಗೆ ಬೊಂಬೆ ನೋಡಲು ಜನ ಬರುತ್ತಾರೆ. ಈ ವೇಳೆ ಅಲ್ಲಿರುವ ಕಲಾಕೃತಿಯ ಯಾವ್ಯಾವ ಭಾಗಕ್ಕೆ ಏಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಭವಿಷ್ಯ ನಿರ್ಧರಿಸುತ್ತಾರೆ. ಅದರಂತೆ ಈ ಬಾರಿಯ ಭವಿಷ್ಯವೂ ಹೊರಬಿದ್ದಿದೆ.
ಪ್ರಸಕ್ತ ವರ್ಷ ನಮ್ಮ ರಾಜ್ಯ ರಾಜಕಾರಣದ ದಿಕ್ಕನ್ನು ಪ್ರತಿನಿಧಿಸುವಂತೆ ನಿಂತಿದ್ದ ಸೇನಾಧಿಪತಿ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ತಲೆ ಮೇಲಿನ ಟೋಪಿ ಹಿಂಭಾಗಕ್ಕೆ ಸರಿದಿದೆ. ಇದು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸೂಚನೆ ಎನ್ನುವುದು ಗ್ರಾಮಸ್ಥರ ಅಭಿಮತ
ನಿಜವಾಗಿದ್ದ ಬೊಂಬೆ ಭವಿಷ್ಯ
ಈ ಹಿಂದೆ ಇಂದಿರಾ ಗಾಂಧಿ ಹತ್ಯೆ ಹಾಗೂ ರಾಜಶೇಖರರೆಡ್ಡಿ ವಿಮಾನ ಅಪಘಾತದ ವರ್ಷವೂ ಬೊಂಬೆ ಭವಿಷ್ಯ ನುಡಿದಿದ್ದು, ಆಯಾ ದಿಕ್ಕಿನ ಬೊಂಬೆ ಸಂಪೂರ್ಣ ಹಾಳಾಗಿತ್ತಂತೆ. ಅಂದು ಈ ಬಗ್ಗೆ ಭವಿಷ್ಯ ನುಡಿದಿದ್ದ ಗ್ರಾಮಸ್ಥರು, ಆಯಾಯ ದಿಕ್ಕಿನ ನಾಯಕರ ಜೀವಕ್ಕೆ ಅಪಾಯ ಎಂದಿದ್ದರಂತೆ.
ಹಾಗೆಯೇ ಎರಡು ವರ್ಷದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯೂ ಸಿಕ್ಕ ಗೊಂಬೆ ಭವಿಷ್ಯದಲ್ಲಿ, ರಾಜ್ಯದ ದಿಕ್ಕಿನ ಗೊಂಬೆ ಕಾಲು ಮುರಿದುಕೊಂಡಿತ್ತಂತೆ, ಅದಾದ ನಾಲ್ಕು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದಿದ್ದರೆನ್ನುವುದು ಗಮನಾರ್ಹ.
ಹನುಮಕೊಪ್ಪದ ಜನರ ಗೊಂಬೆ ಭವಿಷ್ಯಕ್ಕೆ ನೂರಾರು ವರ್ಷದ ಇತಿಹಾಸವಿದ್ದು, ಇಲ್ಲಿನ ಜನ ತಲೆತಲಾಂತರದಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದಾರೆ. ಹಿಂದೊಮ್ಮೆ ಈ ಗ್ರಾಮದಲ್ಲಿದ್ದ ಚಿದಂಬರ ಶಾಸ್ತ್ರಿ ಎನ್ನುವವರು ಊರಿಗೆ ಬರಗಾಲ ಬಂದಿದ್ದಾಗ ಶೃಂಗ ಋಷಿಯ ಮಣ್ಣಿನ ಗೊಂಬೆ ಮಾಡಿ ತಪಸ್ಸು ಮಾಡಿ, ಇಲ್ಲಿಗೆ ಮಳೆ ತರಿಸಿದ್ದರಂತೆ.
ಬಳಿಕ ಊರಿಗೆ ಯಾವುದೇ ಸಮಸ್ಯೆಯಾಗದಂತೆ ಯುಗಾದಿ ಅಮವಾಸ್ಯೆ ದಿನ ಈ ಸಂಪ್ರದಾಯ ನಡೆಸಿಕೊಂಡು ಬರಲು ತಿಳಿಸಿದ್ದರಂತೆ. ಅಂದು ಆರಂಭವಾದ ಪದ್ಧತಿ ಅನುಸರಣೆ ಇಂದಿಗೂ ಇಲ್ಲಿ ನಡೆದುಕೊಂಡು ಬರುತ್ತಿದೆ ಎನ್ನುವುದು ಗ್ರಾಮಸ್ಥರ ಹೇಳಿಕೆ.
ಒಟ್ಟಿನಲ್ಲಿ ಚುನಾವಣೆ ಕಾವು ಏರುತ್ತಿರುವ ಈ ಸಂದರ್ಭದಲ್ಲಿ ಗೊಂಬೆ ನೀಡಿರುವ ರಾಜಕೀಯ ಭವಿಷ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಜೊತೆಗೆ ಭವಿಷ್ಯ-ಜ್ಯೋತಿಷ್ಯ ನಂಬದವರು ಇದೆಲ್ಲ ಸುಳ್ಳು ಎಂದು ನಿರ್ಲಕ್ಷಿಸಿದ್ದಾರೆ. ಗೊಂಬೆ ಭವಿಷ್ಯದ ಸತ್ಯಾಸತ್ಯತೆ ಚುನಾವಣೆ ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ.