- ಆರ್ ಆಶೋಕ್, ತೇಜಸ್ವಿ ಸೂರ್ಯ ಚುನಾವಣಾ ನಿಯಮ ಮೀರಿದ್ದಾರೆ
- ನಮಗಾಗಿರುವ ಅನ್ಯಾಯದ ವಿರುದ್ದ ಕೋರ್ಟನಲ್ಲಿ ನ್ಯಾಯ ಪಡೆಯುತ್ತೇವೆ
ಮತ ಎಣಿಕೆ ವಿಚಾರದಲ್ಲಾದ ಹೈಡ್ರಾಮ ಪರಿಣಾಮ ಗೆದ್ದು ಸೋತ ಜಯನಗರ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಶಾಸಕತ್ವದ ವಿಚಾರವೀಗ ಕೋರ್ಟ್ ಮೆಟ್ಟಿಲೇರಲಿದೆ.
ಚುನಾವಣಾ ಅಕ್ರಮ ವಿಚಾರವಾಗಿ ಸೌಮ್ಯರೆಡ್ಡಿ ಶಾಸಕತ್ವ ವಿಚಾರವನ್ನು ಕೋರ್ಟ್ಗೆ ಒಯ್ದು, ನ್ಯಾಯ ಪಡೆದುಕೊಳ್ಳುವುದಾಗಿ ಅವರ ತಂದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮತ ಎಣಿಕೆ ವಿಚಾರದಲ್ಲಿ ಬಿಜೆಪಿ ಪ್ರಭಾವ ಬೀರಿದೆ. ಇಲ್ಲಿ ಅಕ್ರಮವಾಗಿದೆ. ಹೀಗಾಗಿ ಈ ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗುವುದು” ಎಂದು ಹೇಳಿದರು.
“ಚುನಾವಣಾ ಅಧಿಕಾರಿ ಅಸಿಂಧು ಎಂದು ಪರಿಗಣಿಸಿದ್ದ 250 ಮತಗಳನ್ನು ಮರು ಎಣಿಕೆ ವೇಳೆ ಲೆಕ್ಕಕ್ಕೆ ತೆಗೆದುಕೊಳ್ಳಾಗಿದೆ. ಕೆಲವು ಕಾಣದ ಕೈಗಳ ಒತ್ತಡದಿಂದಾಗಿ ಈ ಲೆಕ್ಕಾಚಾರ ನಡೆದಿದೆ. ಒಂದು ಬಾರಿ ಅಸಿಂಧು ಎಂದು ಪರಿಗಣಿಸಿದ ಮತಗಳನ್ನು ಮತ ಎಣಿಕೆ ಪ್ರಕ್ರಿಯೆಯಲ್ಲಿ ಸೇರಿಸುವಂತಿಲ್ಲ. ಇವೆಲ್ಲವನ್ನು ಕೋರ್ಟ್ ಗಮನಕ್ಕೆ ತರಲಾಗುವುದು” ಎಂದು ಅವರು ಹೇಳಿದರು.
“ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ ಕೆಲವು ರಾಜಕಾರಣಿಗಳು ಹಾಗೂ ಮಾಜಿ ಸಚಿವ ಆರ್ ಅಶೋಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪ್ರಭಾವವಿದೆ” ಎಂದು ರಾಮಲಿಂಗಾರೆಡ್ಡಿಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ಕಷ್ಟ ಪಟ್ಟಿದ್ದೀವಿ, ಕೂಲಿ ಕೊಡಿ ಎಂದು ನಮ್ಮ ನಾಯಕರನ್ನು ಕೇಳುತ್ತೇವೆ: ಡಿ ಕೆ ಸುರೇಶ್
“ಮರು ಮತ ಎಣಿಕೆ ವೇಳೆ ಅಲ್ಲಿದ್ದ ತೇಜಸ್ವಿ ಸೂರ್ಯ ಮತ್ತು ಅಶೋಕ ಅಭ್ಯರ್ಥಿಗಳ ಏಜೆಂಟರೂ ಅಲ್ಲ, ಅಭ್ಯರ್ಥಿಗಳೂ ಅಲ್ಲ. ಇವರಿಗೆ ಹೇಗೆ ಚುನಾವಣಾಧಿಕಾರಿ ಅಲ್ಲಿರಲು ಅವಕಾಶ ನೀಡಿದರು ಎನ್ನುವುದಕ್ಕೆ ಆಯೋಗ ಉತ್ತರ ನೀಡಬೇಕು” ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿ, ಶೀಘ್ರದಲ್ಲೇ ಕಾನೂನು ಸಮರಕ್ಕೆ ಮುಂದಾಗುವುದಾಗಿ ಹೇಳಿದರು.
ಈ ಹಿಂದಿನ ಮತಎಣಿಕೆ ವೇಳೆ, ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಪ್ರಕಟಿಸಿದ್ದ ಮಾಹಿತಿಯಂತೆ ಸೌಮ್ಯ ರೆಡ್ಡಿ ಕೊನೆಯ ಸುತ್ತಿನಲ್ಲಿ ಸುಮಾರು 160 ಮತಗಳಿಂದ ಮುಂದಿದ್ದು ಜಯಶಾಲಿಯಾಗಿದ್ದರು. ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ನಾಯಕರು ಮರುಮತದಾನಕ್ಕೆ ಒತ್ತಾಯ ಅರ್ಜಿ ಸಲ್ಲಿಸಿ, ಅದಕ್ಕೆ ಅವಕಾಶ ಪಡೆದು ಅಲ್ಲಿ 16 ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು.