- ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಾಜಿ ಸಚಿವ ಗುಬ್ಬಿ ವಾಸು
- ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಶ್ರೀನಿವಾಸ್
ನನ್ನ ಗಾಳಕ್ಕೂ ಸಿದ್ದರಾಮಯ್ಯ ಗಾಳಕ್ಕೂ ಬೀಳದ ಮಾಜಿ ಸಚಿವ, ಜೆಡಿಎಸ್ನ ಗುಬ್ಬಿ ವಾಸು( ಶ್ರೀನಿವಾಸ್) ಮತದಾರರ ಬದಲಾವಣೆ ಸೂಚನೆಯ ಗಾಳಕ್ಕೆ ಬಿದ್ದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಗುರುವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಕೆಶಿ, ಇತರ ಪಕ್ಷಗಳ ಸದಸ್ಯರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಬಂದ ಎಲ್ಲರಿಗೂ ಧನ್ಯವಾದಗಳು. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ತಮ್ಮ ವಿರುದ್ಧ ಬಿಜೆಪಿ ಶಾಸಕರನ್ನು ಸೆಳೆದಿರುವ ಆರೋಪ ಮಾಡಿದ ಸಿಎಂ ಬೊಮ್ಮಾಯಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ನಿಮ್ಮ ಪಕ್ಷಕ್ಕೆ ಶಕ್ತಿ ಪಡೆದುಕೊಳ್ಳಲು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಿ ನಮ್ಮ ಶಾಸಕರನ್ನು ಸೆಳೆದು ಸರ್ಕಾರ ಮಾಡಿದ್ದಿರಿ. ಇದು ನಿಮಗೆ ಮರೆತು ಹೋಯಿತೇ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಶ್ನಿಸಿದರು.
ಈಗಾಗಲೇ ನಮ್ಮ ಪಕ್ಷದತ್ತ ಜೆಡಿಎಸ್ನ 36 ಹಾಗೂ ಬಿಜೆಪಿಯಿಂದ 25ಕ್ಕೂ ಅಧಿಕ ಮಂದಿ ವಿವಿಧ ವಲಯಗಳ ಜನಪ್ರತಿನಿಧಿಗಳು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಜನ ಬಯಸಿದ ಬದಲಾವಣೆಯ ಫಲ ಎಂದು ಶಿವಕುಮಾರ್ ಹೇಳಿದರು.
ನಿಷ್ಠೆಯಿಂದ ಪಕ್ಷದ ಕೆಲಸ ಮಾಡುವೆ
ಇನ್ನು ಕಾಂಗ್ರೆಸ್ ಸೇರಿ ಮಾತನಾಡಿದ ಮಾಜಿ ಸಚಿವ ವಾಸು, ನಾನು ಮೂಲ ಕಾಂಗ್ರೆಸ್ಸಿಗ. ಯಾವ ಪಕ್ಷದಲ್ಲಿರುತ್ತೇನೋ ಅದಕ್ಕೆ ನಿಯತ್ತಿನಿಂದ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ನನ್ನ ಜವಾಬ್ಧಾರಿ ಎಂದು ಹೇಳಿದರು.
ಜೆಡಿಎಸ್ ನಾಯಕ ಕುಮಾರಸ್ವಾಮಿ ನನ್ನ ವಿಚಾರದಲ್ಲಿ ಪೂರ್ವಗ್ರಹ ಪೀಡಿತರಾಗಿ ನನ್ನ ವಿರುದ್ಧ ನಡೆದುಕೊಂಡರು. ನಾನು ಒಕ್ಕಲಿಗ ಸಮುದಾಯದ ಪರ ನಡೆದ ಪಕ್ಷಾತೀತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದನ್ನು ಅವರು ಪ್ರಶ್ನಿಸಿ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದರು.
ಪಕ್ಷದ ನೀತಿ ನಿಯಮಗಳನ್ನೇ ಉಲ್ಲಂಘಿಸಿದ ಜಿ.ಟಿ. ದೇವೇಗೌಡರ ವಿರುದ್ಧ ಏನೂ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಕೇವಲ ನನ್ನ ವಿರುದ್ಧವೇ ನಿಯಮ ಪಾಲನೆ ಮಾಡಲು ಹೊರಟಿದ್ದು ಬೇಸರ ತರಿಸಿತು. ಹಾಗಾಗಿ ನಾನು ಪಕ್ಷ ತೊರೆಯುವ ನಿರ್ಧಾರ ಮಾಡಿದೆ.
ನನಗೆ ಜನರ ಪರ ಕೆಲಸ ಮಾಡುವ ಪಕ್ಷ ಬೇಕಿತ್ತು. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಆಯ್ದುಕೊಂಡೆ. ನಿಷ್ಠೆಯಿಂದ ಪಕ್ಷದಲ್ಲಿ ಕೆಲಸ ಮಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಜಯ ತರಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ರಾಹುಲ್ ಗಾಂಧಿಯಿಂದ ಪೂಜೆ
ನೂತವಾಗಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿರುವ ಕಾಂಗ್ರೆಸ್ ಕಚೇರಿಗೆ ಪೂಜೆ ನೆರವೇರಿಸಲು ಕಾಂಗ್ರೆಸ್ ಮುಖಂಡರು ಸಿದ್ಧರಾಗಿದ್ದಾರೆ. ಈ ಕಾರ್ಯವನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರಿಂದ ನೆರವೇರಿಸಲು ನಿರ್ಧರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ವಿಚಾರ ಬಹಿರಂಗಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ಯಕರ್ತರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? :ಮೇ 10 ಬರೀ ಮತದಾನ ದಿನವಲ್ಲ; ಭ್ರಷ್ಟಾಚಾರ ನಿರ್ಮೂಲನಾ ದಿನ: ಡಿ ಕೆ ಶಿವಕುಮಾರ್
ಇವರೆಲ್ಲರೂ ಸಂಭ್ರಮಿಸಲು ಈ ಕಚೇರಿ ಸಾಲುವುದಿಲ್ಲ. ಹೀಗಾಗಿ ಹೊಸ ಕಟ್ಟಡವನ್ನು ಬಳಕೆಗೆ ಅನುವು ಮಾಡಿಕೊಳ್ಳಲು ಯೋಚಿಸಿದ್ದೇವೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರಿಂದ ಇದರ ಪೂಜೆ ನೆರವೇರಿಸಲು ಯೋಚಿಸಿದ್ದು ಅವರ ಗಮನಕ್ಕೆ ಈ ವಿಚಾರ ತರಲಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ಅವರು ಒಪ್ಪಿದರೆ, ಏಪ್ರಿಲ್ 5ರ ಕೋಲಾರ ಪ್ರಚಾರ ಕಾರ್ಯಕ್ರಮದ ಬಳಿಕ ಇದನ್ನು ನೆರವೇರಿಸುವ ಸಿದ್ಧತೆ ಮಾಡಲಾಗುವುದು ಎಂದು ಅವರು ತಿಳಿಸಿದರು.