- ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ
- ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಘಟನೆ
ಚುನಾವಣಾ ಕಣ ರಂಗೇರುತ್ತಿರುವ ಹೊತ್ತಿನಲ್ಲಿ ಪಕ್ಷಗಳ ನಾಯಕರ ವಾಕ್ಸಮರ ಒಂದು ಕಡೆಯಾದರೆ, ಕಾರ್ಯಕರ್ತರ ನಡುವಿನ ಘರ್ಷಣೆ ತಾರಕಕ್ಕೇರಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆಂಬ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಎರಡು ಪಕ್ಷದ ಕಾರ್ಯಕರ್ತರು ಪರಸ್ಪರ ಬಾಟಲ್ ಮತ್ತು ಚಾಕುವಿನಿಂದ ಹೊಡೆದಾಡಿಕೊಂಡಿದ್ದಾರೆ. ಬಿಜೆಪಿಯ ಮುಬಾರಕ್ ಪಾಷಾ ಮತ್ತು ನಜೀರ್ ಎಂಬುವವರಿಗೆ ಹಾಗೂ ಜೆಡಿಎಸ್ನ ಮುನ್ನಾ, ಸೌಕತ್ ಮತ್ತು ರಿಯಾಜ್ ಎಂಬವರಿಗೆ ಗಾಯಗಳಾಗಿವೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? : ಧಾರವಾಡ | ಎಸ್ಯುಸಿಐ ಕಾರ್ಯಕರ್ತರ ಸಭೆ; ಮಧುಲತಾ ಗೌಡ ಬೆಂಬಲಿಸುವಂತೆ ಮನವಿ
ಗಾಯಗೊಂಡಿರುವ ಮುಬಾರಕ್ ಪಾಷಾ ಅವರ ತಾಯಿ ಹಸಿನಾ ಎಂಬುವವರು ಹೆಗ್ಗೆರೆ ಗ್ರಾಮ ಪಂಚಾಯತಿಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯೆಯಾಗಿದ್ದರು. ಅವರು ಜೆಡಿಎಸ್ ಶಾಸಕರ ನೆರವಿನಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು ಎನ್ನಲಾಗಿದೆ.
ಈ ಮಧ್ಯೆ, ಹಸಿನಾ ಕುಟುಂಬದವರು ಜೆಡಿಎಸ್ ತೊರೆದು ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಇದರಿಂದ ಸಿಟ್ಟಾಗಿದ್ದ ಜೆಡಿಎಸ್ ಕಾರ್ಯಕರ್ತರು ಇವರ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.