- ಗೃಹಜ್ಯೋತಿ ಯೋಜನೆ ಮತ್ತಷ್ಟು ಮಾರ್ಗಸೂಚಿ ಹೊರಡಿಸಿದ ಸರ್ಕಾರ
- ಆಪ್ ಮೂಲಕ ಅರ್ಜಿ, ಮಾಹಿತಿ ಸಲ್ಲಿಸಲು ಸೂಚಿಸಿದ ಇಂಧನ ಇಲಾಖೆ
ಹೆಚ್ಚಿನ ಸಂಖ್ಯೆಯ ನಾಗರಿಕರು ಗೃಹಜ್ಯೋತಿ ಯೋಜನೆ ಲಾಭ ಪಡೆಯುವಂತಾಗುವ ಸಲುವಾಗಿ ರಾಜ್ಯ ಸರ್ಕಾರ ಯೋಜನೆ ಸಂಬಂಧಿ ಮತ್ತುಷ್ಟು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇಂದು (ಜೂನ್ 7) ಬೆಂಗಳೂರಿನ ಇಂಧನ ಇಲಾಖೆ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಇಂಧನ ಸಚಿವ ಕೆ ಜೆ ಜಾರ್ಜ್, ನಾಡಿನ ಜನರಿಗೆ ಅಗತ್ಯ ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ರಾಜ್ಯದ 2.16 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಆ್ಯಪ್ನಲ್ಲಿ ಜನ ಅರ್ಜಿ ಹಾಕಬೇಕು. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ಅದರ ಕರಾರು ಪತ್ರವನ್ನು ಒದಗಿಸಬೇಕು ಎಂದರು.
ಜೂನ್ 15 ರಿಂದ ಗೃಹ ಜ್ಯೋತಿ ಯೋಜನೆಯ ನೋಂದಣಿ ಆರಂಭವಾಗಲಿದೆ, ಆಗಸ್ಟ್ 1 ರಿಂದ ಈ ಯೋಜನೆ ಜಾರಿಗೆ ಬರಲಿದೆ. ಈಗಿನ ಲೆಕ್ಕಾಚಾರದ ಪ್ರಕಾರ 2 ಕೋಟಿ 16 ಲಕ್ಷ ಗೃಹಬಳಕೆ ಗ್ರಾಹಕರು ಇದ್ದಾರೆ. ಅದರಲ್ಲಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಒಳಗೆ ಬಳಕೆ ಮಾಡುವವರು ಇದ್ದಾರೆ. 2 ಲಕ್ಷ ಮಾತ್ರ 200 ಯೂನಿಟ್ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುವವರು ಇದ್ದಾರೆ. ಅದರಲ್ಲಿ 53 ಯೂನಿಟ್ ಅತಿ ಹೆಚ್ಚು ಬಳಕೆ ಮಾಡುವವರು ಇದ್ದಾರೆ ಎಂದು ಜಾರ್ಜ್ ಹೇಳಿದರು.
200 ಯೂನಿಟ್ ಒಳಗೆ ಇದ್ದರೂ ಹೆಚ್ಚುವರಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಆದರೆ ಫಿಕ್ಸ್ಡ್ ಚಾರ್ಜ್ ಇರಲ್ಲ. ಸರಾಸರಿ ಬಳಕೆಯ 10% ಹೆಚ್ಚುವರಿ ಆದ ಬಳಿಕದ ಹೆಚ್ಚುವರಿ ಯೂನಿಟ್ಗೆ 9% ಟ್ಯಾಕ್ಸ್ ಬೀಳುತ್ತದೆ. ಪ್ರತಿ ತಿಂಗಳ ಸರಾಸರಿ ಮೀರಿದರೆ ಹೆಚ್ಚುವರಿ ಯೂನಿಟ್ನ ಹಣ ಕಟ್ಟಬೇಕು. 200 ಯೂನಿಟ್ ಮೇಲ್ಪಟ್ಟ ಬಳಕೆದಾರರು ಮುಂದಿನ ವರ್ಷ ಏನಾದರೂ ಕಡಿಮೆ ಬಳಕೆ ಮಾಡಿದರೆ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದರು.
ಯೋಜನೆ ಜಾರಿಯಾಗುವ ಜುಲೈ ತಿಂಗಳಿನ ಬಿಲ್ ಅನ್ನು ಆಗಸ್ಟ್ನಲ್ಲಿ ಪಾವತಿ ಮಾಡುವುದು ಬೇಡ, ಮಿತಿ ಮೀರಿದ ಬಳಕೆಗೆ ಬಿಲ್ ಕಟ್ಟಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ?:ರೆಂಟ್ ಅಗ್ರಿಮೆಂಟ್ ಇದ್ದರೆ ಮಾತ್ರ ಬಾಡಿಗೆದಾರರಿಗೆ ʼಉಚಿತ ವಿದ್ಯುತ್ʼ: ಸಚಿವ ಕೆ ಜೆ ಜಾರ್ಜ್ ಮಾಹಿತಿ
ವಿದ್ಯುತ್ ದರ ಏರಿಕೆ ನಮ್ಮ ಸರ್ಕಾರದ್ದಲ್ಲ
ಇನ್ನು ವಿದ್ಯುತ್ ದರ ಏರಿಕೆ ವಿಚಾರವಾಗಿ ಸ್ಪಷ್ಟೀಕರಣ ನೀಡಿದ ಸಚಿವ ಜಾರ್ಜ್, ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆಯಾಗಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಆದೇಶ ಜಾರಿಗೆ ಬಂದಿರಲಿಲ್ಲ ಎಂದರು.
ವಿದ್ಯುತ್ ದರ ಏರಿಕೆ ಮಾಡುವುದಾಗಿದ್ದಿದ್ದರೆ ನಾವೇಕೆ ಗೃಹಜ್ಯೋತಿ ಯೋಜನೆ ಜಾರಿ ಮಾಡಿ ಉಚಿತ ಘೋಷಣೆ ಮಾಡುತ್ತಿದ್ದೆವು ಎಂದ ಅವರು, ನಮ್ಮ ಸರ್ಕಾರ ಬಡವರು, ಮಧ್ಯಮ ವರ್ಗದವರನ್ನು ರಕ್ಷಿಸುತ್ತಿದೆ. ಬಡವರು ಬಿಲ್ ಕಟ್ಟುವುದು ಬೇಡ ಎಂದೇ ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.