- ನ್ಯಾಯಾಲಯವು 6 ವರ್ಷ ಚುನಾವಣೆಗೆ ನಿಲ್ಲಬಾರದು ಅಂತ ಹೇಳಿಲ್ಲ
- ಅಸಿಂಧು ಆದೇಶ ಬಂದ ನಂತರ, ಮೊದಲ ಬಾರಿಗೆ ಕಾಣಿಸಿಕೊಂಡ ಶಾಸಕ
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರನ್ನು ಕರ್ನಾಟಕ ಹೈಕೋರ್ಟ್ ಆಯ್ಕೆ ಅಸಿಂಧುಗೊಳಿಸಿ ಆದೇಶ ಹೊರಡಿಸಿದ ನಂತರ, ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು, “ನ್ಯಾಯಾಲಯವು ನನ್ನನ್ನ ಅಸಿಂಧುಗೊಳಿಸಲಾಗಿದೆಯೇ ಹೊರತು, ಅನರ್ಹಗೊಳಿಸಿಲ್ಲ” ಎಂದು ಸ್ಪಷ್ಟನೆ ನೀಡಿದರು.
ತುಮಕೂರಿನ ಬಳಗೆರೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಗೌರಿಶಂಕರ್, “ನಿನ್ನೆ ಮೊನ್ನೆಯಿಂದ ಕೋರ್ಟ್ ಆದೇಶವನ್ನು ಇಟ್ಟುಕೊಂಡು ನನ್ನ ಮೇಲೆ ಇಲ್ಲಸಲ್ಲದ ಊಹಾಪೋಹಗಳನ್ನು ಹರಡಿಸಲಾಗುತ್ತಿದೆ. ಕೋರ್ಟ್ ಆದೇಶದಲ್ಲಿ ಸತ್ಯಾಂಶ ಏನಿದೆ ಎನ್ನುವುದನ್ನು ತಿಳಿಸಲು ಬಂದಿದ್ದೇನೆ” ಎಂದು ಹೇಳಿದರು.
“ಕೆಲವರು ನನ್ನನ್ನು ಶಾಸಕ ಸ್ಥಾನದಿಂದ ಅನೂರ್ಜಿತಗೊಳಿಸಬೇಕು ಎಂದು ದೂರು ದಾಖಲಿಸಿದ್ದರು. ಆದರೆ, ನ್ಯಾಯಾಲಯವು ನನ್ನ ಆಯ್ಕೆಯನ್ನು ಅಸಿಂಧುಗೊಳಿಸಿದೆಯೇ ಹೊರತು, ಅನರ್ಹಗೊಳಿಸಿಲ್ಲ. ಕೆಲವರು ಸುಖಾ ಸುಮ್ಮನೆ ತೇಜೋವಧೆ ಮಾಡ್ತಿದ್ದಾರೆ” ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? : ಮುಸ್ಲಿಮರ ಮೀಸಲಾತಿ ರದ್ದು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ; ವಿಚಾರಣೆ ಮುಂದೂಡಿಕೆ
“ನನ್ನ ಮೇಲೆ ಬಂದಿರುವ ತೀರ್ಪಿನಲ್ಲಿ ಮಂಜುನಾಥ್ ಎಂಬುವವರ ಹೆಸರು ಉಲ್ಲೇಖಿಸಲಾಗಿದೆ. ಆದರೆ, ಆ ವ್ಯಕ್ತಿ ಯಾರೆಂಬುದೇ ನನಗೆ ಗೊತ್ತಿಲ್ಲ, ನನಗೆ ಪರಿಚಯವೇ ಇಲ್ಲದ ವ್ಯಕ್ತಿ ನನ್ನ ಬಗ್ಗೆ ಹೇಗೆ ಪ್ರಚಾರ ಮಾಡುತ್ತಾರೆ, ಬಾಂಡ್ ಹೇಗೆ ಹಂಚುತ್ತಾರೆ” ಎಂದು ಪ್ರಶ್ನಿಸಿದರು.
“ನ್ಯಾಯಾಲಯವು ನಾನು 6 ವರ್ಷ ಚುನಾವಣೆಗೆ ನಿಲ್ಲಬಾರದು ಅಂತ ಎಲ್ಲಿಯೂ ಹೇಳಿಲ್ಲ. ಚುನಾವಣೆಗೆ ನಿಲ್ಲಲ್ಲು ಯಾವುದೇ ತೊಂದರೆ ಇಲ್ಲ, ನಮ್ಮ ಕಾರ್ಯಕರ್ತರು ಆತಂಕಪಡಬೇಕಿಲ್ಲ. ಮಾಧ್ಯಮದವರು 6 ವರ್ಷ ನಿಲ್ಲುವಂತಿಲ್ಲ ಅನ್ನೋದನ್ನು ಪ್ರಸಾರ ಮಾಡಬೇಡಿ” ಎಂದು ಮನವಿ ಮಾಡಿಕೊಂಡರು.