- ಜೆಡಿಎಸ್ ಗೆಲುವೇ ಮುಖ್ಯ ಎಂದ ನಿಖಿಲ್
- ಪಕ್ಷದಲ್ಲಿ ದೇವೇಗೌಡರ ನಿರ್ಧಾರವೇ ಅಂತಿಮ
ಪಕ್ಷ ಹಾಗೂ ಪಕ್ಷದ ವರಿಷ್ಠರು ಹೇಳಿದಲ್ಲಿ ನಾನೇ ಚುನಾವಣಾ ಕಣದಿಂದ ಹಿಂದೆ ಸರಿಯುವೆ ಎಂದು ರಾಮನಗರ ಜೆಡಿಎಸ್ ಅಭ್ಯರ್ಥಿ, ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅವರ ಹೇಳಿಕೆ ಈಗ ಪಕ್ಷದೊಳಗೆ ಹೊಸ ಸಂಚಲನ ಸೃಷ್ಟಿಸಿದೆ. ಜೊತೆಗೆ ಜೆಡಿಎಸ್ನೊಳಗೆ ಎಲ್ಲವೂ ಸರಿ ಇಲ್ಲವೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ನನ್ನ ತಾಯಿ ಅನಿತಾ ಕುಮಾರಸ್ವಾಮಿ ಚುನಾವಣೆ ಸ್ಪರ್ಧೆಗೆ ಟಿಕೆಟ್ ಕೇಳಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಊಹಾಪೋಹದ ವಿಚಾರ. ಅನಿತಾ ಕುಮಾರಸ್ವಾಮಿಯವರು ಈಗಾಗಲೇ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಮರಳಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ನಿಖಿಲ್ ಹೇಳಿದರು.
ಮುಂದುವರೆದ ಅವರು ನಾವೆಲ್ಲರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪ್ರಾದೇಶಿಕ ಪಕ್ಷವನ್ನು ಬೆಳೆಸಬೇಕೆನ್ನುವುದು ನಮ್ಮ ಗುರಿ. ಇದಕ್ಕಾಗಿ ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ.
ಎಲ್ಲವಕ್ಕೂ ಕುಟುಂಬ ರಾಜಕಾರಣವನ್ನೇ ಬೊಟ್ಟು ಮಾಡು ತೋರಿಸುವುದು ಸರಿಯಲ್ಲ. ರಾಷ್ಟ್ರೀಯ ಪಕ್ಷಗಳಲ್ಲೂ ಈ ರಾಜಕಾರಣ ಇಲ್ಲವೇ, ಜೆಡಿಎಸ್ ಮಾತ್ರವೇ ಎಲ್ಲರ ಕಣ್ಣಿಗೆ ಕಾಣುತ್ತದೆಯೇ ಎಂದು ನಿಖಿಲ್ ಕಿಡಿಕಾರಿದರು.
ಎಲ್ಲರಂತೆ ನನಗೂ ಜನಪರ, ರೈತಪರ ನಾಯಕ ಎಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಪಕ್ಷ ಹೇಳಿದರೆ ನಾನೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ. ಪಕ್ಷದ ಗೆಲುವೊಂದೇ ನಮಗೆ ಮುಖ್ಯ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯೋಜನೆ ಜಾರಿಗೆ ತರಲು 4 ತಿಂಗಳಿಂದ ಎಚ್ಡಿಕೆ ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕಾದರೂ ನಮ್ಮ ಪಕ್ಷವನ್ನು ಜನ ಅಧಿಕಾರಕ್ಕೆ ತರಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?:ನಮ್ಮ ಬೆಂಬಲವಿಲ್ಲದೆ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ: ಗಾಲಿ ಜನಾರ್ದನ ರೆಡ್ಡಿ
ವರಿಷ್ಠರ ತೀರ್ಮಾನವೇ ಅಂತಿಮ:
ಹಾಸನ ಕ್ಷೇತ್ರಕ್ಕೆ ಟಿಕೆಟ್ ನೀಡುವ ವಿಚಾರದಲ್ಲಿನ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಇರುವುದು ಸಹಜ. ಆದರೆ ಇವೆಲ್ಲವನ್ನೂ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ದೇವೇಗೌಡರ ನಿರ್ಧಾರವೇ ಅಂತಿಮ ಎಂದು ನಿಖಿಲ್ ಹೇಳಿದರು.