- ಬಿಎಸ್ವೈ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ ಬೊಮ್ಮಾಯಿ
- ಶುಕ್ರವಾರ ಸಂಜೆ ದೆಹಲಿಗೆ ತೆರಳಲಿರುವ ರಾಜ್ಯ ನಾಯಕರು
ಬಿಜೆಪಿ ಟಿಕೆಟ್ ತೀವ್ರ ಒತ್ತಡ ಇರುವುದು ನಿಜ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ತಿಣುಕಾಡುತ್ತಿದೆ. ಈ ಕುರಿತು ಬಿಜೆಪಿ ನಾಯಕರು ಸದಾ ಜಾರಿಕೊಳ್ಳುತ್ತಾ ಬಂದಿದ್ದಾರೆ. ಆದರೆ, ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಒತ್ತಡ ಇರುವುದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಯಡಿಯೂರಪ್ಪ, “ಟಿಕೆಟ್ ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ಸಂಜೆ ದೆಹಲಿಗೆ ಹೋಗುತ್ತಿದ್ದೇವೆ. ಪಟ್ಟಿ ಸಿದ್ಧ ಮಾಡಬೇಕಿರುವ ಕಾರಣಕ್ಕೆ ಪ್ರಮುಖರ ಜೊತೆಗೆ ಚರ್ಚೆ ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
“ಎಲ್ಲರೊಂದಿಗೆ ಚರ್ಚೆ ಮಾಡಿ ಪಟ್ಟಿ ಅಂತಿಮಗೊಳಿಸಲಾಗುವುದು. ಟಿಕೆಟ್ಗಾಗಿ ಬಹಳ ಒತ್ತಡ ಇರೋದು ನಿಜ. ಈಗಾಗಲೇ ಇಬ್ಬರು ಮೂವರು ಹೆಸರನ್ನು ಅಂತಿಮ ಮಾಡಿ ಹೈಕಮಾಂಡ್ಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ.
“ನಾನು, ಮುಖ್ಯಮಂತ್ರಿಗಳು ಮತ್ತು ಪ್ರಮುಖರು ದೆಹಲಿಗೆ ಹೋಗುತ್ತಿದ್ದೇವೆ. ಯಾರು ಗೆಲ್ತಾರೆ ಅನ್ನೋ ಬಗ್ಗೆ ಚರ್ಚಿಸಿ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ವೈಎಸ್ವಿ ದತ್ತಗೆ ತಪ್ಪಿದ ಕಾಂಗ್ರೆಸ್ ಟಿಕೆಟ್: ಅಭಿಮಾನಿಗಳಿಗೆ ಪತ್ರದ ಮೂಲಕ ಸಭೆಗೆ ಆಹ್ವಾನ
ಆದರೆ, ಯಡಿಯೂರಪ್ಪ ಅವರ ಹೇಳಿಕೆಗೆ ತದ್ವಿರುದ್ಧ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಯಾವುದೇ ಆತಂಕ ಇಲ್ಲ” ಎಂದಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಹೆಚ್ಚಿನ ಆಕಾಂಕ್ಷಿಗಳಿದ್ದಾಗ ಪೈಪೋಟಿ ಸಹಜವಾಗಿ ಇರಲಿದೆ. 8 ಮತ್ತು 9 ರಂದು ಚುನಾವಣಾ ಆಯ್ಕೆ ಸಮಿತಿ ಸಭೆ ಸೇರಿ, ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಮಹೇಶ್ ಕುಮಟಳ್ಳಿ ಸೋಲನ್ನು ನನ್ನ ತಲೆಗೆ ಕಟ್ಟಲು ನೋಡುತ್ತಿದ್ದಾರೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, “ಲಕ್ಷ್ಮಣ್ ಸವದಿ ಅವರ ಬಳಿ ಮಾತನಾಡಿದ್ದು ಆ ರೀತಿ ಏನೂ ಇಲ್ಲ. ಅವರ ಜವಾಬ್ದಾರಿಯ ಬಗ್ಗೆ ಅವರಿಗೆ ಅರಿವಿದೆ ಎಂದು ತಿಳಿದಿದ್ದೇನೆ. ಅವರ ಬಳಿ ಮಾತನಾಡಿದ್ದು ಎಲ್ಲವೂ ಸರಿ ಹೋಗುತ್ತದೆ” ಎಂದಿದ್ದಾರೆ.