- ಲಿಂಗಾಯತರ ಮೀಸಲಾತಿ ವಿಚಾರ ಹೈಕೋರ್ಟ್ ಮಧ್ಯಂತರ ಆದೇಶ ತೆರವು
- ಸಂಪುಟ ಸಭೆ ನಿರ್ಧಾರ ನೋಡಿ ಮುಂದಿನ ಹೋರಾಟ; ಜಯಮೃತ್ಯುಂಜಯ ಶ್ರೀ
ಶುಕ್ರವಾರ ನಡೆಯಲಿರುವ ರಾಜ್ಯ ಸರ್ಕಾರದ ಸಂಪುಟ ಸಭೆ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಲಿಂಗಾಯತ-ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒದಗಿಸುವುದು ಹಾಗೂ ಪರಿಶಿಷ್ಟರ ಮೀಸಲಾತಿಯನ್ನು ಶೆಡ್ಯೂಲ್ 9ಕ್ಕೆ ಸೇರಿಸುವ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಮತೊಂದೆಡೆ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ 2ಸಿ, 2ಡಿ ಮೀಸಲಾತಿಗೆ ಸಮ್ಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ತೆರವುಗೊಳಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ಹೈಕೋರ್ಟ್ ಆದೇಶವನ್ನ ಸ್ವಾಗತಿಸಿರುವುದಾಗಿ ಹೇಳಿದ್ದಾರೆ.
ಜೊತೆಗೆ ಸರ್ಕಾರಕ್ಕೆ ಮನವಿ ಮಾಡಿರುವ ಅವರು ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕು. ಸಂಪುಟದಲ್ಲಿ ಚರ್ಚಿಸಿ 2ಎಗೆ ಸಮನಾದ ಪ್ರವರ್ಗ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಲಿಂಗಾಯತ-ಪಂಚಮಸಾಲಿಗಳಿಗೆ ಶೇ.5ರಷ್ಟು ಮೀಸಲಾತಿ ಇದೆ. ಇದನ್ನ ಶೇ.10ಕ್ಕೇ ಏರಿಸಿದರೂ ನಮಗೆ ಖುಷಿಯಾಗುತ್ತದೆ. ಈ ನಿರ್ಧಾರ ಸಚಿವ ಸಂಪುಟದಲ್ಲಿ ಬರಲಿದೆ ಎನ್ನುವ ವಿಶ್ವಾಸವನ್ನು ಜಯಮೃತ್ಯುಂಜಯ ಶ್ರೀಗಳು ವ್ಯಕ್ತಪಡಿಸಿದರು. ಹಾಗೆಯೇ ಸಂಪುಟ ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.