- ಏಪ್ರಿಲ್ 6ರವರೆಗೆ ನಡೆಯಲಿರುವ ಎರಡನೇ ಅವಧಿಯ ಅಧಿವೇಶನ
- ಲೋಕಸಭೆಗೆ ನಿಲುವಳಿ ಸೂಚನೆ ಸಲ್ಲಿಸಿದ ಮನೀಶ್ ತಿವಾರಿ
ಲೋಕಸಭೆ ಹಾಗೂ ರಾಜ್ಯಸಭೆಯ ಸಂಸದರು ಸಂಸತ್ತಿನಲ್ಲಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಕಚೇರಿಯಲ್ಲಿ ಸೋಮವಾರ (ಮಾರ್ಚ್ 27) ಬೆಳಿಗ್ಗೆ 10.30ಕ್ಕೆ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯ ವಿಚಾರವಾಗಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆ ಆಯೋಜಿಸಲಾಗಿದೆ. ಅದಾನಿ ಹಗರಣ ಹಾಗೂ ರಾಹುಲ್ ಅವರ ಅನರ್ಹತೆಗೆ ಸಂಬಂಧಿಸಿ ಕೇಂದ್ರದ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಸಂಸದರು ಸಂಸತ್ತು ಅಧಿವೇಶನಕ್ಕೆ ಕಪ್ಪು ವಸ್ತ್ರ ಧರಿಸಿ ಹಾಜರಾಗಲು ನಿರ್ಧರಿಸಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಅನರ್ಹತೆ ವಿಚಾರವನ್ನು ಚರ್ಚೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಸೋಮವಾರ ನಿಲುವಳಿ ಸೂಚನೆ ನೀಡಿದ್ದಾರೆ.
ಎರಡನೇ ಅವಧಿಯ ಬಜೆಟ್ ಅಧಿವೇಶನ ಆರಂಭವಾದಾಗಿನಿಂದ ಉದ್ಯಮಿ ಗೌತಮ್ ಅದಾನಿ ಕುರಿತ ಹಿಂಡನ್ಬರ್ಗ್ ಸಂಶೋಧನಾ ವರದಿ ವಿಚಾರವಾಗಿ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಪ್ರತಿಭಟಿಸುತ್ತಿವೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಅನರ್ಹತೆ | ನರೇಂದ್ರ ಮೋದಿ ಒಬ್ಬ ಹೇಡಿ: ಪ್ರಿಯಾಂಕ ವಾದ್ರಾ ಕಿಡಿ
ಸಮಾನಮನಸ್ಕ ಪ್ರತಿಪಕ್ಷಗಳು ಸದನದಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಪ್ರತಿಪಕ್ಷಗಳ ಸಂಸದರು ಸಭೆ ಸೇರಿವೆ. ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರೂ ಭಾಗವಹಿಸಿರುವುದಾಗಿ ವರದಿಯಾಗಿದೆ.
ಎರಡನೇ ಅವಧಿಯ ಬಜೆಟ್ ಅಧಿವೇಶನದ ಮೂರನೇ ವಾರವೂ ಪ್ರತಿಪಕ್ಷಗಳ ಪ್ರತಿಭಟನೆಗೆ ಉಭಯ ಸದನಗಳೂ ಸಾಕ್ಷಿಯಾಗಿವೆ. ಮಾರ್ಚ್ 13ರಿಂದ ಆರಂಭವಾಗಿರುವ ಎರಡನೇ ಅವಧಿ ಅಧಿವೇಶನ ಏಪ್ರಿಲ್ 6ರವರೆಗೆ ನಡೆಯಲಿದೆ.