ಶಾಸಕ ಜಮೀರ್‌ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ : ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Date:

  • ಎಫ್‌ಐಆರ್‌ ರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಜಮೀರ್
  • ನ್ಯಾ. ಕೆ ನಟರಾಜನ್ ನೇತೃತ್ವದ ಏಕಸದಸ್ಯ ಪೀಠದಿಂದ ಅರ್ಜಿ ವಿಚಾರಣೆ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಶಾಸಕ ಜಮೀರ್‌ ಅಹಮದ್‌ ಅವರು ತಮ್ಮ ಮೇಲೆ ‘ಎಸಿಬಿ’ಯಲ್ಲಿ ದಾಖಲಿಸಿರುವ ಎಫ್‌ಐಆರ್ ಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಬಂದ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ ಮೇಲೆ ಎಸಿಬಿಯು 2022ರ ಮೇನಲ್ಲಿ ದಾಳಿ ಮಾಡಿ, ಆದಾಯ ಮೀರಿ 87 ಕೋಟಿ ರೂಪಾಯಿ ಹೆಚ್ಚುವರಿ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಹೊರಿಸಿ, ಎಫ್‌ಐಆರ್ ದಾಖಲಿಸಿತ್ತು.

ಜಮೀರ್ ಅಹಮದ್‌ ಖಾನ್ ಅವರು ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಹಾಗೂ ಅರ್ಜಿ ಇತ್ಯರ್ಥ ಆಗುವರೆಗೆ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ನಡೆಯುವ ವೇಳೆ ಕರ್ನಾಟಕ ಹೈಕೋರ್ಟ್ ಎಸಿಬಿ ರಚನೆಯನ್ನೇ ರದ್ದುಪಡಿಸಿದ್ದರಿಂದ ಎಸಿಬಿಯು ದಾಖಲಿಸಿದ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆ ಮುಂದುವರಿಸುತ್ತಿತ್ತು.

ಜಮೀರ್ ಪರ ವಾದ ಮಂಡಿಸಿದ ವಕೀಲ ಇಸ್ಮಾಯಿಲ್ ಜಬೀವುಲ್ಲಾ, “ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಬಂದಾಗ ತನಿಖಾ ಸಂಸ್ಥೆಯು ಪ್ರಾಥಮಿಕ ವಿಚಾರಣೆ ನಡೆಸಿ, ಆನಂತರ ಎಫ್‌ಐಆರ್ ದಾಖಲಿಸುವುದು ಕಡ್ಡಾಯವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಈ ಪ್ರಕರಣದಲ್ಲಿ ನಮ್ಮ ಕಕ್ಷಿದಾರ ಜಮೀರ್‌ ಅವರ ಮೇಲೆ ಎಸಿಬಿಯು ನೇರವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ” ಎಂದು ವಾದ ಮಂಡಿಸಿದ್ದರು.

ಈ ಸುದ್ದಿ ಓದಿದ್ದೀರಾ? : ಡಿ ಕೆ ಶಿವಕುಮಾರ್ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ : ರಾಜ್ಯ ಪ್ರಾಸಿಕ್ಯೂಷನ್‌ ವಿರುದ್ಧ ಹೈಕೋರ್ಟ್‌ ಅಸಮಾಧಾನ

ಮುಂದುವರೆದು, “ಅರ್ಜಿದಾರರಾದ ಜಮೀರ್ ಅವರು ಆದಾಯ ಮೀರಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿಸಿ ಜಾರಿ ನಿರ್ದೇಶನಾಲಯವು (ಇಡಿ) ಎಸಿಬಿಗೆ ವರದಿ ನೀಡಿತ್ತು. ಇದರ ಆಧಾರದ ಮೇಲೆ ಎಸಿಬಿ ಎಫ್‌ಐಆರ್ ದಾಖಲಿಸಿರುವುದರಿಂದ ಇದು ಕಾನೂನು ಬಾಹಿರ ಕ್ರಮವಾಗಿದ್ದು, ಕೂಡಲೇ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು” ಎಂದು ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಲೋಕಾಯುಕ್ತ ಪರ ವಕೀಲರು, “ಅಕ್ರಮವಾಗಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸುವುದು ಅಗತ್ಯವೇನಲ್ಲ, ಆದ್ದರಿಂದ ಈ ಪ್ರಕರಣದಲ್ಲಿ ಎಸಿಬಿಯು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕ್ರಮ ಕಾನೂನುಬದ್ಧವಾಗಿಯೇ ಇದ್ದು, ಇದಕ್ಕೆ ಯಾವುದೇ ಕಾರಣಕ್ಕೂ ತಡೆ ನೀಡಬಾರದು” ಎಂದು ತಿಳಿಸಿದ್ದರು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಕೆ ನಟರಾಜನ್ ನೇತೃತ್ವದ ಏಕಸದಸ್ಯ ಪೀಠವು ಎರಡೂ ಕಡೆಯವರ ವಾದ-ಪ್ರತಿವಾದವನ್ನು ಆಲಿಸಿ, ಆದೇಶವನ್ನು ಕಾಯ್ದಿರಿಸಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್ಐ ನೇಮಕಾತಿ ಅಕ್ರಮ: ತನಿಖೆಗೆ ಸಜ್ಜಾದ ಸರ್ಕಾರ

ಬಿಜೆಪಿ ಅಕ್ರಮದ ಬೇಟೆ ಆರಂಭಿಸಿದ ಕಾಂಗ್ರೆಸ್ ಪಿಎಸ್ಐ ನೇಮಕ ಅಕ್ರಮ ತನಿಖೆಗೆ ಸಿದ್ಧತೆ ಪೊಲೀಸ್...

ಗ್ಯಾರಂಟಿ ಜಾರಿಗೆ ಅಭಿವೃದ್ಧಿ ಅನುದಾನಗಳಿಗೆ ಕತ್ತರಿ ಹಾಕಬೇಡಿ : ಮಾಜಿ ಸಿಎಂ ಬೊಮ್ಮಾಯಿ

ಹಿಂದಿನ ಸರ್ಕಾರದ ಜನಪರ ಯೋಜನೆ ಮುಂದುವರೆಸಲು ಸಿಎಂಗೆ ಮನವಿ ಸಿದ್ದರಾಮಯ್ಯಗೆ ಪತ್ರ ಮೂಲಕ...

ಮಳೆಹಾನಿ | ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ

67 ಮಂದಿ ಪ್ರಾಣಹಾನಿ ಆಗಿದ್ದು, 60 ಮಂದಿಯ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ 487...

ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ನಾವೇ ಖರೀದಿಸುತ್ತೇವೆ: ಸಚಿವ ಮುನಿಯಪ್ಪ

ಘೋಷಿತ ಐದೂ ಗ್ಯಾರಂಟಿಗಳನ್ನು ಹಂತಹಂತವಾಗಿ ನೀಡುತ್ತೇವೆ ನಮ್ಮ ಮಾತಿಗೆ ನಾವು ಎಂದಿಗೂ ಬದ್ಧರಾಗಿರುತ್ತೇವೆ...