ಮೋದಿ ಉಪನಾಮ ಟೀಕೆ ಪ್ರಕರಣ| ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಕುತ್ತು ತರಲಿದೆಯೇ ಜೈಲು ಶಿಕ್ಷೆ

Date:

ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಜೈಲು ಶಿಕ್ಷೆಯ ಜೊತೆಗೆ ಸಂಸದ ಸ್ಥಾನವನ್ನೂ ಕಳೆದುಕೊಳ್ಳುವ ಸಾಧ್ಯತೆಯಿದ್ದು, ನಾಯಕರ ಧ್ವನಿ ಹತ್ತಿಕ್ಕುವ ಪ್ರಯತ್ನವಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಮೋದಿ ಉಪನಾಮದ ಟೀಕೆಯ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯದ ಈ ತೀರ್ಪು ರಾಹುಲ್ ಗಾಂಧಿ ಅವರ ರಾಜಕೀಯ ಬೆಳವಣಿಗೆ ತೊಡಕಾಗಿ ಪರಿಣಮಿಸುವ ಸಾಧ್ಯತೆಯಿದೆ.

ಲೋಕಸಭೆಯಲ್ಲಿ ಮತ್ತು ಲೋಕಸಭೆಯ ಹೊರಗೆ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ  ಸಂದರ್ಭದಲ್ಲಿಯೇ ಗುಜರಾತ್‌ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಆದೇಶಿಸಿದೆ. ಅಲ್ಲದೆ, ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿ, ತನ್ನ ಆದೇಶವನ್ನು 30 ದಿನಗಳ ಅವಧಿಗೆ ತಡೆಹಿಡಿದಿದೆ. ಇದೀಗ ಈ ಶಿಕ್ಷೆ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ನಡೆಸುತ್ತಿರುವ ಪಿತೂರಿ ಎಂದು ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ.

ಎರಡು ವರ್ಷಗಳ ಮೇಲೆ ಯಾವುದೇ ಪ್ರಕರಣದಲ್ಲೂ ಸಂಸದರಿಗೆ ಜೈಲಾದರೆ, ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸುವ ಅಧಿಕಾರ ಲೋಕಸಭೆಗೆ ಇದೆ.

ರಾಹುಲ್ ಗಾಂಧಿ ಮೇಲಾಗುವ ಪರಿಣಾಮವೇನು?

ಸೂರತ್ ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ ರಾಹುಲ್ ಗಾಂಧಿ ಅವರು ತಮ್ಮ ಸಂಸದ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಕಾನೂನಿನ ಎರಡು ವಿಧಾನಗಳ ಮೂಲಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸಭಾಪತಿ  ಅನರ್ಹಗೊಳಿಸಬಹುದಾಗಿದೆ. 

ಮೊದಲನೆಯದು; ರಾಹುಲ್ ಗಾಂಧಿ ಅವರು ಶಿಕ್ಷೆಗೊಳಗಾದ ಅಪರಾಧವನ್ನು ಜನರ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್‌ 8(1)ರ ಅನ್ವಯ ಪಟ್ಟಿ ಮಾಡಿದ್ದರೆ ಅನರ್ಹಗೊಳಿಸುವ ಸಾಧ್ಯತೆಯಿದೆ. ಅಂದರೆ, ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ ಹಾಗೂ ಭಾಷೆಗಳ ನಡುವೆ ದ್ವೇಷ ಉತ್ತೇಜಿಸುವ ಕೃತ್ಯ ಮಾಡಿದ ಸೆಕ್ಷನ್‌ 153ಎ ಅಡಿ ಬರುತ್ತದೆ. ಅಥವಾ ಲಂಚದ ಅಪರಾಧದ 171ಇ ಹಾಗೂ ಚುನಾವಣಾ ರಾಜಕೀಯ ಲಾಭಕ್ಕಾಗಿ ಅನಗತ್ಯವಾಗಿ ವ್ಯಕ್ತಿತ್ವಕ್ಕೆ ಧಕ್ಕೆ ತಂದ ಆರೋಪದ 171ಎಫ್‌ ಅಡಿ ಬರುತ್ತದೆ. 

ಎರಡನೆಯದು; ಜನಪ್ರತಿನಿಧಿಗಳು ಆರ್‌ಪಿಎ ಸೆಕ್ಷನ್‌ 8(3)ರ ಪ್ರಕಾರ ತಪ್ಪಿತಸ್ಥರು ಎಂದು ಸಾಬೀತಾದರೆ ಅವರಿಗೆ ಎರಡು ವರ್ಷಗಳ ಕಾಲ ಶಿಕ್ಷೆಯಾದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದಾಗಿದೆ. 

ಆದಾಗ್ಯೂ, ಮೂರು ತಿಂಗಳ ಕಾಲ ಶಿಕ್ಷೆ ಅನುಭವಿಸಿದ ನಂತರವಷ್ಟೇ ಅಪರಾಧಿಯನ್ನು ತಮ್ಮ ಸ್ಥಾನದಿಂದ ಅನರ್ಹಗೊಳಿಸಬಹುದಾಗಿದೆ. ಹಾಗಾಗಿ ರಾಹುಲ್ ಗಾಂಧಿ ಅವರು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

ಐಪಿಸಿ ಸೆಕ್ಷನ್ 499 ಮತ್ತು 500 ಏನು ಹೇಳುತ್ತದೆ?

ಯಾವುದೇ ವ್ಯಕ್ತಿಯಾಗಲಿ, ಮತ್ತೊಬ್ಬ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವಂತೆ ವರ್ತಿಸುವುದು ತಪ್ಪು ಎಂದು ಸೆಕ್ಷನ್‌ 499 ಮತ್ತು 500 ಹೇಳುತ್ತದೆ.

ತಮ್ಮ ಸ್ವಹಿತಕ್ಕಾಗಿ ಮತ್ತೊಬ್ಬರ ಮಾನನಷ್ಟ ಮಾಡುವುದು ಕ್ರಿಮಿನಲ್ ಅಪರಾಧ. ಸಿವಿಲ್‌ ಕಾನೂನು ತಪ್ಪಿತಸ್ಥರಿಗೆ ದಂಡ ವಿಧಿಸಿ, ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಮಾಡುತ್ತದೆ. ಆದರೆ, ಕ್ರಿಮಿನಲ್ ಪ್ರಕರಣ ಆಗುವುದಿಲ್ಲ. ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸುತ್ತದೆ. ಬೇರೆಯವರು ಇಂತಹ ತಪ್ಪು ಮಾಡದಂತೆ ಸಂದೇಶ ನೀಡುತ್ತದೆ. 

ಐಪಿಸಿ ಸೆಕ್ಷನ್ 499 ಕ್ರಿಮಿನಲ್ ಮಾನನಷ್ಟ ಮತ್ತು ನಂತರದ ನಿಬಂಧನೆಗಳು ಅದರ ಶಿಕ್ಷೆಯನ್ನು ವ್ಯಾಖ್ಯಾನಿಸುತ್ತದೆ. ಸೆಕ್ಷನ್ 500 ಕ್ರಿಮಿನಲ್ ಮಾನನಷ್ಟದ ತಪ್ಪಿತಸ್ಥರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ, ದಂಡದೊಂದಿಗೆ ಅಥವಾ ಇಲ್ಲದೆ.

ವಿಪಕ್ಷ ನಾಯಕರ ಮೇಲೆ ಆಡಳಿತದ ದಾಳಿ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಪ್ರಕರಣದಲ್ಲಿ ದೊಡ್ಡ ಪಿತೂರಿಯಾಗಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಮಾತನಾಡಿದ ಕೇಜ್ರಿವಾಲ್, “ವಿಪಕ್ಷದ ನಾಯಕರು ಮತ್ತು ಪಕ್ಷಗಳನ್ನು ಮುಗಿಸುವ ಪಿತೂರಿ ನಡೆಯುತ್ತಿದೆ. ಬಿಜೆಪಿಯೇತರ ನಾಯಕರ ವಿರುದ್ಧ ಪ್ರಕರಣಗಳನ್ನು ಸಲ್ಲಿಸಲಾಗುತ್ತಿದೆ. ರಾಹುಲ್ ಗಾಂಧಿ ವಿಚಾರವಾಗಿ ನನಗೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಮಾನನಷ್ಟ ಪ್ರಕರಣದಲ್ಲಿ ಸಿಲುಕಿಸುವುದು ಸರಿಯಲ್ಲ. ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ, ಆದರೆ ಈಗಿನ ತೀರ್ಪನ್ನು ಒಪ್ಪುವುದಿಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಮತ್ತು ವಕೀಲ ವಿವೇಕ್ ಟಂಕಾ ಅಭಿಪ್ರಾಯಪಟ್ಟಿರುವ ಪ್ರಕಾರ, “ನ್ಯಾಯಯುತವಾಗಿ ಕ್ರಮ ಕೈಗೊಂಡಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಈಗಿನ ಪ್ರಕರಣದಲ್ಲಿ ಯಾವುದೇ ಅನೈತಿಕ ಅಪರಾಧ ಜರುಗಿಲ್ಲ. ಸಾಮಾನ್ಯವಾಗಿ ಸಂಸದರು ನೈತಿಕವಾಗಿ ಅಧಃಪತನದಂತಹ ಅಪರಾಧಗಳಲ್ಲಿ ಶಿಕ್ಷೆಪಡೆದಾಗ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗುತ್ತದೆ.”

ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿ, “ಭಯದಲ್ಲಿರುವ ಆಡಳಿತ ಸರ್ಕಾರ ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ನನ್ನ ಸಹೋದರ ಯಾರಿಗೂ ಹೆದರಿಲ್ಲ, ಎಂದಿಗೂ ಹೆದರುವುದಿಲ್ಲ. ಸತ್ಯವನ್ನು ಹೇಳುವುದನ್ನು ಮುಂದುವರಿಸಲಿದ್ದಾರೆ. ದೇಶದ ಜನರ ಧ್ವನಿಯಾಗುವುದನ್ನು ಮುಂದುವರಿಸಲಿದ್ದಾರೆ. ಸತ್ಯದ ಶಕ್ತಿ ಮತ್ತು ದೇಶದ ಕೋಟ್ಯಂತರ ಜನರ ಪ್ರೀತಿ ಅವರ ಜೊತೆಗಿರಲಿದೆ” ಎಂದು ಹೇಳಿದ್ದಾರೆ.

 “ಇದೀಗ ಮೋದಿ ಸರ್‌ನೇಮ್ ಬಗ್ಗೆ ಜನರು ಮಾತನಾಡಿದರೂ ಮಾನನಷ್ಟ ಮೊಕದ್ದಮೆಯಾಗಿ ಶಿಕ್ಷೆಯಾಗುತ್ತಿದೆ” ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.

ಏನಿದು ಪ್ರಕರಣ?

2019ರ ಏಪ್ರಿಲ್ 19ರಂದು ರಾಹುಲ್ ಗಾಂಧಿ ಅವರು ಕರ್ನಾಟಕದ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮೋದಿ ಉಪನಾಮದ ಕುರಿತು ವ್ಯಂಗ್ಯವಾಡಿದ್ದರು. 

“ಎಲ್ಲಾ ಕಳ್ಳರು, ಎಂದರೆ; ಅದು ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿ ಇವರೆಲ್ಲರೂ ಮೋದಿ ಎಂಬ ಉಪನಾಮನ್ನೇಕೆ ಹೊಂದಿದ್ದಾರೆ” ಎಂದು ಪ್ರಶ್ನಿಸಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಬೆನ್ನಲ್ಲೇ ಗುಜರಾತಿನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500 ಅಡಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತ ವಿರೋಧಿ ಕಾಯ್ದೆಗಳ ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ ಭರವಸೆ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಜಾನುವಾರು...

ಕಲಾತಂಡದೊಂದಿಗೆ ಕಚೇರಿ ಪೂಜೆ ನೆರವೇರಿಸಿ ಗಮನ ಸೆಳೆದ ಸಚಿವ ಶಿವರಾಜ್ ತಂಗಡಗಿ

ಕೊಠಡಿ ಪೂಜೆಯಲ್ಲಿ ವಿಭಿನ್ನತೆ ಮೆರೆದ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಹಾರ, ತುರಾಯಿ...

ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್...