- 2011ರ ದ್ವಿಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿದ ತ್ರಿಸದಸ್ಯ ಪೀಠ
- ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ, ಅಸ್ಸಾಂ ಸರ್ಕಾರ
ನಿಷೇಧಿತ ಸಂಘಟನೆಯ ಸದಸ್ಯತ್ವಪಡೆಯುವುದೇ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡುವುದಿಲ್ಲ ಎಂಬ ತನ್ನ 2011ರ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಮಾರ್ಚ್ 24) ಬದಲಿಸಿದೆ.
ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್ ಷಾ, ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ತ್ರಿಸದಸ್ಯ ಪೀಠ, ಈ ಹಿಂದೆ ದ್ವಿಸದಸ್ಯ ಪೀಠವು ನೀಡಿದ ತೀರ್ಪನ್ನು ರದ್ದುಮಾಡಿದೆ. ನಿಷೇಧಿತ ಸಂಘಟನೆಯ ಸದಸ್ಯತ್ವವು ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡುತ್ತದೆ. ಯುಎಪಿಎ (ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ, 1967 ನಿಬಂಧನೆಗಳ ಅಡಿಯಲ್ಲಿ ವ್ಯಕ್ತಿಯು ವಿಚಾರಣೆಗೆ ಒಳಪಡುತ್ತಾನೆ ಎಂದು ಪೀಠ ಇದೀಗ ಅಭಿಪ್ರಾಯಪಟ್ಟಿದೆ.
ನಿಷೇಧಿತ ಸಂಘಟನೆಗಳ ಸದಸ್ಯತ್ವದ ಕುರಿತು ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ನೀಡಿದ 2011ರ ತೀರ್ಪು, “ನಿಷೇಧಿತ ಸಂಘಟನೆಯ ಸದಸ್ಯತ್ವ ಅಪರಾಧವಾಗುವುದಿಲ್ಲ, ಸದಸ್ಯತ್ವಪಡೆದ ನಂತರ ವ್ಯಕ್ತಿ ಹಿಂಸೆ ಅಥವಾ ಹಿಂಸೆಗೆ ಪ್ರಚೋದನೆಯಂತಹ ಅಕ್ರಮ ಚಟುವಟಿಕೆಗಳನ್ನು ನಡೆಸಿದಲ್ಲಿ ಯುಎಪಿಎ ಅಡಿಯಲ್ಲಿ ಅಪರಾಧವಾಗುತ್ತದೆ” ಎಂದು ಹೇಳಿತ್ತು.
ನಿಷೇಧಿತ ಸಂಘಟನೆಗಳ ಸದಸ್ಯತ್ವದ ಕುರಿತು ಸುಪ್ರೀಂ ಕೋರ್ಟ್ನ 2011ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಸರ್ಕಾರದ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ.
ಅಮೆರಿಕದ ನ್ಯಾಯಾಲಯದ ಆದೇಶಗಳನ್ನು ಪರಿಗಣಿಸಿದ್ದರಿಂದ 2011ರ ತೀರ್ಪು ನೀಡಲಾಯಿತು. ಆದರೆ ಇಂತಹ ತೀರ್ಪುಗಳನ್ನು ಭಾರತದಲ್ಲಿನ ಪರಿಸ್ಥಿತಿಯನ್ನು ಅವಗಾಹಿಸದೆ ನೀಡಲಾಗುವುದಿಲ್ಲ ಎಂದು ತ್ರಿಸದಸ್ಯ ಪೀಠ ಹೇಳಿದೆ.