- ಐಟಿ ತಿದ್ದುಪಡಿ ವಿರೋಧಿಸಿ ಎಡಿಟರ್ಸ್ ಗಿಲ್ಡ್ ಕೇಂದ್ರ ಸರ್ಕಾರಕ್ಕೆ ಪತ್ರ
- ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಐಟಿ ನಿಯಮಗಳ ತಿದ್ದುಪಡಿ ವಿರೋಧ
ಕೇಂದ್ರ ಸರ್ಕಾರ ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ತಿದ್ದುಪಡಿ ಮಾಡಿ ‘ಫ್ಯಾಕ್ಟ್ಚೆಕ್ ಸಂಸ್ಥೆ’ ರಚಿಸಲು ನಿರ್ಧರಿಸಿರುವುದು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ. ಇಂಥ ನಡೆ ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧ ಮತ್ತು ಸೆನ್ಸಾರ್ಶಿಪ್ಗೆ ಸಮಾನ ಎಂದು ಭಾರತದ ಸಂಪಾದಕರ ಒಕ್ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ಶುಕ್ರವಾರ (ಏಪ್ರಿಲ್ 7) ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಗುರುವಾರ (ಏಪ್ರಿಲ್ 6) ವಿವಾದಾತ್ಮಕ 2021ರ ಐಟಿ ನಿಯಮಗಳು ಕಾಯಿದೆಗೆ ಹೊಸ ತಿದ್ದುಪಡಿ ತಂದಿದೆ. ಈ ತಿದ್ದುಪಡಿಗೆ ಗಿಲ್ಡ್ ಆಕ್ಷೇಪ ವ್ಯಕ್ತಪಡಿಸಿದೆ.
ಸತ್ಯಶೋಧನಾ ಸಂಸ್ಥೆ ತಪ್ಪು ಮಾಹಿತಿಯನ್ನು ಪತ್ತೆಹಚ್ಚಲು ಉದ್ದೇಶಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ದುರುದ್ದೇಶಪೂರಿತವಾಗಿ ಸತ್ಯಶೋಧನೆಯ ಹೆಸರಿನಲ್ಲಿ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುವ ಸಾಧ್ಯತೆಯ ಬಗ್ಗೆ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.
ಸರ್ಕಾರದ ಕುರಿತ ಸುದ್ದಿಗಳನ್ನು ಸ್ವತಃ ಸರ್ಕಾರವೇ ಪರಿಶೀಲಿಸಿ ‘ಸತ್ಯ’ ಅಥವಾ ‘ಸುಳ್ಳು’ ಎಂದು ನಿರ್ಧರಿಸಿ ಯಾವುದೇ ಮಾಧ್ಯಮ ಸಂಸ್ಥೆಯಿಂದ ಪ್ರಕಟವಾದ ಸುದ್ದಿ, ಲೇಖನಗಳು ಅಥವಾ ವಿಡಿಯೊಗಳನ್ನು ಪ್ರಕಟಣೆಯಲ್ಲಿ/ ಪ್ರಸಾರದಲ್ಲಿ ಉಳಿಸಿಕೊಳ್ಳದಂತೆ ಆದೇಶಿಸುವ ಹಕ್ಕನ್ನು ಸರ್ಕಾರ ತನಗೆ ದಯಪಾಲಿಸಿಕೊಂಡಿದೆ ಎಂದು ಎಡಿಟರ್ಸ್ ಗಿಲ್ಡ್ ಅಭಿಪ್ರಾಯಪಟ್ಟಿದೆ.
ಈ ಕುರಿತು ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಪತ್ರಬರೆದಿರುವ ಎಡಿಟರ್ಸ್ ಗಿಲ್ಡ್, ಪತ್ರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
“2021ರ ಐಟಿ ನಿಯಮಗಳು ಕಾಯಿದೆಗೆ ಸೂಚಿಸಲಾದ ಹೊಸ ತಿದ್ದುಪಡಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹಾನಿಯುಂಟು ಮಾಡಿದೆ. ತಿದ್ದುಪಡಿಯಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ‘ಸತ್ಯಶೋಧನಾ ಸಂಸ್ಥೆ’ ಸ್ಥಾಪನೆಗೆ ಅಧಿಕಾರ ನೀಡುತ್ತದೆ. ಈ ಸಂಸ್ಥೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಯಾವುದೇ ಬರಹವನ್ನು/ಪ್ರಸಾರವನ್ನು ‘ಸುಳ್ಳು ಅಥವಾ ನಕಲಿ’ ಎಂದು ನಿರ್ಧರಿಸುವ ಮತ್ತು ಅದನ್ನು ಅಳಿಸುವಂತೆ ಆದೇಶಿಸುವ ಹೆಚ್ಚಿನ ಅಧಿಕಾರವನ್ನು ಹೊಂದಿರುತ್ತದೆ” ಎಂದು ಗಿಲ್ಡ್ ಪತ್ರದಲ್ಲಿ ಹೇಳಿದೆ.
“ಯಾವುದು ‘ನಕಲಿ ಅಥವಾ ಅಲ್ಲ’ ಎಂಬುದನ್ನು ನಿರ್ಧರಿಸಲು ಸರ್ಕಾರ ಈ ಸತ್ಯಶೋಧನಾ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡಿದೆ. ಇದು ಅಪಾಯಕಾರಿ” ಎಂದು ಗಿಲ್ಡ್ ಅಭಿಪ್ರಾಯಪಟ್ಟಿದೆ.
ಅಂತಹ ಸತ್ಯಶೋಧನಾ ಸಂಸ್ಥೆಗೆ ಮೇಲ್ವಿಚಾರಣಾ ಕಾರ್ಯವ್ಯಾಪ್ತಿಯನ್ನು ವಿವರಿಸಿಲ್ಲ. ನ್ಯಾಯಾಂಗ ದೂರದೃಷ್ಟಿ, ಕುಂದು ಕೊರತೆ ಆಲಿಕೆ ಹೇಗೆ ಎಂದು ತಿಳಿಸಿಲ್ಲ. ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್ ಮಾಡಿಸಿರುವ ವಿರುದ್ಧ ಶ್ರೇಯಾ ಸಿಂಘಾಲ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಂದಿಟ್ಟಿರುವ ನಿರ್ದೇಶನಗಳನ್ನು ಹೇಗೆ ಅನುಸರಿಸಲಾಗಿದೆ ಎಂದು ತಿಳಿಸಿಲ್ಲ. ಇದೆಲ್ಲವೂ ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧ ಮತ್ತು ಸೆನ್ಸಾರ್ಶಿಪ್ಗೆ ಸಮಾನ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ವಿವಾದಾತ್ಮಕ ಮೋದಿ ಆಪ್ತ ಕಿರಣ್ ಪಟೇಲ್ ಬಂಧಿಸಿದ ಪೊಲೀಸರು
ನಾಗರಿಕ ಹಕ್ಕುಗಳ ಸಂಸ್ಥೆ ‘ಇಂಟರ್ನೆಟ್ ಫ್ರೀಡಂ ಫೌಂಡೇಶನ್’ ಹೇಳಿಕೆ ನೀಡಿ, “ಹೊಸ ತಿದ್ದುಪಡಿ ಗಂಭೀರ ಬೆದರಿಕೆ ಉಂಟು ಮಾಡುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟಿದೆ.
ಬಳಕೆದಾರರು ಕೇಂದ್ರ ಸರ್ಕಾರವನ್ನು ವಿರೋಧಿಸಿ ಯಾವುದೇ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಟ್ವಿಟರ್ ಮೊದಲಾದವುಗಳಲ್ಲಿ ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಲು ಫ್ಯಾಕ್ಟ್ಚೆಕ್ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ.