ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದಲ್ಲಿ 280 ಕ್ಕೂ ಹೆಚ್ಚು ಜನರು ಮೃತಪಟ್ಟು ಒಂದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ದೇಶ ಕಂಡ ಕೆಲವೇ ಭೀಕರ ರೈಲು ದುರಂತಗಳಲ್ಲಿ ಇದೂ ಒಂದಾಗಿದೆ. ನೂರಾರು ಕುಟುಂಬಗಳಿಗೆ ಆಧಾರವಾಗಿದ್ದ ಜನರು ಅಸುನೀಗಿದ್ದು, ಮನೆಯ ಪ್ರಮುಖರನ್ನು ಕಳೆದುಕೊಂಡು ಮುಂದೇನು ಎಂಬ ಚಿಂತೆಯಲ್ಲಿ ದಿನದೂಡುವ ಸ್ಥಿತಿ ಕುಟುಂಬದ ಇತರ ಸದಸ್ಯರಿಗೆ ಎದುರಾಗಿದೆ.
ಇವೆಲ್ಲ ಪರಿಸ್ಥಿತಿಗಳಿಗೆ ರೈಲ್ವೆ ಇಲಾಖೆಯೆ ಗಂಭೀರ ಹೊಣೆಯಾಗಿದ್ದು, ಆಡಳಿತಾತ್ಮಕ ಸಮಸ್ಯೆ ಒಳಗೊಂಡ ಮಾನವ ದೋಷ ಎದ್ದು ಕಾಣುತ್ತಿದೆ. ರೈಲ್ವೆ ಸಚಿವರು ಎಲ್ಲ ರಾಜ್ಯಗಳನ್ನು ಒಳಗೊಂಡು ತಮ್ಮ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರೆ ಭೀಕರ ದುರಂತವನ್ನು ತಪ್ಪಿಸಬಹುದಿತ್ತು. ವಿಪಕ್ಷಗಳು ಹಾಗೂ ಸಾರ್ವಜನಿಕರು ದುರಂತದ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಸಚಿವರನ್ನು ಆಗ್ರಹಿಸಿದರೆ ಅವರು ನೀಡುವ ಉತ್ತರವೆ ಬೇರೆಯಿದೆ.
ಘಟನಾ ಸ್ಥಳದಲ್ಲಿ ಸುದ್ದಿಗಾರರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದಾಗ, “ಮೊದಲು ನಾಪತ್ತೆಯಾದವರನ್ನು ಅವರ ಕುಟುಂಬದ ಸದಸ್ಯರಿಗೆ ಆದಷ್ಟು ಬೇಗ ಹುಡುಕಿ ಖಚಿತಪಡಿಸಿಕೊಳ್ಳಬೇಕಿರುವುದು ನಮ್ಮ ಗುರಿಯಾಗಿದೆ. ನಮ್ಮ ಜವಾಬ್ದಾರಿ ಇನ್ನೂ ಮುಗಿದಿಲ್ಲ” ಎಂದಷ್ಟೆ ಹೇಳಿ ರಾಜೀನಾಮೆ ವಿಷಯದಿಂದ ನುಣುಚಿಕೊಂಡರು.
ಈ ಸುದ್ದಿ ಓದಿದ್ದೀರಾ? ತ್ರಿವಳಿ ರೈಲು ದುರಂತ| ಘಟನೆ ಸಿಬಿಐ ತನಿಖೆಗೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ರೈಲ್ವೆ ಸಚಿವ
ಏತನ್ಮಧ್ಯೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಯುಬಿಟಿ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಅಪಘಾತದ ನಂತರ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ದುರಂತಕ್ಕೆ “ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂ” ಸಮಸ್ಯೆ ಪ್ರಮುಖ ಕಾರಣ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಆದರೆ ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂ ಮಾತ್ರವಲ್ಲದೆ ಮಾನವ ದೋಷವು ಪ್ರಮುಖವಾಗಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.
“ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಸಿಗ್ನಲಿಂಗ್ನಲ್ಲಿ ಕೆಲವು ಸಮಸ್ಯೆಗಳಿವೆ. ರೈಲ್ವೆ ಸುರಕ್ಷತಾ ಆಯುಕ್ತರ ವಿವರವಾದ ವರದಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಕೋರಮಂಡಲ್ ಎಕ್ಸ್ಪ್ರೆಸ್ ಮಾತ್ರ ಅಪಘಾತಕ್ಕೀಡಾಗಿದೆ. ರೈಲು ಸುಮಾರು ಗಂಟೆಗೆ 128 ಕಿಮೀ ವೇಗದಲ್ಲಿತ್ತು” ಎಂದು ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮ ಸಿನ್ಹಾ ದುರಂತದ ಕುರಿತು ತಿಳಿಸಿದ್ದಾರೆ.