- ಟ್ವೀಟ್ ಮೂಲಕ ಶಾ ಹೇಳಿಕೆ ಟೀಕಿಸಿದ ಸುಬ್ರಮಣಿಯನ್ ಸ್ವಾಮಿ
- ಏ.11ರಂದು ಹಿಮಾಚಲ ಭೇಟಿಯ ವೇಳೆ ಮಾತನಾಡಿದ್ದ ಅಮಿತ್ ಶಾ
ಅರುಣಾಚಲ ಪ್ರದೇಶ ಭೇಟಿ ವೇಳೆ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಅರುಣಾಚಲ ಪ್ರದೇಶಕ್ಕೆ ಸೋಮವಾರ (ಏಪ್ರಿಲ್ 10) ಭೇಟಿ ನೀಡಿದ್ದ ಅಮಿತ್ ಶಾ, “ಭಾರತದ ಗಡಿಗಳು ಸುರಕ್ಷಿತವಾಗಿವೆ” ಎಂದು ಹೇಳಿದ್ದರು. ಇದಕ್ಕೆ ಮಾಜಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುಬ್ರಮಣಿಯನ್ ಅವರು ಟ್ವೀಟ್ ಮಾಡಿದ್ದಾರೆ.
“ಭಾರತದ ಗಡಿಗಳು ಸುರಕ್ಷಿತ, ಅವುಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ” ಎಂದು ಅಮಿತ್ ಶಾ ಹೇಳಿರುವ ಸುದ್ದಿ ‘ದ ಹಿಂದೂ’ ಪತ್ರಿಕೆಯಲ್ಲಿದೆ. ಇದು ಹಸಿ ಸುಳ್ಳು. ಇದು ಅವರ ಅಜ್ಞಾನ ತೋರಿಸುತ್ತದೆ. ಅವರು ಗೃಹ ಸಚಿವರಾಗಲು ಅನರ್ಹ. ಬಾಂಬಿನೊರ (ಅಡ್ಡಹೆಸರು) ಅಕ್ರಮ ದ್ವಿಪೌರತ್ವದ ಮೇಲೆ ಕೆಲಸ ಮಾಡುವುದು ಉತ್ತಮ” ಎಂದು ಟ್ವೀಟ್ನಲ್ಲಿ ಸುಬ್ರಮಣಿಯನ್ ಸ್ವಾಮಿ ಕುಟುಕಿದ್ದಾರೆ.
ಅರುಣಾಚಲ ಪ್ರದೇಶದ ಕಿಬಿತೊ ಎಂಬ ಗಡಿ ಗ್ರಾಮದಲ್ಲಿ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮವನ್ನು ಅಮಿತ್ ಶಾ ಸೋಮವಾರ ಉದ್ಘಾಟಿಸಿದ್ದರು.
ಈ ಸುದ್ದಿ ಓದಿದ್ದೀರಾ? ಜೈಲಿಗೆ ತಳ್ಳಿದರೂ ಜನರ ಪರವಾಗಿ ಹೋರಾಟ; ವಯನಾಡಿನಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಈ ವೇಳೆ ಮಾತನಾಡಿದ್ದ ಅವರು, “ಯಾರೂ ಸಹ ಭಾರತೀಯ ಭೂಭಾಗದೊಳಗೆ ಪ್ರವೇಶಿಸಬಹುದು ಎಂಬಂತೆ ಇದ್ದ ಕಾಲ ಈಗ ಬದಲಾಗಿದೆ. ಈಗ ಭಾರತದ ಗಡಿಯ ಮೇಲೆ ಕಣ್ಣು ಹಾಕಲೂ ಸಹ ಯಾರೂ ಧೈರ್ಯ ಮಾಡುವುದಿಲ್ಲ. ಭಾರತದ ಗಡಿಗಳು ಸುರಕ್ಷಿತವಾಗಿವೆ. ಅವುಗಳನ್ನು ಅತಿಕ್ರಮಣ ಮಾಡಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದ್ದರು.
ಗಡಿ ಪ್ರದೇಶಗಳ ಭದ್ರತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ ಶಾ, ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ ಎಂದು ಉಲ್ಲೇಖಿಸಿದ್ದರು.