- ರಾಹುಲ್ ಗಾಂಧಿ ಪ್ರೀತಿಯ ಅಂಗಡಿ ಹೇಳಿಕೆ ಟೀಕಿಸಿದ್ದ ಸ್ಮೃತಿ ಇರಾನಿ
- ಸ್ಮೃತಿ ಅವರ ಪತ್ರಕರ್ತರ ಜೊತೆಗಿನ ವರ್ತನೆ ಟೀಕಿಸಿದ ಸುಪ್ರಿಯಾ ಶ್ರಿನೇಟ್
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಶುಕ್ರವಾರ (ಜೂನ್ 9) ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಪತ್ರಕರ್ತರೊಬ್ಬರ ಜೊತೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್, ಸ್ಮೃತಿ ಅವರ ನಡವಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ.
ಅಮೇಥಿಯಲ್ಲಿ ಜನರ ಜೊತೆ ಮಾತುಕತೆ ನಡೆಸುವ ವೇಳೆ ಅವರಿಗೆ ಅಗೌರವ ತೋರಲಾಯಿತು ಎಂದು ಸ್ಮೃತಿ ಇರಾನಿ ಅವರು ಪತ್ರಕರ್ತರೊಬ್ಬರ ಜೊತೆ ಮಾತಿನ ಚಕಮಕಿ ನಡೆಸಿದರು. ಅಮೇಥಿ ಜನರಿಗೆ ಅಗೌರವ ತೋರಿಸುವುದನ್ನು ಕಾಂಗ್ರೆಸ್ ಸಹಿಸಬಹುದು, ಆದರೆ ತಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
“ಅಮೇಥಿಯ ಜನರಲ್ಲಿ ಅಗೌರವ ತೋರಿಸಬೇಡಿ ಎಂದು ನಾನು ಪತ್ರಕರ್ತರಲ್ಲಿ ಮನವಿ ಮಾಡುತ್ತೇನೆ. ಇದು ನಿಮಗೆ ಅರ್ಥವಾಗುವುದಿಲ್ಲ. ಇಂತಹ ಅಗೌರವದ ವರ್ತನೆ ಕಾಂಗ್ರೆಸ್ ಸಹಿಸಬಹುದು, ಆದರೆ ನಾನು ಸಹಿಸುವುದಿಲ್ಲ” ಎಂದು ಸ್ಮೃತಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಸ್ಮೃತಿ ಇರಾನಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಸ್ಮೃತಿ ಅವರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರೆ, ಇನ್ನೂ ಕೆಲವರು ಟೀಕಿಸಿದ್ದಾರೆ.
ಸ್ಮೃತಿ ಅವರ ವಿಡಿಯೋಗೆ ಕಾಂಗ್ರೆಸ್ ಶುಕ್ರವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಮುನ್ನ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಪ್ರೀತಿಯ ಅಂಗಡಿ’ ಮಾತನ್ನು ಟೀಕಿಸಿದ್ದ ಸ್ಮೃತಿ ಅವರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಟೀಕಿಸಿದೆ.
“ಪತ್ರಕರ್ತರು ಬಹುಶಃ ಸಕ್ಕರೆಯು ಯಾವಾಗ ₹13ಕ್ಕೆ ದೊರೆಯುತ್ತದೆ? ಯಾವಾಗ ಅನಿಲ ದರ ಇಳಿಕೆಯಾಗುತ್ತದೆ? ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಗೆ ಮೌನವೇಕೆ ಎಂಬ ಪ್ರಶ್ನೆಗಳನ್ನು ಕೇಳಿರಬೇಕು. ಅದಕ್ಕಾಗಿ ಸ್ಮೃತಿ ಅವರು ವ್ಯಂಗ್ರಗೊಂಡಿದ್ದಾರೆ. ಸ್ಮೃತಿ ಅವರೇ ಇದು ಪ್ರೀತಿಯಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕಿದೆ” ಎಂದು ಕಾಂಗ್ರೆಸ್ ಕುಟುಕಿದೆ.
ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು, “ಈ ಬಗ್ಗೆ ರಾಹುಲ್ ಅವರೊಂದಿಗೆ ಯಾವಾಗ ಚರ್ಚೆ ನಡೆಸಬೇಕೆಂದು ಹೇಳಿ? ಸಕ್ಕರೆ ಮಾತ್ರವೇಕೆ ಗೋಧಿ ಮತ್ತು ಬೇಳೆಕಾಳುಗಳ ಬೆಲೆಯನ್ನೂ ಹೇಳುತ್ತೇನೆ” ಎಂದು ಟೀಕಿಸಿದ್ದಾರೆ.
ಸ್ಮೃತಿ ಅವರು ತಮ್ಮ ಅಮೇಥಿ ಭೇಟಿಯ ವೇಳೆ ಜನರ ಜೊತೆ ಸಂವಾದ ನಡೆಸಿರುವ ವಿಡಿಯೋ ತುಣುಕನ್ನು ಶುಕ್ರವಾರ ಟ್ವೀಟ್ನಲ್ಲಿ ಹಂಚಿಕೊಂಡಿದ್ದು, “ಇದು ಪ್ರೀತಿ” ಎಂದು ಬರೆದುಕೊಂಡಿದ್ದಾರೆ.
ಸ್ಮೃತಿ ಅವರು ಗುರುವಾರ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
“ಕಲ್ಲಿದ್ದಲು, ಮೇವು ಲೂಟಿ ಮಾಡುವವರ ಜೊತೆ ಕೈಜೋಡಿಸಿದ್ದು ಎಂತಹ ಪ್ರೀತಿ? ಸೆಂಗೋಲ್ಗೆ ಅವಮಾನ ಮಾಡುವ ಪ್ರೀತಿ ಇದು, ನೂತನ ಸಂಸತ್ ಭವನವನ್ನು ಬಹಿಷ್ಕರಿಸುವುದು ಎಂತಹ ಪ್ರೀತಿ? ‘ದಿ ಕೇರಳ ಸ್ಟೋರಿ’ ಸಿನಿಮಾ ಬಂದಾಗ ಮೌನವೇಕೆ? ಭಾರತವನ್ನು ಶಪಿಸುವವರನ್ನು ಕೈಕುಲುಕುವ ಮತ್ತು ಅಪ್ಪಿಕೊಳ್ಳುವುದು ಯಾವ ರೀತಿಯ ಪ್ರೀತಿ?” ಎಂದು ಸ್ಮೃತಿ ಅವರು ಟೀಕಿಸಿದ್ದರು.
ಸ್ಮೃತಿ ಇರಾನಿ ಅವರ ಪತ್ರಕರ್ತರ ಜೊತೆಗಿನ ವರ್ತನೆಯನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶಿರ್ನೇಟ್ ಅವರು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಿಹಾರ್ ಜೈಲಿನಲ್ಲಿ ಸಾವಿರ ದಿನ ಕಳೆದ ಉಮರ್ ಖಾಲಿದ್ : ಪ್ರತಿರೋಧದ ಸಂಕೇತ ಎಂದ ಹೋರಾಟಗಾರರು
“ಮನವಿಯ ಹೆಸರಲ್ಲಿ ನಿಮ್ಮ ಮಾಲೀಕರಿಗೆ ಕರೆ ಮಾಡುತ್ತೇನೆ ಎಂದು ಬೆದರಿಕೆ ಹಾಕುವುದು ಸರಿಯಲ್ಲ. ಅಮೇಥಿಯ ಜನರು ಬದಲಾವಣೆಯ ಮನಸ್ಸು ಮಾಡಿದ್ದಾರೆ. ಅದರ ಸುಳಿವು ನಿಮಗೆ ದೊರೆತಿದೆ. ಈ ಭಯ ನಿಮ್ಮ ಮಾತನಲ್ಲಿ ವ್ಯಕ್ತವಾಗುತ್ತಿದೆ” ಎಂದು ಸುಪ್ರಿಯಾ ವ್ಯಂಗ್ಯವಾಡಿದ್ದಾರೆ.
“ತಮ್ಮ ಲೋಕಸಭಾ ಕ್ಷೇತ್ರವಾದ ಅಮೇಥಿಯ ಜನರಿಗೆ ಅಗೌರವ ತೋರಿದರೆ ನಿಮ್ಮ ಪತ್ರಿಕಾ ಮಾಲೀಕರಿಗೆ ಕರೆ ಮಾಡಿ ಯಾವ ಪತ್ರಕರ್ತರಿಗೂ ಜನರನ್ನು ಅಗೌರವಿಸುವ ಹಕ್ಕಿಲ್ಲ ಎಂದು ಹೇಳುತ್ತೇನೆ” ಎಂದು ವಿಡಿಯೋದಲ್ಲಿ ಸ್ಮೃತಿ ಅವರು ಹೇಳಿರುವುದು ಕಂಡು ಬಂದಿದೆ.