- ಭಾರೀ ಮಳೆ ಹಿನ್ನೆಲೆ ದೆಹಲಿಯಲ್ಲಿ ಇನ್ನೂ ಮೂರು ದಿನ ಮಳೆ
- ನಿರಂತರ ಮಳೆಯಿಂದ ನೀರು ನುಗ್ಗಿ ಹಲವೆಡೆ ವಿದ್ಯುತ್ ವ್ಯತ್ಯಯ
ದೆಹಲಿಯಲ್ಲಿ ಶನಿವಾರ (ಮೇ 27) ಭಾರೀ ಮಳೆ ಸುರಿದಿದೆ. ಪರಿಣಾಮ ರೈಲು ಹಾಗೂ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಕಾರ್ಯಾಚರಣೆಗೆ ತೊಂದರೆಯಾಗಿದೆ. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳನ್ನು ಪ್ರಯಾಣಿಕರು ಸಂಪರ್ಕಿಸಬಹುದು ಎಂದು ದೆಹಲಿ ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.
ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನಜೀವನ ಅಸ್ತವ್ಯಸ್ಥಗೊಂಡಿದೆ.
ಶನಿವಾರ ನಗರದಲ್ಲಿ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ನಗರದಲ್ಲಿ ಭಾರೀ ಮಳೆ ಪರಿಣಾಮ ಇನ್ನೂ ಮೂರು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ, ಗುರುಗ್ರಾಮ, ನೋಯ್ಡಾ ಮತ್ತು ಫರೀದಾಬಾದ್ ನಿವಾಸಿಗಳು ಶನಿವಾರ ಬೆಳಗ್ಗೆ ಗುಡುಗು ಸಹಿತ ಭಾರೀ ಮಳೆಗೆ ಸಾಕ್ಷಿಯಾದರು.
ಭಾರೀ ಮಳೆ ಹಿನ್ನೆಲೆ ಆರು ವಿಮಾನಗಳನ್ನು ದೆಹಲಿಯಿಂದ ಜೈಪುರಕ್ಕೆ ಮಾರ್ಗ ಬದಲಿಸಲಾಗಿದೆ. ರೈಲು ಸೇವೆಯನ್ನು ಕೆಲವು ಗಂಟೆಗಳ ಕಾಲ ರದ್ದುಗೊಳಿಸಲಾಗಿದೆ.
“ಮೋಡಗಳ ಸಮೂಹವು ಹರಿಯಾಣ ಮತ್ತು ಉತ್ತರ ರಾಜಸ್ಥಾನದಿಂದ ದೆಹಲಿ ಮೂಲಕ ಚಲಿಸುತ್ತಿದೆ. ಅದು ದೆಹಲಿ-ಎನ್ಸಿಆರ್ ದಾಟಲು ಇನ್ನೂ ಎರಡು ಗಂಟೆಗಳು ಬೇಕಾಗಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಳಗ್ಗೆ 8 ಗಂಟೆಗೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರಹಿತದ ನೆಪದಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯವೇ? ವಾಸ್ತವ ಏನು ಹೇಳುತ್ತದೆ?
ದೆಹಲಿ ಮತ್ತು ಎನ್ಸಿಆರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಮತ್ತು 30-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ.
ದೆಹಲಿ ಸೇರಿದಂತೆ ಕೆಲವು ಪ್ರದೇಶಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಘಾಜಿಯಾಬಾದ್, ಛಪ್ರೌಲಾ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಫರಿದಾಬಾದ್, ಬಲ್ಲಭಗಢ, ಹಸ್ತಿನಾಪುರ, ಚಂದ್ಪುರ್, ಕಿಥೋರ್, ಅಮ್ರೋಹಾ, ಮೊರಾದಾಬಾದ್, ಗಢಮುಕ್ತೇಶ್ವರ, ಗುಲಾವೋಟಿ, ಸಿಯಾನ, ಸಂಭಾಲ್, ಸಿಕಂದರಾಬಾದ್ , ಜಹಾಂಗೀರಾಬಾದ್, ಅನುಪ್ಶಹರ್, ಬಹಜೋಯಿ, ಶಿಕರ್ಪುರ್, ಖುರ್ಜಾ, ಪಹಾಸು, ನರೋರಾ, ಗಭಾನಾ, ಜತ್ತಾರಿ, ಅಟ್ರೌಲಿ, ಖೈರ್, ಅಲಿಗಢ್ ಮತ್ತು ಇಗ್ಲಾಸ್ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.