- ಕುನೋ ಅಭಯಾರಣ್ಯದಲ್ಲಿ ಎರಡು ತಿಂಗಳಲ್ಲಿ ನಾಲ್ಕು ಚೀತಾಗಳ ಸಾವು
- ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಯೋಜನೆ ಪ್ರಾಜೆಕ್ಟ್ ಚೀತಾ
ಪ್ರಧಾನಿ ನರೇಂದ್ರ ಮೋದಿ ಬಹಳ ಅಬ್ಬರದಿಂದ ಆರಂಭಿಸಿದ ಯೋಜನೆ ಪ್ರಾಜೆಕ್ಟ್ ಚೀತಾ ಕೇವಲ ಪ್ರಚಾರವಾಗಿ ಉಳಿಯುವಂತೆ ಕಾಣಿಸುತ್ತದೆ. ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಿಸುವ ಯೋಜನೆ ಕುಂಟುತ್ತಾ ಸಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 2023 ಮಾರ್ಚ್ 29ರಂದು ಹುಟ್ಟಿದ ನಾಲ್ಕು ಚೀತಾ ಮರಿಗಳಲ್ಲಿ ಒಂದು ಮೇ 23ರಂದು ಸಾವನ್ನಪ್ಪಿದೆ.
ಚೀತಾ ಮರಿ ಜ್ವಾಲಾ ಸೇರಿದಂತೆ ಈವರೆಗೆ ಕಳೆದ ಎರಡು ತಿಂಗಳಲ್ಲಿ ನಾಲ್ಕು ಚೀತಾಗಳು ಇಲ್ಲಿ ಸಾವನ್ನಪ್ಪಿವೆ. ಪ್ರಸ್ತುತ ಕುನೋ ಅಭಯಾರಣ್ಯದಲ್ಲಿ 17 ವಯಸ್ಕ ಮತ್ತು ಮೂರು ಮರಿ ಚೀತಾಗಳಷ್ಟೇ ಉಳಿದಿವೆ.
ಅಭಯಾರಣ್ಯದ ವಾರ್ಡನ್ ಜೆ ಎಸ್ ಚೌಹಾನ್ ಪ್ರಕಾರ, ಮೇ 23ರಂದು ಬೆಳಗ್ಗೆ 7 ಗಂಟೆಗೆ ಚೀತಾ ಮರಿ ಜ್ವಾಲಾ ಮೃತಪಟ್ಟಿದೆ. “ಮೂರು ಚೀತಾ ಮರಿಗಳು ಅತ್ತಿತ್ತ ಓಡಾಡುತ್ತಿದ್ದರೆ, ಜ್ವಾಲಾ ನೆಲದಲ್ಲಿ ಬಿದ್ದಿರುವುದು ಕಂಡು ಪರಿಶೀಲಿಸಿದಾಗ ಪ್ರಜ್ಞೆತಪ್ಪಿರುವುದು ತಿಳಿದಿದೆ“ ಎಂದು ಚೌಹಾನ್ ಹೇಳಿದ್ದಾರೆ.
ನೆಲದಲ್ಲಿ ಬಿದ್ದಿದ್ದ ಮರಿಯನ್ನು ಪರಿಶೀಲಿಸಿದ ಪಶುತಜ್ಞರಿಗೆ ತಕ್ಷಣಕ್ಕೆ ಸಾವಿಗೆ ಕಾರಣ ತಿಳಿದುಬಂದಿಲ್ಲ. “ಪ್ರಜ್ಞೆ ತಪ್ಪಿದ್ದ ಮರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಸಾವನ್ನಪ್ಪಿದೆ. ಮರಿಯ ಆರೋಗ್ಯ ಕ್ಷೀಣಿಸಿತ್ತು. ನಾಲ್ಕು ಮರಿಗಳಲ್ಲಿ ಇದು ಚಿಕ್ಕದಾಗಿದ್ದು, ಕಡಿಮೆ ಚಟುವಟಿಕೆ ತೋರಿಸಿತ್ತು. ಇತರ ಮೂರು ಮರಿಗಳಂತಲ್ಲದೆ, ಜಡವಾಗಿ ಬಿದ್ದುಕೊಂಡಿರುತ್ತಿತ್ತು. ಇತರ ಮರಿಗಳಿಗೆ ಹೋಲಿಸಿದಲ್ಲಿ ಕಡಿಮೆ ಹಾಲು ಸೇವಿಸುತ್ತಿತ್ತು” ಎಂದು ಚೌಹಾನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ
“ಮರಿಯ ಸಾವನ್ನು ಅಸ್ತಿತ್ವಕ್ಕಾಗಿ ನಡೆದ ಹೋರಾಟ ಎಂದು ಪರಿಗಣಿಸಬೇಕಾಗುತ್ತದೆ. ಸಹಜ ಪರಿಸರವಾಗಿರುವ ಆಫ್ರಿಕಾದಲ್ಲಿಯೇ ಚೀತಾ ಮರಿಗಳು ಧೀರ್ಘ ಕಾಲ ಬದುಕುವ ಪ್ರಮಾಣ ಕಡಿಮೆ. ಚೀತಾಗಳಲ್ಲಿ ಶೇ 10ರಷ್ಟು ಮರಿಗಳು ಮಾತ್ರ ಉಳಿದು ಬೆಳೆಯುತ್ತವೆ. ಇತರ ಬೆಕ್ಕು ಪ್ರಬೇಧದ ಪ್ರಾಣಿಗಳಿಗೆ ಹೋಲಿಸಿದಲ್ಲಿ ಚೀತಾಗಳಲ್ಲಿ ಅತ್ಯಧಿಕ ಜನನ ದರ ಇದೆ, ಉಳಿವಿನ ದರ ಕಡಿಮೆ” ಎಂದು ಅಭಯಾರಣ್ಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ನಲ್ಲಿ ನಮೀಬಿಯದಿಂದ ತಂದ ಚೀತಾ ಸಾಷಾ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿತ್ತು. ಏಪ್ರಿಲ್ 24ರಂದು ಮತ್ತೊಂದು ಚೀತಾ ಉದಯ್ ಹೃದಯಾಘಾತದಿಂದ ಸಾವನ್ನಪ್ಪಿತ್ತು. ಮೇ 9ರಂದು ಚೀತಾ ದಕ್ಷ ಗಂಡು ಹುಲಿಗಳ ಜೊತೆಗಿರುವಾಗ ಸಾವನ್ನಪ್ಪಿತ್ತು.