- ರಾಯಗಢದ ವಧುವಿನ ಗ್ರಾಮದಲ್ಲಿ ನಿಗದಿಯಾಗಿದ್ದ ವಿವಾಹ
- ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಚಾಲಕರ ಸಂಘ
ಚಾಲಕರ ಮುಷ್ಕರದ ಹಿನ್ನೆಲೆ ಮರುದಿನ ವಿವಾಹವಾಗಬೇಕಿದ್ದ ವರ ಹಾಗೂ ಆತನ ಕುಟುಂಬ ರಾತ್ರಿಯಿಡೀ 28 ಕಿ.ಮೀ ಕಾಲು ನಡಿಗೆಯಲ್ಲೇ ವಧುವಿನ ಗ್ರಾಮ ಸೇರಿದ ಅಪರೂಪದ ಘಟನೆ ಒಡಿಶಾದಲ್ಲಿ ಶುಕ್ರವಾರ (ಮಾರ್ಚ್ 17) ವರದಿಯಾಗಿದೆ.
ರಾಯಗಢ ಜಿಲ್ಲೆಯಲ್ಲಿ ವಧುವಿನ ಗ್ರಾಮದಲ್ಲಿ ವಿವಾಹ ನಿಗದಿಯಾಗಿತ್ತು. ಗುರುವಾರ (ಮಾರ್ಚ್ 16) ಚಾಲಕರು ಮುಷ್ಕರ ಹೂಡಿದ್ದ ಕಾರಣ ವಧುವಿನ ಗ್ರಾಮಕ್ಕೆ ತೆರಳಲು ವರನ ಕುಟುಂಬದವರಿಗೆ ಯಾವ ವಾಹನ ಸೌಲಭ್ಯವೂ ದೊರೆಯಲಿಲ್ಲ. ವಿವಾಹ ಮಹೋತ್ಸವಕ್ಕೆ ತೆರಳಬೇಕಾದ ಅನಿವಾರ್ಯತೆ ಕಾರಣ ವರನ ಕುಟುಂಬ ಕಾಲುನಡಿಗೆ ಮೂಲಕ ತೆರಳಲು ನಿರ್ಧರಿಸಿತು.
ಕಲ್ಯಾಣ್ಸಿಂಗ್ಪುರದ ಬ್ಲಾಕ್ನ ಸುನಖಂಡಿ ಪಂಚಾಯತ್ನಿಂದ ದಿಬಲಪಾಡು ಗ್ರಾಮವನ್ನು ತಲುಪಲು ಕೆಲವು ಮಹಿಳೆಯರೂ ಸೇರಿದಂತೆ ವರ ಹಾಗೂ ಆತನ ಕುಟುಂಬ ಗುರುವಾರ ರಾತ್ರಿ ಇಡೀ ಕಾಲುನಡಿಗೆಯಲ್ಲಿ ಸಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಚಾಲಕರ ಮುಷ್ಕರದಿಂದಾಗಿ ಸಂಚಾರ ಸೌಲಭ್ಯ ಇರಲಿಲ್ಲ. ನಾವು ಇಡೀ ರಾತ್ರಿ ಕಾಲು ನಡಿಗೆಯ ಮೂಲಕ ಸಾಗಿ ವಧುವಿನ ಗ್ರಾಮ ತಲುಪಿದೆವು. ನಮ್ಮ ಬಳಿ ಬೇರೆ ಆಯ್ಕೆ ಇರಲಿಲ್ಲ” ಎಂದು ವರನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ. ಇಬ್ಬರ ವಿವಾಹ ಶುಕ್ರವಾರ ಬೆಳಿಗ್ಗೆ ಜರುಗಿದೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನದ ಯುವಕನಿಗೆ ಯಶಸ್ವಿ ತೋಳು ಕಸಿ ಶಸ್ತ್ರಚಿಕಿತ್ಸೆ; ಏಷ್ಯಾದಲ್ಲೇ ಮೊದಲೆಂಬ ಹೆಗ್ಗಳಿಕೆ
ವಿವಾಹದ ನಂತರ ತಮ್ಮ ಗ್ರಾಮಕ್ಕೆ ಹಿಂತಿರುಗಲು ಚಾಲಕರ ಸಂಘ ಮುಷ್ಕರ ಹಿಂಪಡೆಯುವುದನ್ನು ಕಾಯುತ್ತ ವಧುವಿನ ನಿವಾಸದಲ್ಲಿ ಉಳಿದಿದೆ.
ವಿಮೆ ಸೌಲಭ್ಯ, ನಿವೃತ್ತಿ ವೇತನ, ಕಲ್ಯಾಣ ಮಂಡಳಿ ರಚನೆ ಮೊದಲಾದ ಬೇಡಿಕೆಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘವು ಬುಧವಾರದಿಂದ (ಮಾರ್ಚ್ 15) ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಚಾಲಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.