ಐ.ಟಿ ದಾಳಿ ವೇಳೆ ದೊರೆತ ನಗದಿಗೆ ವ್ಯಕ್ತಿಯು ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದರೆ ನೇರ ತೆರಿಗೆಗಳ ಕೇಂದ್ರ ಮಂಡಳಿ ನಿಯಮದ ಪ್ರಕಾರ ಶೇ. 137ರಷ್ಟು ಹೆಚ್ಚು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕು
ಬಹುತೇಕರಿಗೆ ಮನೆಯಲ್ಲಿಯೇ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹ ಇರಿಸಿಕೊಳ್ಳುವ ಅಭ್ಯಾಸ ಇರುತ್ತದೆ. ಇದಕ್ಕಾಗಿಯೇ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದಾಗ ಲೆಕ್ಕವಿಲ್ಲದ ಹಣ ದೊರೆಯುತ್ತದೆ. ಆದರೆ, ಇದರಿಂದ ಹಣ ಕಳೆದುಕೊಳ್ಳುವ ಅಪಾಯವೇ ಹೆಚ್ಚು. ಹಾಗಾದರೆ ಎಷ್ಟು ಹಣ ಇದ್ದರೆ ಐ.ಟಿ ಇಲಾಖೆ ನಮ್ಮ ಮನೆ ಮೇಲೆ ದಾಳಿ ಮಾಡುವುದಿಲ್ಲ? ಈ ಪ್ರಶ್ನೆ ಅನೇಕರಿಗೆ ಕಾಡುತ್ತದೆ.
ಅನೇಕರಿಗೆ ತಮ್ಮ ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ಎಂಬ ಮಾಹಿತಿ ಇರುವುದಿಲ್ಲ. ಅದಕ್ಕಾಗಿ ಐ.ಟಿ ಇಲಾಖೆ ಮನೆಯಲ್ಲಿ ಹಣ ಇರಿಸಿಕೊಳ್ಳಲು ಮಿತಿ ನಿಗದಿಪಡಿಸಿದೆ. ಇದಕ್ಕಾಗಿ ಹೊಸ ನಿಯಮಗಳನ್ನು ರೂಪಿಸಿದೆ. ಇದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ ಮನೆಯಲ್ಲಿ ಹಣ ಇರಿಸಿಕೊಳ್ಳುವ ವ್ಯಕ್ತಿಗೆ ಅದರ ಮಿತಿ ತಿಳಿದಿರಬೇಕು. ಸಾಮಾನ್ಯವಾಗಿ ಚುನಾವಣೆ ಸಂದರ್ಭಗಳಲ್ಲಿ ಮನೆಗಳಲ್ಲಿ ಹಣ ಹೆಚ್ಚು ಶೇಖರವಾಗುತ್ತದೆ. ಈ ವೇಳೆಯೇ ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ಹಾಗಾದರೆ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಎಷ್ಟು ಹಣ ಇರಿಸಿಕೊಳ್ಳಬಹುದು? ಈ ಬಗ್ಗೆ ಸೂಕ್ತ ಮಾಹಿತಿ ಅನೇಕರಿಗೆ ಸೂಕ್ತ ಮಾಹಿತಿ ಕೊರತೆ ಇದೆ.
ವ್ಯಕ್ತಿಯು ತನ್ನ ಮನೆಯಲ್ಲಿ ಶೇಖರಿಸಿ ಇರಿಸಿಕೊಳ್ಳುವ ನಗದಿಗೆ ಸೂಕ್ತ ದಾಖಲೆ ಹೊಂದಿರಬೇಕು. ಅಲ್ಪ ಪ್ರಮಾಣದ ಹಣವನ್ನು ಮನೆಯಲ್ಲಿ ಇಟ್ಟುಕೊಂಡು ಉಳಿದ ಮೊತ್ತವನ್ನು ಬ್ಯಾಂಕ್ನಲ್ಲಿ ಜಮಾ ಮಾಡಬಹುದು. ಅದನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ನೀಡುವುದು, ವಸ್ತು, ಬಂಗಾರ ಖರೀದಿ ಮೊದಲಾದವುಗಳಿಗೆ ಸೂಕ್ತ ದಾಖಲೆ ಹೊಂದಿರಬೇಕು ಎಂದು ಐ.ಟಿ ನಿಯಮಗಳು ಹೇಳುತ್ತವೆ. ಒಂದು ವೇಳೆ ಹೆಚ್ಚಿನ ವ್ಯವಹಾರದ ಹಣದ ಹರಿವು ಕಂಡು ಬಂದರೂ ಐ.ಟಿ ಇಲಾಖೆ ದಾಳಿ ಮಾಡುತ್ತದೆ.
ದಾಳಿಯಲ್ಲಿ ಸಿಕ್ಕಿಬಿದ್ದರೆ ಹಣದ ಮೂಲ ಹೇಳಬೇಕು
ಒಂದು ವೇಳೆ ಐಟಿ ದಾಳಿ ವೇಳೆ ವ್ಯಕ್ತಿಯೊಬ್ಬರ ಮನೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಣ ದೊರೆತರೆ ಅದನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಆಗ ವ್ಯಕ್ತಿಯು ಹಣದ ಮೂಲ ಹೇಳಬೇಕಾಗುತ್ತದೆ. ಹಣ ದೊರೆತಿರುವ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ. ಇಲ್ಲವೇ ತೆರಿಗೆ ಪಾವತಿಯ ವಿವರ ತೋರಿಸಬೇಕು. ಆದರೆ ಹಣದ ಮೂಲ ತಿಳಿಸಲು ವಿಫಲವಾದರೆ ವ್ಯಕ್ತಿಯು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸುವ ಸಾಧ್ಯತೆ ಇರುತ್ತದೆ.
ದಂಡ ಎಷ್ಟು?
ಐ.ಟಿ ದಾಳಿಯಲ್ಲಿ ದಾಖಲೆಯಿಲ್ಲದ ಅಪಾರ ಹಣದೊಂದಿಗೆ ಸಿಲುಕಿಕೊಂಡು ಹಣದ ಮೂಲ ತಿಳಿಸುವಲ್ಲಿ ವಿಫಲವಾದರೆ ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ನಿಯಮದ ಪ್ರಕಾರ ವ್ಯಕ್ತಿಯು ಶೇ. 137ರಷ್ಟು ಹೆಚ್ಚು ಹಣವನ್ನು ಪಾವತಿಸಬೇಕು.
ವ್ಯಕ್ತಿಯು ತನ್ನ ದೈನಂದಿನ ನಗದು ವ್ಯವಹಾರದಲ್ಲಿ ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು ಎಂದು ಐ.ಟಿ ಇಲಾಖೆ ಹೇಳುತ್ತದೆ. ಈ ಅಂಶಗಳನ್ನು ಗಮನದಲ್ಲಿಡಿ,
• ಹಣಕಾಸಿನ ವರ್ಷದಲ್ಲಿ ₹20 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡಿದರೆ ಅವರು ದಂಡ ಎದುರಿಸಬೇಕಾಬಹುದು.
• ಒಂದೇ ಬಾರಿಗೆ ₹50,000 ನಗದು ಜಮಾ ಅಥವಾ ಹಿಂಪಡೆಯಲು ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.
• ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ₹20 ಲಕ್ಷ ರೂಪಾಯಿ ನಗದನ್ನು ಜಮಾ ಮಾಡಿದರೆ ಅವರು ಕಡ್ಡಾಯವಾಗಿ ಪಾನ್ ಹಾಗೂ ಆಧಾರ್ ಸಂಖ್ಯೆಯ ಮಾಹಿತಿ ನೀಡಬೇಕು.
• ವ್ಯಕ್ತಿಯು ₹2 ಲಕ್ಷಕ್ಕಿಂತ ಹೆಚ್ಚು ನಗದನ್ನು ವಾಣಿಜ್ಯ ಖರೀದಿ ವ್ಯವಹಾರ ಮಾಡುವಂತಿಲ್ಲ.
• ವ್ಯಕ್ತಿಯು ವಸ್ತುಗಳನ್ನು ₹2 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರದ ಮೂಲಕ ಖರೀದಿಸಿದರೆ ಅವರು ಕಡ್ಡಾಯವಾಗಿ ಪಾನ್ ಹಾಗೂ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು.
• ವ್ಯಕ್ತಿಯು ₹30 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರದ ಮೂಲಕ ಆಸ್ತಿ ಖರೀದಿ ಮತ್ತು ಮಾರಾಟ ಮಾಡಿದರೆ ಅವರು ತನಿಖಾ ಸಂಸ್ಥೆಯ ವಿಚಾರಣೆ ಎದುರಿಸಬಹುದು.
• ವ್ಯಕ್ತಿಯು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಒಂದೇ ಬಾರಿ ₹1 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿದರೆ ಈ ಸಂಬಂಧ ತನಿಖೆ ನಡೆಯುವ ಸಾಧ್ಯತೆ ಇರುತ್ತದೆ.
• ವ್ಯಕ್ತಿಯು ತನ್ನ ಸಂಬಂಧಿಗಳಿಂದ ಒಂದೇ ದಿನ ₹2 ಲಕ್ಷಕ್ಕಿಂತ ಹೆಚ್ಚಿನ ನಗದನ್ನು ಸ್ವೀಕರಿಸುವಂತಿಲ್ಲ. ಬ್ಯಾಂಕ್ ಮೂಲಕವೇ ಈ ರೀತಿಯ ವ್ಯವಹಾರ ನಡೆಯಬೇಕು.
• ನಗದು ಮೂಲಕ ದೇಣಿಗೆ ನೀಡುವ ಮಿತಿಯನ್ನು ₹2 ಸಾವಿರಕ್ಕೆ ಮಿತಿಗೊಳಿಸಲಾಗಿದೆ.
• ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ ₹20 ಸಾವಿರಕ್ಕಿಂತ ಹೆಚ್ಚು ನಗದು ರೂಪದಲ್ಲಿ ಸಾಲ ಪಡೆಯುವಂತಿಲ್ಲ.
• ವ್ಯಕ್ತಿಯು ಬ್ಯಾಂಕ್ನಿಂದ ₹2 ಕೋಟಿಗಿಂತ ಹೆಚ್ಚು ನಗದನ್ನು ಹಿಂಪಡೆದರೆ ಕಡ್ಡಾಯವಾಗಿ ಟಿಡಿಎಸ್ ಪಾವತಿಸಬೇಕು.