- ಕಾಂಗ್ರೆಸ್, ಡಿಎಂಕೆ, ಬಿಆರ್ಎಸ್, ಎಎಪಿ, ಜೆಡಿಯು ಮುಂತಾದ ಪ್ರಮುಖ ಪಕ್ಷಗಳು ಭಾಗಿ
- ಚೆನ್ನೈನಲ್ಲಿ ಏಪ್ರಿಲ್ 3ರಂದು ನಡೆಯಲಿರುವ ಸಾಮಾಜಿಕ ನ್ಯಾಯ ಸಮಾವೇಶ
ಮುಂದಿನ ಲೋಕಸಭಾ ಚುನಾವಣೆಗೆ ವಿಪಕ್ಷಗಳ ಐಕ್ಯತೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿರುವ ಸಮಯದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಏಪ್ರಿಲ್ 3ರಂದು ಚೆನ್ನೈನಲ್ಲಿ ಸಾಮಾಜಿಕ ನ್ಯಾಯ ಸಮಾವೇಶವನ್ನು ಆಯೋಜಿಸಲಿದ್ದಾರೆ. ಸಮಾವೇಶಕ್ಕೆ ಇಲ್ಲಿಯವರೆಗೂ ವಿಪಕ್ಷಗಳ ಸಭೆಯಲ್ಲಿ ಅಂತರ ಕಾಯ್ದುಕೊಂಡಿದ್ದ ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಹಾಗೂ ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಬಿಜು ಜನತಾದಳ ಪಕ್ಷಗಳನ್ನು ಆಹ್ವಾನಿಸಲಾಗಿದೆ.
ದಿನದಿಂದ ದಿನಕ್ಕೆ ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ವಿರೋಧಿ ಅಲೆ ಹೆಚ್ಚಾಗುತ್ತಿರುವುದು ಹಾಗೂ ಒಡಿಶಾ ಮತ್ತು ಆಂಧ್ರಪ್ರದೇಶದ ಆಡಳಿತಾರೂಢ ಪಕ್ಷಗಳಾದ ಬಿಜೆಡಿ ಮತ್ತು ವೈಎಸ್ಆರ್ಸಿಪಿ ಪಾಲ್ಗೊಳ್ಳುತ್ತಿರುವುದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
“ವಿಪಕ್ಷಗಳಿಗೆ ಆಹ್ವಾನ ನೀಡುತ್ತಿರುವುದು ಕೇಂದ್ರದ ವಿರುದ್ಧ ಒಗ್ಗೂಡಿಸುವ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಒಂದೊಂದೆ ಹೆಜ್ಜೆಯಾಗಿದೆ” ಎಂದು ಸಮಾವೇಶದಲ್ಲಿ ಪಾಲ್ಗೊಳ್ಳುವ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಸಮಾವೇಶದಲ್ಲಿ ಬಿಜೆಡಿಯಿಂದ ರಾಜ್ಯಸಭೆಯ ಮುಖ್ಯ ಸಚೇತಕ ಸಸ್ಮಿತ್ ಪಾತ್ರ ಪ್ರತಿನಿಧಿಸಿದರೆ, ವೈಎಸ್ಆರ್ಸಿಪಿ ಪರವಾಗಿ ಆಂಧ್ರಪ್ರದೇಶದ ನಗರಾಭಿವೃದ್ಧಿ ಸಚಿವ ಆದಿಮುಲಾಪು ಸುರೇಶ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ದಹಿ’ ವಿವಾದ | ಕರ್ನಾಟಕ, ತಮಿಳುನಾಡು ಆಕ್ರೋಶಕ್ಕೆ ಮಣಿದ ಎಫ್ಎಸ್ಎಸ್ಎಐ; ಪರಿಷ್ಕರಿಸಿ ಆದೇಶ
ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮುಖ್ಯ ಭಾಷಣಕಾರರಾಗಿ “ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಮುಂದಕ್ಕೆ ಕೊಂಡೊಯ್ಯುವುದು” ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಅಖಿಲ ಭಾರತ ಸಾಮಾಜಿಕ ನ್ಯಾಯ ಒಕ್ಕೂಟದ ಶೀರ್ಷಿಕೆಯಡಿ ಆಯೋಜಿಸಲಾಗುತ್ತಿರುವ ಸಭೆಯಲ್ಲಿ ಇತರ ಪಕ್ಷಗಳ ನಾಯಕರಿಗೂ ಮಾತನಾಡಲು ಅವಕಾಶಗಳನ್ನು ಒದಗಿಸಲಾಗುವುದು. ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಸ್ಟಾಲಿನ್ ಜನವರಿಯಲ್ಲಿಯೇ ತಿಳಿಸಿದ್ದರು.
ಕಾಂಗ್ರೆಸ್, ಟಿಎಂಸಿ ಭಾಗಿ
ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರೀಯ ಜನತಾ ದಳ (ಆರ್ಜೆಡಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಕ್ಷ (ಎಸ್ಪಿ), ವೈಎಸ್ಆರ್ಸಿಪಿ, ಬಿಜೆಡಿ, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್), ಸಿಪಿಐ, ಸಿಪಿಐಎಂ, ಎನ್ಸಿಪಿ, ಎಎಪಿ, ಐಯುಎಂಎಲ್ ಮತ್ತು ಎಂಡಿಎಂಕೆ ಪಕ್ಷಗಳು ಡಿಎಂಕೆ ನೇತೃತ್ವದ ಸಭೆಯಲ್ಲಿ ಭಾಗವಹಿಸುವುದನ್ನು ಇದುವರೆಗೆ ಖಚಿತಪಡಿಸಿದ ಪಕ್ಷಗಳು ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ.
ಜೆಎಂಎಂ ಪರವಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಆರ್ಜೆಡಿಯನ್ನು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರತಿನಿಧಿಸಲಿದ್ದಾರೆ. ಹಾಗೆಯೇ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಕೂಡ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಟಿಎಂಸಿ ಪರವಾಗಿ ಪಕ್ಷದ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರೇನ್ ಪ್ರತಿನಿಧಿಯಾಗಿ ಪಾಲ್ಗೊಳ್ಳಲಿದ್ದಾರೆ.
“ಕಳೆದ ಕೆಲವು ದಿನಗಳಿಂದ ಸಂಸತ್ತಿನ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ವಿದ್ಯಮಾನಗಳು ಪ್ರತಿಪಕ್ಷಗಳ ಒಗ್ಗಟ್ಟನ್ನು ಒಂದೊಂದಾಗಿ ರೂಪಿಸುತ್ತಿದೆ. ಈ ಹಿನ್ನಲೆ ಪ್ರತಿಯೊಂದು ವಿರೋಧ ಪಕ್ಷವೂ ಒಂದಲ್ಲ ಒಂದು ವಿಚಾರದಲ್ಲಿ ಮುಂದಾಳತ್ವ ವಹಿಸಬಹುದು. ಸಾಮಾಜಿಕ ನ್ಯಾಯದ ವಿಷಯದಲ್ಲಿ, ಈಗ ಸ್ವಾಭಾವಿಕವಾಗಿ ಡಿಎಂಕೆಯ ಸರದಿಯಾಗಿದೆ”ಎಂದು ವಿಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ಜೊತೆಯಾಗಿ ಗುರುತಿಸಿಕೊಂಡಿದ್ದ ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿಯತ್ತಲು ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದಾರೆ. ಪಟ್ನಾಯಕ್ ಅವರು ಕಳೆದ ಭಾನುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಬಿಜೆಪಿ ವಿರೋಧಿ ನಿಲುವನ್ನು ಸಾರ್ವಜನಿಕವಾಗಿ ತಿಳಿಸಿದ್ದರು.
ರಾಹುಲ್ ಗಾಂಧಿಯವರನ್ನು ಲೋಕಸಭಾ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ನಂತರ ಭಿನ್ನಾಭಿಪ್ರಾಯ ಹೊಂದಿದ್ದ ವಿಪಕ್ಷಗಳು ಕೂಡ ಕಾಂಗ್ರೆಸ್ ಜೊತೆ ಸೇರಿ ಒಗ್ಗಟ್ಟು ಪ್ರದರ್ಶಿಸುತ್ತಿವೆ.
ಕಳೆದ ಶುಕ್ರವಾರ, ಕಾಂಗ್ರೆಸ್, ಡಿಎಂಕೆ, ಬಿಆರ್ಎಸ್, ಎಎಪಿ, ಜೆಡಿಯು, ಆರ್ಜೆಡಿ, ಎಸ್ಪಿ, ಉದ್ಧವ್ ಠಾಕ್ರೆಯ ಶಿವಸೇನೆ, ಸಿಪಿಐ, ಸಿಪಿಐಎಂ ಸೇರಿ 14 ವಿರೋಧ ಪಕ್ಷಗಳು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು “ಆಯ್ದ ಮತ್ತು ಉದ್ದೇಶಿತ” ಬಳಕೆಗೆ ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿವೆ. ಏಪ್ರಿಲ್ 5 ರಂದು ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ.