- 2002ರ ಗುಜರಾತ್ ಗಲಭೆಗಳನ್ನು ಒಳಗೊಂಡಿರುವ ಸಾಕ್ಷ್ಯಚಿತ್ರ
- ಭಾರತದಲ್ಲಿ ಬಿಡುಗಡೆಗೂ ಮೊದಲೇ ನಿಷೇಧಿಸಿದ್ದ ಕೇಂದ್ರ ಸರ್ಕಾರ
ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮಹಾರಾಷ್ಟ್ರವು ಗಲಭೆ ಕುರಿತ ನಿರ್ಣಯ ಅಂಗೀಕರಿಸಿದ ಬಿಜೆಪಿ ಆಡಳಿತದ ನಾಲ್ಕನೇ ರಾಜ್ಯ. ವಿಪಕ್ಷಗಳ ವಿರೋಧದ ನಡುವೆಯೇ ಈ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಶನಿವಾರ (ಮಾ.26) ಬಿಜೆಪಿ ಶಾಸಕ ಅತುಲ್ ಭಟ್ಕಳಕರ್ ಮಂಡಿಸಿದ ನಿರ್ಣಯವನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಕಲಾಪ ಕೈಗೆತ್ತಿಕೊಂಡಾಗ ಪ್ರತಿಪಕ್ಷಗಳು ಸದನದಲ್ಲಿ ಹಾಜರಿರಲಿಲ್ಲ.
ಮಾರ್ಚ್ 23ರಂದು, ಅಸ್ಸಾಂ ವಿಧಾನಸಭೆಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು. ಸಾಕ್ಷ್ಯಚಿತ್ರವು ನಿರ್ಣಯ ಮಂಡಿಸಿದ ಬಿಜೆಪಿ ಶಾಸಕ ಭುಬೊನ್ ಪೆಗು “ದುರುದ್ದೇಶಪೂರಿತ, ಅಪಾಯಕಾರಿ ಕಾರ್ಯಸೂಚಿಯ ವಿರುದ್ಧ ಧಾರ್ಮಿಕ ಸಮುದಾಯಗಳನ್ನು ಪ್ರಚೋದಿಸುತ್ತದೆ ಹಾಗೂ ಭಾರತದ ಜಾಗತಿಕ ಸ್ಥಾನಮಾನ ಹಾಳುಮಾಡುತ್ತದೆ. ಇದಕ್ಕೆ ಅಗತ್ಯ ಸಂಭವನೀಯ ಕ್ರಮ ಜರುಗಿಸಬೇಕೆಂದು” ಒತ್ತಾಯಿಸಲಾಯಿತು. ರಾಜ್ಯ ವಿಧಾನಸಭೆಗೆ ಸಂಬಂಧಿಸಿದ ಪ್ರಶ್ನೆಯಲ್ಲ ಎಂದು ಕಾಂಗ್ರೆಸ್ ಶಾಸಕ ದೇಬದ್ರತಾ ಸೈಕಿಯಾ ಅವರು ನಿರ್ಣಯವನ್ನು ಖಂಡಿಸಿದರು.
ಈ ಸುದ್ದಿ ಓದಿದ್ದೀರಾ? ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ
ಮಾರ್ಚ್ 13ರಂದು, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶೈಲೇಂದ್ರ ಜೈನ್, ಖಾಸಗಿ ಸದಸ್ಯರ ನಿರ್ಣಯವನ್ನು ಮಂಡಿಸಿದರು ಮತ್ತು ಸಚಿವ ನರೋತ್ತಮ್ ಮಿಶ್ರಾ ಅವರು ಅನುಮೋದಿಸಿದ ನಂತರ ರಾಜ್ಯ ಶಾಸಕಾಂಗವು ಬಿಬಿಸಿ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿತು.
ಮಾರ್ಚ್ 11ರಂದು ಗುಜರಾತ್ ವಿಧಾನಸಭೆಯು ಸಾಕ್ಷ್ಯಚಿತ್ರದ ವಿರುದ್ಧ ನಿರ್ಣಯ ಮಂಡಿಸಿದ ಮೊದಲನೆಯ ರಾಜ್ಯವಾಗಿದೆ. ಬಿಜೆಪಿಯ ಸೋಜಿತ್ರಾ ಶಾಸಕ ವಿಪುಲ್ ಪಟೇಲ್ ಮಂಡಿಸಿದ ಖಾಸಗಿ ಸದಸ್ಯರ ನಿರ್ಣಯವನ್ನು ಆಡಳಿತ ಪಕ್ಷದ ಶಾಸಕರು ಸುಮಾರು 90 ನಿಮಿಷಗಳ ಕಾಲ ಚರ್ಚಿಸಿದ ನಂತರ ಅಂಗೀಕರಿಸಲಾಯಿತು. ಆಡಳಿತ ಪಕ್ಷದ ನಿರ್ಣಯಕ್ಕೆ ಕಾಂಗ್ರೆಸ್ ಶಾಸಕರು ವಿರೋಧಿಸಿದ್ದರು.
2002ರ ಗುಜರಾತ್ ಗಲಭೆಗಳನ್ನು ಒಳಗೊಂಡಿರುವ ‘ಇಂಡಿಯಾ: ದಿ ಮೋದಿ ಕ್ವಷ್ಚನ್’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ಬಿಬಿಸಿ ತಯಾರಿಸಿದೆ. ಗುಜರಾತ್ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಟೀಕಿಸಲಾತ್ತು. ಸಾಕ್ಷ್ಯಚಿತ್ರವನ್ನು 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಈ ವಿವಾದಿತ ಸಾಕ್ಷ್ಯಚಿತ್ರವನ್ನು ಬಿಡುಗಡೆಗೂ ಮೊದಲೇ ಕೇಂದ್ರ ಸರ್ಕಾರ ನಿಷೇಧಿಸಿತ್ತು.