ಆರು ವರ್ಷದ ಬಾಲಕಿಯನ್ನು ಸ್ವತಃ ತಂದೆಯೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ಅಲಪ್ಪುಝ ಜಿಲ್ಲೆಯ ಮಾವೇಲಿಕ್ಕರ ಎಂಬಲ್ಲಿ ನಡೆದಿದೆ.
ಆರೋಪಿ ಶ್ರೀಮಹೇಶ್ (38) ಎಂಬಾತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಆಗಮಿಸಿದ್ದ ಶ್ರೀಮಹೇಶ್, ಪುತ್ರಿ ನಕ್ಷತ್ರಾಳನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಈ ವೇಳೆ ಬಾಲಕಿಯ ಚೀರಾಟ ಕೇಳಿ ನೆರವಿಗೆ ಧಾವಿಸಿದ್ದ ತನ್ನ ತಾಯಿ ಸುನಂದಾ (62) ಅವರ ಮೇಲೂ ಶ್ರೀಮಹೇಶ್ ಹಲ್ಲೆ ನಡೆಸಿದ್ದು, ಆಕೆಯ ಕೈಗಮತ್ತು ಕತ್ತಿನ ಭಾಗದಲ್ಲಿ ಗಾಯಗಳಾಗಿವೆ.
ʻತಾಯಿಯ ಮನೆಗೆ ಹೋಗಬೇಕೆಂದು ಮಗಳು ಹಠ ಹಿಡಿದ ಕಾರಣ ಅವಳನ್ನು ಕೊಲೆ ಮಾಡಿದೆʼ ಎಂದು ಆರೋಪಿ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಎರಡು ವರ್ಷಗಳ ಹಿಂದೆ ಮೃತ ಬಾಲಕಿಯ ತಾಯಿ ವಿದ್ಯಾ ಆತ್ಮಹತ್ಯೆಗೆ ಶರಣಾಗಿದ್ದರು.
ಪೊಲೀಸ್ ಅಧಿಕಾರಿಯೊಬ್ಬರ ಜೊತೆ ಆರೋಪಿ ಶ್ರೀಮಹೇಶ್ಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಕಾರಣಾಂತರಗಳಿಂದ ಆ ಮದುವೆ ಇತ್ತೀಚೆಗೆ ರದ್ದಾಗಿತ್ತು.
ವಿಚಾರಣೆ ವೇಳೆ ಆತ್ಮಹತ್ಯೆಗೆ ಯತ್ನ
ತನ್ನ ಆರು ವರ್ಷದ ಮಗಳನ್ನು ಕೊಂದ ಆರೋಪ ಹೊತ್ತಿರುವ ಶ್ರೀಮಹೇಶ್, ಪೊಲೀಸ್ ವಿಚಾರಣೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಕತ್ತು ಸೀಳಲು ಪ್ರಯತ್ನಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.