- ಮಹಿಳೆ ತಲೆಯನ್ನು ಹೈದರಾಬಾದ್ ಮುಸಿ ನದಿ ಬಳಿ ಎಸೆದಿದ್ದ ಆರೋಪಿ
- ₹7 ಲಕ್ಷ ಸಾಲ ಹಿಂತಿರುಗಿಸುವಂತೆ ಆರೋಪಿ ಜತೆ ಜಗಳವಾಡಿದ್ದ ಮಹಿಳೆ
ಇಡೀ ದೇಶವನ್ನೇ ಒಂದು ಕ್ಷಣ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಾದರಿಯಲ್ಲೇ ಹೈದರಾಬಾದ್ ನಗರದಲ್ಲಿ ಮತ್ತೊಂದು ಪ್ರಕರಣ ಬುಧವಾರ (ಮೇ 24) ವರದಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶ್ರದ್ಧಾ ವಾಕರ್ ಪ್ರಕರಣದಂತೆ ಹೈದರಾಬಾದ್ನಲ್ಲಿ ತನ್ನ ಜೊತೆಯಲ್ಲಿದ್ದ ಸಂಗಾತಿಯನ್ನು ಹತ್ಯೆ ಮಾಡಿ ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್ನಲ್ಲಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿ. ಚಂದ್ರಮೋಹನ್ (48) ಎಂದು ಗುರುತಿಸಲಾಗಿದೆ.
ಹೈದರಾಬಾದ್ ಮುಸಿ ನದಿ ಬಳಿ ಮೇ 17 ರಂದು ಮಹಿಳೆಯ ಶಿರವೊಂದು ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಹತ್ಯೆಯ ವಿಷಯ ತಿಳಿದು ಬಂದಿದೆ.
“ಸ್ಟಾಕ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಆರೋಪಿ ಚಂದ್ರಮೋಹನ್ ತನ್ನ ಜೊತೆ ಕಳೆದ 15 ವರ್ಷಗಳಿಂದ 55 ವರ್ಷದ ಅನುರಾಧ ರೆಡ್ಡಿ ನಗರದ ಚೂತನ್ಯಪುರಿ ಕಾಲೋನಿಯಲ್ಲಿ ವಾಸವಾಗಿದ್ದರು.”
“ಬಡ್ಡಿಗೆ ಸಾಲ ನೀಡುತ್ತಿದ್ದ ಅನುರಾಧ ಅವರು ಚಂದ್ರಮೋಹನ್ಗೂ ₹7 ಲಕ್ಷ ಸಾಲ ನೀಡಿದ್ದರು. ಹಣ ಹಿಂತಿರುಗಿಸುವಂತೆ ಅನುರಾಧ ಆತನಿಗೆ ಒತ್ತಾಯಿಸಿದ್ದರು. ಈ ಸಂಬಂಧ ಇಬ್ಬರ ನಡುವೆ ಜಗಳವಾಗಿತ್ತು”.
“ಮೇ 12 ರಂದು ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ಆರೋಪಿ ಚಂದ್ರಮೋಹನ್ ಅನುರಾಧ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಅವರು ಮೃತಪಟ್ಟಿದ್ದಾರೆ”.
“ಬಳಿಕ ಆರೋಪಿಯು ಸಣ್ಣ ಕಲ್ಲು ತುಂಡರಿಸುವ ಯಂತ್ರದಿಂದ ಮಹಿಳೆಯ ದೇಹವನ್ನು ತುಂಡರಿಸಿದ್ದ. ತಲೆ ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ಸುತ್ತಿಟ್ಟಿದ್ದನು. ಕೈ, ಕಾಲುಗಳನ್ನು ಕತ್ತರಿಸಿ ಫ್ರಿಡ್ಜ್ನಲ್ಲಿ ಇರಿಸಿದ್ದನು” ಎಂದು ಆಗ್ನೇಯ ವಲಯ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಸಿ.ಎಚ್.ರೂಪೇಶ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಾಸ್ಪೋರ್ಟ್ ಪಡೆಯಲು ರಾಹುಲ್ ಮನವಿ; ವಿಚಾರಣೆ ಮುಂದೂಡಿದ ನ್ಯಾಯಾಲಯ
“ಮೇ 15 ರಂದು ಆಟೊದಲ್ಲಿ ತೆರಳಿ ತಲೆಯನ್ನು ಮುಸಿ ನದಿ ಬಳಿ ಬಿಸಾಡಿದ್ದ. ಅಲ್ಲದೆ ಫಿನಾಯಿಲ್, ಕರ್ಪೂರ ಮತ್ತು ಅಗರಬತ್ತಿಗಳನ್ನು ತಂದು ದೇಹದ ಭಾಗಗಳಿಗೆ ಸಿಂಪಡಿಸಿ ದುರ್ನಾತ ಬರದಂತೆ ಮಾಡಿದ್ದನು. ಆರೋಪಿ ದೇಹದ ಭಾಗಗಳನ್ನು ವಿಲೇವಾರಿ ಮಾಡುವ ಬಗ್ಗೆ ಯೂಟ್ಯೂಬ್ ದೃಶ್ಯಗಳನ್ನು ನೋಡಿದ್ದ” ಎಂದು ಪೊಲೀಸರು ಹೇಳಿದರು.
ಅನುರಾಧ ಇನ್ನೂ ಬದುಕಿದ್ದಾರೆ ಎಂದು ಬಿಂಬಿಸಲು ಆರೋಪಿಯು ಹೈದರಾಬಾದ್ ನಗರದ ಮಹಿಳೆಯ ಪರಿಚಯಸ್ಥರಿಗೆ ಆಕೆಯ ಮೊಬೈಲ್ನಿಂದ ಆಗಾಗ್ಗೆ ಸಂದೇಶ ಕಳುಹಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.