ಪ್ರತಿಭಟನಾನಿರತ ಕುಸ್ತಿಪಟುಗಳ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೇಳಿದಾಗ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಎದ್ದುಬಿದ್ದು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಹರಿದ್ವಾರದ ಗಂಗಾ ನದಿಯಲ್ಲಿ ಮಂಗಳವಾರ (ಮೇ 30) ತಮ್ಮ ಪದಕಗಳನ್ನು ಎಸೆಯಲು ಹೋದ ಪ್ರತಿಭಟನಾನಿರತ ಕುಸ್ತಿಪಟುಗಳ ವಿಷಯದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೇಳಿದಾಗ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಎದ್ದುಬಿದ್ದು ಓಡಿ ಹೋದ ಪ್ರಸಂಗ ನಡೆಯಿತು. ಘಟನೆಯ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಚಿವರ ಕ್ರಮವನ್ನು ಟೀಕಿಸಿವೆ.
“ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಬಗ್ಗೆ ನೀವು ಏನು ಹೇಳುತ್ತೀರಿ?” ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ ತನ್ನ ಸಹಾಯಕರೊಂದಿಗೆ, “ಹೊರಡಿ, ಹೊರಡಿ” ಎಂದು ಹಿಂದಿಯಲ್ಲಿ ಹೇಳುತ್ತಾ ಸಚಿವೆ ತನ್ನ ಕಾರಿನತ್ತ ಧಾವಿಸಿದರು.
ಮೊದಲು “ಪ್ರತಿಭಟಿಸುವ ಕುಸ್ತಿಪಟುಗಳ ಬಗ್ಗೆ ನೀವು ಏನು ಹೇಳುತ್ತೀರಿ?” ಎಂದು ಸಚಿವರನ್ನು ಕೇಳಲಾಯಿತು. “ಕಾನೂನು ಪ್ರಕ್ರಿಯೆ ನಡೆಯುತ್ತಿದೆ” ಎಂದು ಮೀನಾಕ್ಷಿ ಲೇಖಿ ಉತ್ತರಿಸಿದರು. ಕುಸ್ತಿಪಟುಗಳು ಮಂಗಳವಾರ ಹರಿದ್ವಾರಕ್ಕೆ ತೆರಳುವ ಮೊದಲು ಈ ಸಂವಾದ ನಡೆದಿದೆ. ಪದಕಗಳನ್ನು ಎಸೆಯುವ ಯೋಜನೆ ಕುರಿತು ಪ್ರಶ್ನೆ ಕೇಳಿದಾಗ ಸಚಿವರು ಎದ್ದು ಬಿದ್ದು ಓಡಿದರು.
ಸಚಿವರು ಓಡಿದ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್, “ಮಹಿಳಾ ಕುಸ್ತಿಪಟುಗಳ ವಿಚಾರವಾಗಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಕಳೆದ ವರ್ಷ 10ನೇ ತರಗತಿಯಲ್ಲಿ 27 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣ; ಕೇಂದ್ರ ಶಿಕ್ಷಣ ಸಚಿವಾಲಯ ಮಾಹಿತಿ
ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ದೆಹಲಿಯಲ್ಲಿ 37 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ, ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದನ್ನು ನಿರ್ಧರಿಸಿದ್ದರು.
ಆದರೆ, ರೈತ ಮುಖಂಡ ನರೇಶ್ ಟಿಕಾಯತ್ ಪದಕಗಳನ್ನು ಎಸೆಯದಂತೆ ಕುಸ್ತಿಪಟುಗಳನ್ನು ತಡೆದರು. ಪ್ರತಿಭಟನಾಕಾರರು ತಮ್ಮ ಬೇಡಿಕೆಯನ್ನು ಈಡೇರಿಸಲು ಸರಕಾರಕ್ಕೆ ಐದು ದಿನಗಳ ಗಡುವು ನೀಡಿದ್ದಾರೆ. ಈ ನಡುವೆ ಕುಸ್ತಿಪಟುಗಳನ್ನು ಬೆಂಬಲಿಸಿ ಜೂನ್ 1ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.