- ರೈಲುಗಳ ಉದ್ಘಾಟನೆಯಲ್ಲಿ ನಿರತರಾಗಿರುವ ಮೋದಿ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕೆ
- ಒಡಿಶಾದ ಬಾಲಾಸೋರ್ನ ಬಹನಾಗ ಬಜಾರ್ ನಿಲ್ದಾಣದ ಬಳಿ ತ್ರಿವಳಿ ರೈಲು ಅಪಘಾತ
ಒಡಿಶಾ ತ್ರಿವಳಿ ರೈಲು ದುರಂತಕ್ಕೆ ರೈಲ್ವೆ ಸುರಕ್ಷತಾ ವ್ಯವಸ್ಥೆಯಲ್ಲಿ ಲೋಪವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ (ಜೂನ್ 4) ಟೀಕಾಪ್ರಹಾರ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಖರ್ಗೆ, “ರೈಲ್ವೆ ಸುರಕ್ಷತೆ ನೋಡಿಕೊಳ್ಳುವುದನ್ನು ಹೊರತುಪಡಿಸಿ ಜಾಹೀರಾತು ಮೊದಲಾದವುಗಳ ಮೂಲಕ ನಡೆಸುತ್ತಿರುವ ಪ್ರಚಾರದ ಗೀಳಿನಿಂದ ಪ್ರಧಾನಿ ಮೋದಿ ಸರ್ಕಾರದ ಆಡಳಿತ ವ್ಯವಸ್ಥೆ ಪೊಳ್ಳಾಗಿದೆ” ಎಂದು ಕುಟುಕಿದ್ದಾರೆ.
ರೈಲ್ವೆ ಸುರಕ್ಷತೆಗೆ ಆದ್ಯತೆ ನೀಡುವುದರ ಬದಲಿಗೆ ಪ್ರಧಾನಿ ಮೋದಿ ಅವರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರುವುದರಲ್ಲಿ ನಿರತರಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನಿಗಾ ವಹಿಸಲು ಕೆಳಸ್ತರದಿಂದ ಉನ್ನತ ವರ್ಗದ ಹುದ್ದೆಗಳ ವರೆಗೂ ಎಲ್ಲ ಜವಾಬ್ದಾರಿಯ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಖರ್ಗೆ ಮೋದಿ ಅವರಿಗೆ ಒತ್ತಾಯಿಸಿದರು.
“ರೈಲ್ವೆ ಇಲಾಖೆಯಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರಧಾನ ಮಂತ್ರಿ ಕಚೇರಿ ಮೂಲಕ ನೇಮಕವಾಗುವ ಉನ್ನತ ಹುದ್ದೆಗಳೂ ಖಾಲಿ ಇವೆ. ಕಳೆದ ಒಂಬತ್ತು ವರ್ಷಗಳಲ್ಲಿ ಈ ಹುದ್ದೆಗಳನ್ನು ಏಕೆ ಭರ್ತಿ ಮಾಡಿಲ್ಲ?” ಎಂದು ಖರ್ಗೆ ಪ್ರಶ್ನಿಸಿದರು.
ಮಾನವ ಸಂಪನ್ಮೂಲದ ತೀವ್ರ ಕೊರತೆಯಿಂದಾಗಿ ಲೋಕೊ ಪೈಲಟ್ಗಳ ದೀರ್ಘಾವಧಿಯ ಕೆಲಸದ ಅವಧಿಯು ಹೆಚ್ಚುತ್ತಿರುವ ಅಪಘಾತಗಳಿಗೆ ಮುಖ್ಯ ಕಾರಣ ಎಂದು ರೈಲ್ವೆ ಮಂಡಳಿಯು ಇತ್ತೀಚೆಗೆ ಒಪ್ಪಿಕೊಂಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದರು.
ಸಂಸದೀಯ ಸ್ಥಾಯಿ ಸಮಿತಿಯು ತನ್ನ 323 ನೇ ವರದಿಯಲ್ಲಿ ರೈಲ್ವೆ ಸುರಕ್ಷತಾ ಆಯೋಗದ (ಸಿಆರ್ಎಸ್) ಶಿಫಾರಸುಗಳ ಬಗ್ಗೆ ರೈಲ್ವೆ ಮಂಡಳಿಯು ತೋರಿದ ನಿರ್ಲಕ್ಷ್ಯಕ್ಕಾಗಿ ರೈಲ್ವೆಯನ್ನು ಟೀಕಿಸಿದೆ ಎಂದು ಖರ್ಗೆ ಟ್ವೀಟ್ನಲ್ಲಿ ಹೇಳಿದ್ದಾರೆ.
“ಇತ್ತೀಚಿನ ಸಿಎಜಿ ಲೆಕ್ಕಪರಿಶೋಧನಾ ವರದಿಯ ಪ್ರಕಾರ, 2017-18 ಮತ್ತು 2020-21 ರ ನಡುವೆ ಸಂಭವಿಸಿದ ಸುಮಾರು 10 ರೈಲು ಅಪಘಾತಗಳಲ್ಲಿ ಏಳು ರೈಲು ಹಳಿತಪ್ಪುವಿಕೆಯಿಂದಾಗಿ ಸಂಭವಿಸಿವೆ” ಎಂದು ಖರ್ಗೆ ಹೇಳಿದರು.
“ಸಿಎಜಿ ವರದಿ ಪ್ರಕಾರ ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶದಲ್ಲಿ (ಆರ್ಆರ್ಎಸ್ಕೆ) ಪ್ರತಿ ವರ್ಷ ₹20,000 ಕೋಟಿ ಲಭ್ಯವಾಗಬೇಕು. ಆದರೆ ಶೇಕಡಾ 79 ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ. ಹಳಿಗಳ ನವೀಕರಣ ಕಾಮಗಾರಿಯ ಮೊತ್ತದಲ್ಲಿ ಏಕೆ ಭಾರೀ ಕುಸಿತವಾಗಿದೆ?” ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಒಡಿಶಾ ರೈಲು ದುರಂತ | ರೈಲು ಹಳಿ ಜೋಡಣೆ ಕಾರ್ಯಕ್ಕೆ ವೇಗ, ಸಾವಿರಾರು ಕಾರ್ಮಿಕರು ಭಾಗಿ
ಸುಮಾರು 2,500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಒಡಿಶಾದ ಬಾಲಾಸೋರ್ನ ಬಹನಾಗ ಬಜಾರ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕನಿಷ್ಠ 288 ಜನರು ಮೃತಪಟ್ಟಿದ್ದಾರೆ. 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಸುಮಾರು ಮೂರು ದಶಕಗಳಲ್ಲಿ ಭಾರತದಲ್ಲಿ ನಡೆದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ.