ದಾಬೋಲ್ಕರ್ ರೀತಿಯಲ್ಲಿ ಕೊಲ್ಲುವುದಾಗಿ ಬೆದರಿಕೆ
ಆರೋಪಿ ಪತ್ತೆಗೆ ಬಲೆ ಬೀಸಿದ ಮುಂಬೈ ಪೊಲೀಸರು
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ದಾಬೋಲ್ಕರ್ ರೀತಿಯಲ್ಲೇ ನಿಮ್ಮನ್ನು ಕೊಲ್ಲುತ್ತೇವೆ ಎಂದು ಆರೋಪಿ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಕಳುಹಿಸಿದ್ದಾನೆ. ಜೀವ ಬೆದರಿಕೆ ಎದುರಾದ ಬೆನ್ನಲ್ಲೇ ರಾಜ್ಯ ಸರ್ಕಾರ ಅವರ ಭದ್ರತೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಬೆದರಿಕೆಗಳಿಗೆ ನಾನು ತಲೆ ಕಡೆಸಿಕೊಳ್ಳಲ್ಲ ಎಂದಿದ್ದಾರೆ.
ಮೊಘಲ್ ದೊರೆ ಔರಂಗ್ಜೇಬ್ ಮತ್ತು ಟಿಪ್ಪು ಸುಲ್ತಾನ್ ಇಬ್ಬರನ್ನೂ ವೈಭವೀಕರಿಸಿ ಕೊಲ್ಲಾಪುರದ ಮೂವರು ಅಪ್ರಾಪ್ತ ಬಾಲಕರು ಕಳೆದ ಮಂಗಳವಾರ ವಾಟ್ಸಪ್ನಲ್ಲಿ ಸ್ಟೆಟಸ್ ಹಾಕಿಕೊಂಡು ಮತ್ತು ಆಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದರು. ಇದನ್ನು ವಿರೋಧಿಸಿ ಬಲಪಂಥೀಯ ಸಂಘಟನೆಗಳು ಬುಧವಾರ ಕೊಲ್ಲಾಪುರದ ಶಿವಾಜಿ ಚೌಕ್ ಬಳಿ ನಡೆಸಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ದಾಂಧಲೆ ಎಬ್ಬಿಸಿದ್ದರು. ಇದೇ ಹೊತ್ತಿನಲ್ಲಿ ಕೆಲವರು ದುಷ್ಕರ್ಮಿಗಳು ಅಂಗಡಿ ಮುಂಗಟ್ಟುಗಳನ್ನು ದೋಚಿ ಪರಾರಿಯಾಗಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಸ್ಥಳೀಯ ಪೋಲಿಸರು ಲಾಠಿ ಚಾರ್ಜ್ ಕೂಡ ನಡೆಸಿದ್ದರು. ಶರದ್ ಪವಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಘಟನೆಯನ್ನು ಖಂಡಿಸಿದ್ದರು.
ಇದೇ ಕಾರಣಕ್ಕೆ ಮಹಾರಾಷ್ಟ್ರದ ಅಮ್ರಾವತಿ ಮೂಲದ ಸೌರಭ್ ಪಿಂಪಲ್ಕರ್ ಎಂಬಾತ ಫೇಸ್ಬುಕ್ನಲ್ಲಿ ʼದಾಬೋಲ್ಕರ್ಗೆ ಆದ ಗತಿಯೇ ನಿಮಗೂ ಬರುತ್ತದೆʼ ಎಂದು ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಆತ ಬಿಜೆಪಿ ಕಾರ್ಯಕರ್ತ ಎಂದು ಎನ್ಸಿಪಿ ಮುಖಂಡ ಅಜಿತ್ ಪವಾರ್ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮುಂಬೈನ ಎಲ್.ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ತಮಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್, “ಯಾವುದೇ ಪಕ್ಷದ ನಿಲುವುಗಳ ಬಗ್ಗೆ ಮಾತನಾಡಲು ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ. ಹೀಗಿರುವಾಗ ನನ್ನ ಧ್ವನಿಯನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದರೆ, ಅದು ತಪ್ಪುಗ್ರಹಿಕೆಯಷ್ಟೇ. ನನಗೆ ಪೊಲೀಸ್ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಾರೆ ಎಂಬ ನಂಬಿಕೆ ನನಗಿದೆ. ಹೀಗಾಗಿ ನಾನು ಇಂತಹ ಬೆದರಿಕೆಗಳಿಗೆ ಹೆಚ್ಚು ತಲೆಕಡೆಸಿಕೊಳ್ಳುವುದಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತ್ತೆ 3 ಸಾವಿರ ಪರದೆಗಳ ಮೇಲೆ ರಾರಾಜಿಸಲು ಸಜ್ಜಾದ ʼಪಠಾಣ್ʼ
ಬಿಜೆಪಿ ಕಾರ್ಯಕರ್ತ ಫೇಸ್ಬುಕ್ನಲ್ಲಿ ಜೀವ ಬೇದರಿಕೆ ಹಾಕಿದ ಬೆನ್ನಲ್ಲೇ ಶರದ್ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರಿಗೂ ಬೆದರಿಕೆ ಸಂದೇಶ ಬಂದಿದೆ. ಸುಪ್ರಿಯಾ ಅವರ ವಾಟ್ಸಪ್ಗೆ ಬೆದರಿಕೆ ಸಂದೇಶ ಕಳುಹಿಸಿರುವ ಅಪರಿಚಿತರು ನಿಮ್ಮ ತಂದೆಯನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಗಳ ಬೆನ್ನಲ್ಲೇ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಸುಪ್ರಿಯಾ, “ಮಹಾರಾಷ್ಟ್ರ ಮತ್ತು ಕೇಂದ್ರದ ಗೃಹ ಮಂತ್ರಿಗಳು ಈ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಬೆದರಿಕೆ ಪ್ರಕರಣದ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕ್ನಾಥ್ ಶಿಂಧೆ ಪ್ರತಿಕ್ರಿಯಿಸಿದ್ದು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೊತೆಗೆ ಶರದ್ ಪವಾರ್ ಅವರ ಭದ್ರತೆಯನ್ನು ಹೆಚ್ಚಿಸುವಂತೆಯೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.